ಇಂದೇ ಚುನಾವಣೆ ನಡೆದರೂ ಅವರಿಬ್ಬರಿಗಿಂತ ಒಂದು ಲಕ್ಷಕ್ಕೂ ಹೆಚ್ಚು ಮತದಿಂದ ಗೆಲ್ಲುತ್ತೇನೆ ; ಕೆ.ಎಸ್. ಈಶ್ವರಪ್ಪ

0 50

ಶಿಕಾರಿಪುರ : ಶಿವಮೊಗ್ಗ ಲೋಕಸಭಾ ಚುನಾವಣೆಯು ಇಂದೇ ನಡೆದರೂ ಬಿ.ವೈ. ರಾಘವೇಂದ್ರ ಹಾಗೂ ಗೀತಾ ಶಿವರಾಜ್‌ಕುಮಾರ್ ರವರಿಗಿಂತ ಹೆಚ್ಚಿನ ಮತ ಪಡೆದು ಗೆಲ್ಲುವ ವಿಶ್ವಾಸವನ್ನು ಪಕ್ಷೇತರ ಅಭ್ಯರ್ಥಿ ಕೆ.ಎಸ್‌. ಈಶ್ವರಪ್ಪ ವ್ಯಕ್ತಪಡಿಸಿದರು. 

ಪಟ್ಟಣದ ಎಸ್ ಎಸ್ ರಸ್ತೆಯಲ್ಲಿ ರಾಷ್ಟ್ರಭಕ್ತ ಬಳಗದ ನೂತನ ಕಛೇರಿಯನ್ನು ಉದ್ಘಾಟಿಸಿದ ನಂತರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಲಿಂಗಾಯತರ‌ ಓಟು, ಕಾಂಗ್ರೆಸ್ ಅಭ್ಯರ್ಥಿಯಾದ ಗೀತಾ ಶಿವರಾಜ್‌ಕುಮಾರ್ ಈಡಿಗರ ಓಟು ಹಾಕುತ್ತಾರೆ ಎಂಬ ಕಲ್ಪನೆಯಲ್ಲಿದ್ದಾರೆ‌. ಆದರೆ ನನಗೆ ಲಿಂಗಾಯತರ, ಈಡಿಗರ, ಹಿಂದುಳಿದ ವರ್ಗಗಳು ಸೇರಿದಂತೆ ಹಿಂದೂ ಧರ್ಮದ ಎಲ್ಲಾ ಸಮುದಾಯಗಳ ಜನರು ಮತ ಹಾಕುವ ಭರವಸೆ‌ ಇದ್ದು, ಬಿಜೆಪಿಯ ಅತಿಹೆಚ್ಚಿನ ಕಾರ್ಯಕರ್ತರು, ಕಾಂಗ್ರೆಸಿನ ಅನೇಕ ಮುಖಂಡರು ಕಾರ್ಯಕರ್ತರು ಅದೇ ರೀತಿ ಜೆಡಿಎಸ್ ನ ಕಾರ್ಯಕರ್ತರು ನನ್ನ ಸಂಪರ್ಕದಲ್ಲಿದ್ದಾರಲ್ಲದೇ, ಬೆಂಬಲಕ್ಕೆ ನಿಂತಿದ್ದಾರೆ. ಒಂದು ವೇಳೆ ಇಂದೇ ಚುನಾವಣೆ ನಡೆದರೂ ಇವರಿಗಿಂತ ಒಂದು ಲಕ್ಷಕ್ಕೂ ಹೆಚ್ಚು ಮತ ಪಡೆದು ಗೆಲ್ಲುತ್ತೇನೆ ಎಂಬ ಭರವಸೆ ಇದೆ ಎಂದರು.

ಮಾಜಿ ಸಚಿವರಾದ ಗೂಳಿಹಟ್ಟಿ ಶೇಖರ್ ನಾಮಪತ್ರ ಸಲ್ಲಿಸುವುದರಿಂದ ಹಿಡಿದು ಚುನಾವಣೆ ಮುಗಿಯೋವರೆಗೂ ಪ್ರಚಾರದಲ್ಲಿ ಪಾಲ್ಗೊಂಡು ನನ್ನನ್ನು ಗೆಲ್ಲಿಸುವುದಾಗಿ ಹೇಳಿ ನನ್ನ ಬೆಂಬಲಕ್ಕೆ ನಿಂತಿದ್ದಾರೆ. ನಾನು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದೇನೆ. ಜಿಲ್ಲೆಯ ಕಾಂಗ್ರೆಸ್ ಜೆಡಿಎಸ್ ಬಿಜೆಪಿ ಪಕ್ಷದ ಅನೇಕರು ಸ್ವಯಂ ಪ್ರೇರಿತರಾಗಿ ನನ್ನ ಬೆಂಬಲಕ್ಕೆ ನಿಂತಿದ್ದಾರೆ. ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಕೇವಲ 5 ಸಾವಿರ ಜನ ಸೇರುವ ನಿರೀಕ್ಷೆಯಿತ್ತು ಆದರೆ ಪತ್ರಿಕೆಯಲ್ಲಿ, ಟಿವಿಗಳಲ್ಲಿ, ಸಾಮಾಜಿಕ ಜಾಲತಾಣವಾದ ವಾಟ್ಸಾಪ್, ಫೇಸ್‍ಬುಕ್ ಗಳಲ್ಲಿ ಗಮನಿಸಿದ ಜನತೆ 35 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಪಾಲ್ಗೊಂಡಿದ್ದು, ನನಗೆ ಸ್ಪೂರ್ತಿ ಹಾಗೂ ಸಂತೋಷ ತಂದಿದೆ.

ಜಿಲ್ಲೆಯಾದ್ಯಂತ ಪ್ರತೀ ತಾಲ್ಲೂಕಿನ ಪ್ರತಿ ಗ್ರಾಮಗಳಲ್ಲಿ ಪ್ರವಾಸ ಮಾಡಿದ್ದು‌ ಎಲ್ಲರ ಬಾಯಲ್ಲೂ ನನಗೆ ಅನ್ಯಾಯವಾಗಿದೆ ನಾವು ನಿಮ್ಮ ಬೆಂಬಲಕ್ಕೆ ನಿಲ್ಲುತ್ತೇವೆ ಎಂಬ ಕೇಳಿಬರುತ್ತಿದೆ. ಬಿ.ಎಸ್. ಯಡಿಯೂರಪ್ಪರವರು ಹಿಂದುತ್ವವಾದಿಗಳಿಗೆ ಹಿಂದೆ ಸರಿಸುತ್ತಿದ್ದು, ಹಿಂದೂ ಧರ್ಮವನ್ನೂ ರಕ್ಷಿಸಲು ಮತ್ತು ಅಪ್ಪ ಮಕ್ಕಳ ಕೈಯಿಂದ ಬಿಜೆಪಿ ಪಕ್ಷವನ್ನು ಉಳಿಸಿ ಮೋದಿಯವರ ಕೈಬಲಪಡಿಸುವುದೇ ನನ್ನ ಧ್ಯೇಯವಾಗಿದೆ ಪಕ್ಷ ಕುಟುಂಬ ರಾಜಕಾರಣದ ವಿರುದ್ಧ ಕಣಕ್ಕಿಳಿಯುವ ನಿರ್ಧಾರವಾಗಿದೆ.

ತಾಲ್ಲೂಕಿನಲ್ಲಿ ಮೊದಲಿನಿಂದಲೂ ಹೊಂದಾಣಿಕೆ ರಾಜಕಾರಣ ನಡೆಯುತ್ತಿದ್ದು, ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಬಿ‌.ಎಸ್.ವೈ ರವರು ಲಿಂಗಾಯತ ಸಾದು ಸಮಾಜದ ನಾಗರಾಜ್ ಗೌಡರನ್ನ, ಹಿಂದುಳಿದ ವರ್ಗದ ಗೋಣಿ ಮಾಲತೇಶ್ ರವರನ್ನು ಅನ್ಯಾಯ ಮಾಡಿ ತಮ್ಮ ಪುತ್ರ ಬಿ.ವೈ. ವಿಜಯೇಂದ್ರನಿಗೆ ಗೆಲ್ಲಿಸಿಕೊಂಡರಲ್ಲದೇ,  ಬಿಜೆಪಿಯ ರಾಜ್ಯಾಧ್ಯಕ್ಷನನ್ನಾಗಿ ಮಾಡಿದರು. ಪ್ರತಿ ವಿಧಾನಸಭಾ ಚುನಾವಣೆಯಲ್ಲಿ 60 ಸಾವಿರಕ್ಕೂ ಹೆಚ್ಚಿನ ಅಂತರದಲ್ಲಿ ಗೆಲುವು ಕಾಣುತ್ತಿದ್ದ ಬಿಜೆಪಿ ಈಗ ಕೇವಲ 10 ಸಾವಿರ ಮತಗಳ ಅಂತರದಲ್ಲಿ ಗೆಲುವು ಕಂಡಿದ್ದಾರೆ ಎಂದರೆ ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ವ್ಯಂಗ್ಯವಾಡಿದರು.

