ಡೆಂಗ್ಯೂಗೆ ಕಾಲೇಜು ವಿದ್ಯಾರ್ಥಿನಿ ಬಲಿ !
ಚಿಕ್ಕಮಗಳೂರು: ಡೆಂಗ್ಯೂ ಜ್ವರದಿಂದ ಯುವತಿಯೊಬ್ಬರು ಮೃತಪಟ್ಟ ಘಟನೆ ನಗರದಲ್ಲಿ ನಡೆದಿದೆ.
ನಗರದ ಮಹಮ್ಮದ್ ಖಾನ್ ಗಲ್ಲಿ ನಿವಾಸಿ ಸಹರಾ ಬಾನು (18) ಮೃತ ವಿದ್ಯಾರ್ಥಿನಿ. ಎಂಇಎಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಈಕೆ ಕಳೆದ ಎರಡು ತಿಂಗಳಿಂದ ಜ್ವರದಿಂದ ಬಳಲುತ್ತಿದ್ದು ಬುಧವಾರ ಸಂಜೆ ಮೃತಪಟ್ಟಿದ್ದಾರೆ.
ಕಳೆದ ನಾಲ್ಕು ತಿಂಗಳ ಹಿಂದೆ ಯುಜಿಡಿ ಪೈಪ್ ಬದಲಾವಣೆ ಮಾಡಲು ರಸ್ತೆ ಅಗೆದು, ರಸ್ತೆ ಕ್ಲಿಯರ್ ಮಾಡದೆ ಚರಂಡಿಯಲ್ಲಿ ಮಣ್ಣು, ಕಸ, ಕಡ್ಡಿ, ಕೊಳಚೆ ತುಂಬಿದ್ದು, ಇಲ್ಲಿನ ನಿವಾಸಿಗಳು ನಗರಸಭೆ ಗಮನಕ್ಕೂ ತಂದಿದ್ದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ದೂರು ನೀಡಿದಾಗ ಕೆಲಸ ವಹಿಸಿಕೊಂಡ ಕಂಟ್ರಾಕ್ಟರ್ ಕಾಟಾಚಾರಕ್ಕೆ ಕೆಲಸ ನಿರ್ವಹಿಸಿ ತೆರಳುತ್ತಿದ್ದಾರೆ ಎನ್ನುವ ಆರೋಪವು ಇದ್ದು, ಅಕ್ಕ-ಪಕ್ಕದ ಮನೆಯವರೂ ಕಸ ಕಡ್ಡಿಯನ್ನು ರಸ್ತೆಗೆ ಬಿಸಾಕುವ ಪರಿಪಾಠ ಹೊಂದಿದ್ದು ನಗರಸಭೆ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.