ಹೊಸನಗರ: ಅಭಿವೃದ್ಧಿಯ ಹೆಸರಿನಲ್ಲಿ ವ್ಯಾಪಕವಾಗಿ ಅರಣ್ಯ ನಾಶ ಆಗುತ್ತಿರುವುದು ಆತಂಕಕಾರಿ ವಿಷಯವಾಗಿದೆ ಎಂದು ಪರಿಸರ ಕಾರ್ಯಕರ್ತ ರಾಧಾಕೃಷ್ಣ ಪೂಜಾರಿ ಹೇಳಿದರು.
ಅವರುಇಲ್ಲಿನ ಗುರೂಜಿ ಶಾಲೆಯಲ್ಲಿ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಅರಣ್ಯ ನಾಶದಿಂದ ಜೀವ ಸಂಕುಲಕ್ಕೆ ಕುತ್ತು ಬರುತ್ತಿದೆ. ಪರಿಸರ ಅಸಮತೋಲನದಿಂದ ಸಹಜ ಜೀವನ ನಡೆಸುವುದು ಕಷ್ಟಕರವಾಗುವ ದಿನಗಳು ದೂರವಿಲ್ಲ. ಈಗಾಗಲೇ ಹವಾಮಾನದಲ್ಲಿ ಗಣನೀಯ ಬದಲಾವಣೆಗಳು ಆಗಿರುವುದು ನಮ್ಮೆಲ್ಲರ ಅನುಭವಕ್ಕೆ ಬರತೊಡಗಿದೆ. ತಾಪಮಾನ ಏರಿಕೆಯಂತಹ ಸಮಸ್ಯೆಗಳಿಂದ ಪಾರಾಗಲು ನೈಸರ್ಗಿಕ ಕಾಡಿನ ರಕ್ಷಣೆ ಹಾಗೂ ಪರಿಸರ ಜಾಗೃತಿಯೊಂದೇ ದಾರಿ ಎಂದರು.
ವಿದ್ಯಾರ್ಥಿಗಳಿಗೆ ಪರಿಸರ ಜಾಗೃತಿ ಕುರಿತು ರಸಪ್ರಶ್ನೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಶಾಲೆಯ ಮುಖ್ಯಸ್ಥ ಶಾಂತಮೂರ್ತಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಕವಿರಾಜ್ ವಂದಿಸಿದರು.
Related