ನಿಮ್ಮ ಪ್ರಚಾರದ ಸಮಯದಲ್ಲಿ ಬಿ.ಎಸ್.ವೈ ಮತ್ತು ಅವರ ಕುಟುಂಬದವರ ವಿರುದ್ಧ ನೀವು ಬೈದಷ್ಟೂ ನಮಗೆ ಆಶೀರ್ವಾದದ ಜೊತೆಗೆ ಹೆಚ್ಚಿನ ಮತಗಳು ಕ್ರೂಢೀಕರಣವಾಗುತ್ತಿದೆ ಎಂದು ಹೇಳಿಕೆ ನೀಡುತ್ತಿದ್ದಾರೆ ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ನಕಲಿ ಹಿಂದುತ್ವವಾದಿ ಎಂದು ಹೇಳುವ ಇವರು, ಇಡೀ ರಾಜ್ಯದಲ್ಲಿ ಹಿಂದೂಗಳಿಗೇನಾದರೂ ಅನ್ಯಾಯವಾದರೆ ಅದರ ವಿರುದ್ದ ಧ್ವನಿ ಎತ್ತುವವರು ಎಂದರೆ ಸಿ.ಟಿ ರವಿ, ಬಸವನಗೌಡ ಪಾಟಿಲ್ ಎತ್ನಾಳ್, ಪ್ರತಾಪ್ ಸಿಂಹ ಕೆ.ಎಸ್. ಈಶ್ವರಪ್ಪ ಸೇರಿದಂತೆ ಅನೇಕರು, ಆದರೆ ಬಿವೈಆರ್ ನಕಲಿ ಹಿಂದುತ್ವವಾದಿಗಳ ಬಗ್ಗೆ ಹುಷಾರಾಗಿರಿ ಎಂದು ಹೇಳಿದರು.

ಹಿಂದುತ್ವವಾದಿಗಳ ಓಟು ತಮಗೆ ಬೀಳಬೇಕೆಂದು ನೆಪಮಾತ್ರಕ್ಕೆ ಆಶೀರ್ವಾದ ಎಂದು ಹೇಳುವ ಮೂಲಕ ಜನರನ್ನ‌‌ ಓಲೈಕೆ ಮಾಡಿಕೊಳ್ಳುತ್ತಿದ್ದಾರೆ. ಚುನಾವಣಾ ನಂತರ ವಿಜಯೇಂದ್ರ ರಾಜ್ಯಾಧ್ಯಕ್ಷ ಸ್ಥಾನ ಮತ್ತು ಬಿವೈಆರ್ ಸಂಸದ ಸ್ಥಾನ ಕಳೆದುಕೊಳ್ಳುವುದು ನಿಶ್ಚಯವಾಗಿದೆ ಎಂದು ಹೇಳಿದರು. 

ಗೋಷ್ಟಿಯಲ್ಲಿ ಮಾಜಿ ಸಚಿವ ಗೂಳಿಹಟ್ಟಿ ಶೇಖರ್, ಸಾಗರದ ಮಂಜುನಾಥ್, ರಾಷ್ಟ್ರಭಕ್ತ ಬಳಗದ ಮುಖಂಡ  ಗಂಗಾನಾಯ್ಕ್, ನಗರದ ಅಶೋಕ, ಮುರಗೇಶ್, ಗೊದ್ದನಕೊಪ್ಪದ ಕುಮಾರ್ ನಾಯ್ಕ್ ಸೇರಿದಂತೆ ಅನೇಕರು ಹಾಜರಿದ್ದರು.

Leave A Reply

Your email address will not be published.

error: Content is protected !!