ಫೆ.16 ರಂದು ‘ಶಾಖಾಹಾರಿ’ ತೆರೆಗೆ
ಶಿವಮೊಗ್ಗ : ಶಿವಮೊಗ್ಗದವರೇ ಪ್ರಮುಖವಾಗಿರುವ ಹೊಸ ಭರವಸೆ ಮೂಡಿ ಸಿರುವ ಶಾಖಾಹಾರಿ ಸಿನಿಮಾ ಫೆ.16ರಂದು ತೆರೆ ಕಾಣಲಿದೆ ಎಂದು ಶಿವಮೊಗ್ಗದವರೇ ಆದ ಚಿತ್ರದ ನಿರ್ದೇಶಕ ಸಂದೀಪ್ ಸುಂಕದ್ ಹೇಳಿದರು.
ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಾಖಾಹಾರಿ ಚಿತ್ರವು ಒಂದು ಭರವಸೆ ಮೂಡಿಸುವ ಚಿತ್ರವಾಗಿದೆ. ಶಿವಮೊಗ್ಗದವರೇ ಆದ ರಂಗ ಕಲಾವಿದ ಎಸ್.ಆರ್. ಗಿರೀಶ್ರವರ ನಾಟಕದ ತುಣುಕೊಂದನ್ನು ಇಟ್ಟುಕೊಂಡು ಅದನ್ನು ವಿಸ್ತರಿಸಿ ಅದಕ್ಕೊಂದು ರೂಪ ಕೊಟ್ಟು, ಕೌತುಕ ಸನ್ನಿವೇಶಗಳನ್ನು ಸೃಷ್ಠಿಸಿ ಶಿವಮೊಗ್ಗದ ತೀರ್ಥಹಳ್ಳಿ ಸುತ್ತಮುತ್ತ ಚಿತ್ರಿಕರಣ ಮಾಡಿ ಕನ್ನಡಿಗರೇ ಫೆ.16ರಂದು ಬಿಡುಗಡೆ ಮಾಡುತ್ತಿದ್ದೇವೆ ಎಂದರು.
ಇದೊಂದು ತಂಡದ ಶ್ರಮವಾಗಿದೆ. ಸಿನಿಮಾ ತಯರಾಗುವರೆಗು ಅದೊಂದು ಆರ್ಟ್ ಆಮೇಲೆ ಅದು ಪ್ರೋಡಾಕ್ಟ್ ನಂತರ ಮಾರ್ಕೇಟಿಂಗ್ ಹೀಗೆ ಎಲ್ಲಾ ವಿಷಯಗಳು ಇದರಲ್ಲಿ ನಡೆಯುತ್ತವೆ. ಉತ್ತಮ ಹಾಡುಗಳು ಒಳ್ಳೆಯ ಪೋಟೋಗ್ರಫಿ ತಂತ್ರಜ್ಞಾನ ಈ ಚಿತ್ರದಲ್ಲಿ ಬಳಕೆಯಾಗಿದೆ. ಈ ಎಲ್ಲಾ ವಿಭಾಗದಲ್ಲಿ ಕೆಲಸ ಮಾಡಿರುವವರು ಶಿವಮೊಗ್ಗದವರು ನಮ್ಮೂರಿನವರು ಎಂಬ ಹೆಮ್ಮೆ ನಮ್ಮದು.
ಮಲೆನಾಡಿನಲ್ಲಿ ನಡೆಯುವ ