ಹೊಸನಗರ ; ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಂದ ಪ್ರತಿಭಟನೆ

0 174


ಹೊಸನಗರ: ತಾಲ್ಲೂಕಿನ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಗೌರವಧನ ಹಾಗೂ ರಾಜ್ಯ ಸರ್ಕಾರದ 6ನೇ ಗ್ಯಾರಂಟಿಯನ್ನು ಸರ್ಕಾರ ತಕ್ಷಣ ಜಾರಿಗೊಳಿಸುವಂತೆ ಆಗ್ರಹಿಸಿ ಗುರುವಾರ ರಾಜ್ಯ ಸಂಚಾಲಕ ಎನ್ ರವೀಂದ್ರ ಸಾಗರ್‌ರವರ ನೇತೃತ್ವದಲ್ಲಿ ಎಐಟಿಯುಸಿ ವತಿಯಿಂದ ಹೊಸನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಸಿಡಿಪಿಓ ಕಛೇರಿಯ ಮೇಲ್ವಿಚಾರಕಿ ವನಮಾಲ ಹಾಗೂ ರಾಜುರವರಿಗೆ ಮತ್ತು ತಹಶಿಲ್ದಾರ್ ರಾಕೇಶ್ ಬ್ರಿಟ್ಟೋ ರವರಿಗೆ ಮನವಿ ಸಲ್ಲಿಸಿದರು.


ನಂತರ ಮಾತನಾಡಿದ ರಾಜ್ಯ ಸಂಚಾಲಕ ರವೀಂದ್ರ ಸಾಗರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಾಡಿ ಕಳೆದ 48 ವರ್ಷಗಳಿಂದ ಶೂನ್ಯದಿಂದ 6 ವರ್ಷ ವಯೋಮಾನದ ಮಕ್ಕಳಿಗಾಗಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಮೂಲಕ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಆರೋಗ್ಯ ಲಾಲನೆ-ಪಾಲನೆ ಪೌಷ್ಠಿಕ ಆಹಾರ ಶಾಲಾ ಪೂರ್ವ ಶಿಕ್ಷಣ ಇತ್ಯಾದಿ ಸೇವೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಅದರೆ, ಇದೀಗ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಎಲ್ಲಿ ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆಯೊ ಅದೇ ಪ್ರದೇಶಗಳಲ್ಲಿ ಶಿಶುಪಾಲಾನ ಕೇಂದ್ರಗಳನ್ನು ಶಾಲಾ ಪೂರ್ವ ತರಗತಿಗಳನ್ನು ಪ್ರಾರಂಭಿಸಲು ಮುಂದಾಗಿರುವುದು ದುರದೃಷ್ಟಕರ. ಅಂಗನವಾಡಿ ಕೇಂದ್ರಗಳ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಈಗಾಗಲೇ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಆಶ್ರಯದಲ್ಲಿ ಶಿಶುಪಾಲನ ಕೆಂದ್ರಗಳನ್ನು ಪ್ರಾರಂಭಿಸಲಾಗುತ್ತಿದೆ ಹಾಗೇಯೇ ಸಮಗ್ರ ಶಿಕ್ಷಣ-ಕರ್ನಾಟಕವು ಸರ್ಕಾರಿ ಶಾಲೆಗಳಲ್ಲಿ 4ರಿಂದ 5 ವರ್ಷದ ವಯೋಮಾನದ ಮಕ್ಕಳಿಗಾಗಿ ಶಾಲಾ ಪೂರ್ವ ತರಗತಿಗಳನ್ನು ಪ್ರಾರಂಭಿಸಲು ಆದೇಶ ನೀಡಲಾಗಿದ್ದು ಎಲ್‌ಕೆಜಿ ಯುಕೆಜಿ ತರಗತಿಗಳನ್ನು ಆರಂಭಿಸಲಾಗುತ್ತಿದೆ ಅದೇ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನರೇಗಾ ಯೋಜನೆಯಡಿ ಗ್ರಾಮ ಪಂಚಾಯತಿ ವ್ಯಾಪ್ತಿಗಳಲ್ಲಿ ಶಿಶುಪಾಲನ ಕೇಂದ್ರಗಳನ್ನು ಪ್ರಾರಂಭಿಸಲು ಸಿದ್ದತೆಗಳನ್ನು ಭರದಿಂದ ನಡೆಸಲಾಗಿದೆ ಈ ಬಗ್ಗೆ ಆಯಾ ಇಲಾಖೆಗಳು ಸುತ್ತೋಲೆಗಳನ್ನು ಹೊರಡಿಸಿರುವುದು ಅಂಗನವಾಡಿ ಕಾರ್ಯಕರ್ತೆಯರು ನಿರ್ವಹಿಸುವ ಕಾರ್ಯಗಳು ಪರ್ಯಾಯವಾಗಿ ಮಾರ್ಪಟ್ಟು ಅಂಗನವಾಡಿಗಳನ್ನು ಮುಚ್ಚುವ ಸಂಚು ನಡೆಸಲಾಗುತ್ತದೆ ಎಂದರು.


6ನೇ ಗ್ಯಾರಂಟಿ ಜಾರಿ ಮಾಡಿ:

ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ಅಂಗನವಾಡಿ ಕಾರ್ಯಕರ್ತೆಯರಿಗೆ 15 ಸಾವಿರ ಹಾಗೂ ಸಹಾಯಕಿಯರಿಗೆ 10 ಸಾವಿರ ಸಹಾಯಧನ ಹೆಚ್ಚಿಸುವ ಬಗ್ಗೆ ಭರವಸೆ ನೀಡಿತ್ತು. ರಾಜ್ಯ ಸರ್ಕಾರ ತಮ್ಮ 6ನೇ ಗ್ಯಾರಂಟಿಯಲ್ಲಿ ಘೋಷಿಸಿದ ಧನ ಸಹಾಯ ಜಾರಿ ಮಾಡಬೇಕು ಹಾಗೂ ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರಿಗೆ ಸಹಾಯಕಿಯರಿಗೆ ಗ್ರಾಚ್ಯುಟಿ ಪಡೆಯಲು ಅರ್ಹರಾಗಿದ್ದು ನಿವೃತ್ತಿ ವೇತನ ಜಾರಿಗೊಳಿಸಬೇಕೆಂದು ಹತ್ತು ಹಲವು ಬೇಡಿಕೆಗಳಿದ್ದು ಅವುಗಳನ್ನು ಸರ್ಕಾರ ತಕ್ಷಣ ಜಾರಿ ಮಾಡಬೇಕೆಂದರು.


ಈ ಪ್ರತಿಭಟನೆಯಲ್ಲಿ ತಾಲ್ಲೂಕು ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಶಶಿಕಲಾ, ಕಾರ್ಯದರ್ಶಿ ಗೀತಾ, ಖಜಾಂಚಿ ಉಮಾ, ಪ್ರಧಾನ ಕಾರ್ಯದರ್ಶಿ ಲೀಲಾವತಿ, ಗೀತಾ, ಜಯಮ್ಮ, ಶರ್ಮಿಳ, ನಾಗರತ್ನ, ಬಿ.ಬಿ.ತಾರಾ, ಟಿ.ಆರ್ ಸುಜಾತಾ, ಸುಮತಿ, ಇನ್ನೂ ಮುಂತಾದವರು ಭಾಗವಹಿಸಿದ್ದರು.

Leave A Reply

Your email address will not be published.

error: Content is protected !!