ಶ್ರೀಕ್ಷೇತ್ರ ಹೊಂಬುಜದಲ್ಲಿ ದಶಲಕ್ಷಣ ಮಹಾಪರ್ವ ಆಚರಣೆ ; ಅನಂತಗುಣ ಪ್ರಾಪ್ತಿಗಾಗಿ ಷೋಡಶಭಾವ ಪೂಜೆ

0 288

ರಿಪ್ಪನ್‌ಪೇಟೆ: ಜೀವನದಲ್ಲಿ ಪ್ರತಿಯೋರ್ವರೂ ಅನಂತಗುಣಗಳ ಪ್ರಾಪ್ತಿಗಾಗಿ ಷೋಡಶಭಾವ ಪೂಜೆ ಸಲ್ಲಿಸುತ್ತಾರೆ. ಭಾದ್ರಪದ ಚತುರ್ದಶಿಯಂದು ಅನಂತನಾಥ ತೀರ್ಥಂಕರರ ಪೂಜೆ ಮತ್ತು ನೋಂಪಿ ಆಚರಿಸುವ ಜೈನ ಧರ್ಮೀಯರು ಮೋಹ ವಿಮುಕ್ತರಾಗಿ ಸತ್ಯಯುತ ದೈನಂದಿನ ಕಾರ್ಯಗಳಲ್ಲಿ ತಲ್ಲೀನರಾಗುತ್ತಾರೆ ಎಂದು ಹೊಂಬುಜ ಅತಿಶಯ ಶ್ರೀಕ್ಷೇತ್ರದಲ್ಲಿ ಪರ್ಯೂಷಣ ಪರ್ವ ಮತ್ತು ಅನಂತಚತುರ್ದಶಿ ಪೂಜಾ ವಿಧಿಗಳ ಮಹತ್ವವನ್ನು ಹೊಂಬುಜ ಪೀಠಾಧೀಶರಾದ ಜಗದ್ಗುರು ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ತಿಳಿಸಿದರು.


ರಿಪ್ಪನ್‌ಪೇಟೆ ಸಮೀಪದ ಹೊಂಬುಜ ಅತಿಶಯ ಮಹಾಕ್ಷೇತ್ರದಲ್ಲಿ ಶ್ರೀಮಹಾವೀರ ಭವನದಲ್ಲಿ ಪರ್ಯೂಷಣ ಪರ್ವ ಮತ್ತು ಶ್ರೀ ಅನಂತನಾಥ ತೀರ್ಥಂಕರರ ಆರಾಧನೆಯನ್ನು ಏರ್ಪಡಿಸಲಾಗಿದ್ದ ಧಾರ್ಮಿಕ ಕಾರ್ಯಕ್ರಮದ ಸಾನಿಧ್ಯವಹಿಸಿ ಆಶೀವರ್ಚನ ನೀಡಿ ವ್ರತ ನಿಯಮಗಳಪಾಲನೆ ಮತ್ತು ಪೂಜಾ ವಿಧಾನದಲ್ಲಿ ಸಮರ್ಪಿಸುವ ಫಲ-ಪುಷ್ಪ-ದ್ರವ್ಯಗಳಿಂದ ಕರ್ಮಕ್ಷಯಗೊಳ್ಳುವ ಉಲ್ಲೇಖ ಜೈನಾಗಮ ಗ್ರಂಥಗಳಲ್ಲಿ ದಾಖಲಾಗಿದೆ. ಪ್ರಸಕ್ತ ವಿದ್ಯಮಾನದಲ್ಲಿ ಜೈನಧರ್ಮೀಯರು ಏಕಾಗ್ರಚಿತ್ತದಿಂದ ಷೋಡಶಕಾರಣಭಾವ ಪೂಜೆ, ಸಂಗೀತ ಪೂಜೆಯಲ್ಲಿ ಪಾಲ್ಗೊಂಡು ಉತ್ತಮ ಭಾವವನ್ನು ಹೊಂದಬೇಕೆAದು ಶ್ರೀಗಳು ಅಪೇಕ್ಷಿಸಿ, ಹರಸಿದರು.


