ಕೆ.ಎಸ್.ಈಶ್ವರಪ್ಪನವರಿಗೆ ಅಪೂರ್ವ ಬೆಂಬಲ ; ರಾಷ್ಟ್ರಭಕ್ತ ಬಳಗದ ವಾಟಗೋಡು ಸುರೇಶ್

0 307

ಹೊಸನಗರ : ಕ್ಷೇತ್ರದಲ್ಲಿ ಈವರೆಗೆ ನಡೆಸಿದ ಪ್ರವಾಸ ಬಳಿಕ ಕೆ.ಎಸ್‌. ಈಶ್ವರಪ್ಪನವರಿಗೆ ನಿರೀಕ್ಷೆಗೂ ಮೀರಿ ಜನ ಬೆಂಬಲ ವ್ಯಕ್ತವಾಗಿರುವುದು ಗಮನಕ್ಕೆ ಬಂದಿದೆ ಎಂದು ರಾಷ್ಟ್ರಭಕ್ತ ಬಳಗದ ಸಂಚಾಲಕ ವಾಟಗೋಡು ಸುರೇಶ್ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದ ಅತ್ತಿಕೊಡಿಗೆ ಸಂಕೀರ್ಣದಲ್ಲಿ ಮಂಗಳವಾರ ಅವರು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸಂಸದ ಸ್ಥಾನಕ್ಕೆ ಸ್ಪರ್ಧಿಸಿರುವ ಪಕ್ಷೇತರ ಅಭ್ಯರ್ಥಿಕೆ.ಎಸ್.ಈಶ್ವರಪ್ಪ ಅವರು ಈ ಬಾರಿ ಅಭೂತಪೂರ್ವ ಗೆಲುವು ಸಾಧಿಸಲಿದ್ದಾರೆ. ಈಶ್ವರಪ್ಪ ಅವರು ತಮ್ಮ ಉಮೇದುವಾರಿಕೆ ಹಿಂಪಡೆಯಲಿದ್ದಾರೆ ಎಂದು ಅಪಪ್ರಚಾರ ನಡೆದಿತ್ತು. ಆದರೆ ಅವರ ಸ್ಪರ್ಧೆ ಖಚಿತವಾಗಿ, ಚಿಹ್ನೆ ಲಭ್ಯವಾದ ಬಳಿಕ ನಿರೀಕ್ಷೆಗೂ ಮೀರಿ ಜನಬೆಂಬಲ ವ್ಯಕ್ತವಾಗುತ್ತಿದೆ. ಜಿಲ್ಲೆಯ ಹಲವು ಕಡೆಗಳಿಂದ ದಿನವೂ ನೂರಾರು ಮಂದಿ ಅವರ ಬೆಂಬಲಕ್ಕೆ ನಿಲ್ಲುತ್ತಿದ್ದಾರೆ. ಇದು ಅವರ ಗೆಲುವಿನ ಅಂತರವನ್ನು ಹೆಚ್ಚಿಸಲಿದೆ ಎಂದರು.

ಕ್ಷೇತ್ರದಲ್ಲಿ ಈಗಾಗಲೇ ಸಾಕಷ್ಟು ಪ್ರವಾಸ ಕೈಗೊಳ್ಳಲಾಗಿದೆ. ಎಲ್ಲೆಡೆಯೂ ಬದಲಾವಣೆಯ ಗಾಳಿ ಬೀಸುತ್ತಿರುವುದು ಸ್ಪಷ್ಠವಾಗುತ್ತಿದೆ. ಜನತೆ ಈಶ್ವರಪ್ಪ ಅವರ ಆಯ್ಕೆಯನ್ನು ಬಯಸಿರುವುದು ಕಂಡುಬಂದಿದೆ ಎಂದರು.

ಬಿ.ವೈ.ರಾಘವೇಂದ್ರ ಅವರು ಮೂರು ಬಾರಿ ಸಂಸದರಾದರೂ, ಜನಸಾಮಾನ್ಯರಿಗೆ ಉಪಯೋಗವಾಗುವ ಯಾವ ಕಾರ‍್ಯಕ್ರಮಗಳೂ ನಡೆಯಲಿಲ್ಲ. ಶರಾವತಿ ಮುಳುಗಡೆ ಸಂತ್ರಸ್ಥರಿಗೆ ಇನ್ನೂ ನೆಲೆ ಸಿಕ್ಕಿಲ್ಲ. ಬಗರ್‌ಹುಕುಂ ಸಮಸ್ಯೆ ಜ್ವಲಂತವಾಗಿದೆ. ರಾಜ್ಯ ಹಾಗೂ ಕೇಂದ್ರದಲ್ಲಿ ತಮ್ಮದೇ ಸರಕಾರವಿದ್ದರೂ, ಅರಣ್ಯ ಹಕ್ಕು ಕಾಯ್ದೆ ಸಮಸ್ಯೆ ಬಗೆಹರಿಸಲು ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ಹೆದ್ದಾರಿ ನಿರ್ಮಾಣ ಮಾಡುವುದೇ ತಮ್ಮ ಸಾಧನೆ ಎಂದು ಬಿಂಬಿಸುತ್ತಿದ್ದಾರೆ. ನರೇಂದ್ರ ಮೋದಿ ಅವರು ಪ್ರಧಾನಿ ಆದ ಬಳಿಕ ದೇಶವ್ಯಾಪಿ ಹೆದ್ದಾರಿ ನಿರ್ಮಾಣ ಕಾಮಗಾರಿ ಚುರುಕುಗೊಂಡಿದೆ. ಇದೇನೂ ವಿಶೇಷವಾಗಿ ಶಿವಮೊಗ್ಗದಲ್ಲಿ ನಡೆಯುತ್ತಿಲ್ಲಎಂದು ಟೀಕಿಸಿದರು.

ಎಪಿಎಂಸಿ ಮಾಜಿ ಸದಸ್ಯ ಕಣಿಕಿ ಮಹೇಶ್ ಮಾತನಾಡಿ, ಬಿಜೆಪಿಗಾಗಿ ಎರಡು ದಶಕ ಕೆಲಸ ಮಾಡಿದ್ದೇನೆ. ಆದರೆ ಇತ್ತೀಚೆಗೆ ಉಸಿರುಕಟ್ಟುವ ವಾತಾವರಣ ನಿರ್ಮಾಣ ಆಗಿದೆ. ಪಕ್ಷಕ್ಕಾಗಿ ದುಡಿದವರನ್ನು ಅಲ್ಲಿ ದೂರ ಮಾಡಲಾಗುತ್ತಿದೆ. ಸಿದ್ಧಾಂತದ ಅಡಿಯಲ್ಲಿ ರಾಜಕೀಯ ಮಾಡುವ ತಮಗೆ ಇದು ಸಹಿಸಲು ಸಾಧ್ಯವಾಗುತ್ತಿಲ್ಲ ಎಂದರು.

ಗೋಷ್ಠಿಯಲ್ಲಿ ಸಚಿನ್‌ಗೌಡ ಗರ್ತಿಕೆರೆ, ವಡಾಹೊಸಳ್ಳಿ ಕುಮಾರಸ್ವಾಮಿ, ರಾಜಾರಾಮ ಭಟ್, ನಿವಣೆ ಭಗೀರಥ, ಮಂಜಪ್ಪ, ಲೀಲಾವತಿ, ವಿದ್ಯಾಧರ ಭಟ್, ಶ್ರೀಜಯ ಸುಬ್ಬರಾವ್ ಮತ್ತಿತರರು ಇದ್ದರು.

Leave A Reply

Your email address will not be published.

error: Content is protected !!