ಕ್ಷಮಾವಾಣಿ : ಶೋಭಾಯಾತ್ರೆ
“ವಿಶ್ವಮೈತ್ರಿ, ಕ್ಷಮಾಭಾವ ಸರ್ವತ್ರ ಸ್ಪುರಿಸಲಿ”

ರಿಪ್ಪನ್‌ಪೇಟೆ: ದಶಧರ್ಮಗಳ ಆರಾಧನೆಯ ಪರ್ಯೂಷಣ ಪರ್ವದ ಕೊನೆಯದಿನ ಸೆ. 29ರ ಶುಕ್ರವಾರದಂದು ಶ್ರೀಕ್ಷೇತ್ರದಲ್ಲಿ ಶ್ರಾವಕ-ಶ್ರಾವಕಿಯರು, ಭಕ್ತವೃಂದದವರು ನಗರದಲ್ಲಿ ನೆರವೇರಿಸುವ ಶ್ರೀ ಅನಂತನಾಥ ತೀರ್ಥಂಕರ ಬಿಂಬದ ಶೋಭಾಯಾತ್ರೆಗೆ ಹೊಂಬುಜ ಶ್ರೀಗಳು ಚಾಲನೆ ನೀಡಿದರು.


ರಿಪ್ಪನ್‌ಪೇಟೆ ಸಮೀಪದ ಹೊಂಬುಜ ಅತಿಶಯ ಮಹಾಕ್ಷೇತ್ರದಲ್ಲಿ ಅಯೋಜಿಸಲಾದ ಶ್ರೀ ಅನಂತನಾಥ ತೀರ್ಥಂಕರ ಬಿಂಬದ ಶೋಭಾಯಾತ್ರೆ ಕಾರ್ಯಕ್ರಮಕ್ಕೆ ಹೊಂಬುಜ ಮಠದ ಜಗದ್ಗುರು ಡಾ.ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮಿಜಿ ಚಾಲನೆ ನೀಡಿ ಅಶೀರ್ವಚನ ನೀಡಿ ದಶಧರ್ಮಗಳನ್ನು ಜೀವನದಲ್ಲಿ ರೂಢಿಸಿಕೊಂಡು ಜೀವನದಲ್ಲಿ ಯಶಸ್ವಿಯಾಗುವಂತೆ ಹರಸಿ ವಿಶ್ವದಲ್ಲೆಡೆ ಕ್ಷಮಾಭಾವದಿಂದ ಸಾಮರಸ್ಯ-ವಾತ್ಸಲ್ಯ ಗುಣಗಳು ಸ್ಪುರಿಸಲೆಂದು ಆಶಿಸುತ್ತಾ ಜೈನಾಗಮದಲ್ಲಿ ಉಲ್ಲೇಖಿಸಿದ ದಶಧರ್ಮಗಳು ಸರ್ವರಿಗೂ ದಾರಿದೀಪವಾಗಬೇಕು. ಉತ್ತಮ ಧರ್ಮ ಪರಿಪಾಲನೆಯೇ ಜೀವನದಲ್ಲಿ ಶಾಂತಿ ನೆಮ್ಮದಿ ಆರೋಗ್ಯ ಕ್ಷೇಮಂಕರ ಆಗಿರುತ್ತದೆ ಎಂದರು.

ಮಿಚ್ಛಾಮಿ ದುಕ್ಕಡಂ ಎಂದ ಶ್ರೀಗಳು ತೀರ್ಥಂಕರರ, ಯಕ್ಷ-ಯಕ್ಷಿಯರ, ಮುನಿ ಸಂಘದವರ ಆಶೀರ್ವಾದ ಸರ್ವರಿಗೂ ಲಭಿಸಲೆಂದು ಆಶೀರ್ವಚನ ಮಾಡಿದರು. ಶ್ರೀ ಪದ್ಮರಾಜ ಇಂದ್ರರವರು ಪೂಜಾ ವಿಧಾನಗಳ ಬಗ್ಗೆ ತಿಳಿಸಿದರು. ಧರಣೇಂದ್ರ, ಸವಿತಾ, ರಾಜಶ್ರೀರವರು ದಶಲಕ್ಷಣ ಪೂಜಾ ವಿಧಾನದ ಬಗ್ಗೆ ಅನಿಸಿಕೆಗಳನ್ನು ಹೇಳಿದರು.

Leave A Reply

Your email address will not be published.

error: Content is protected !!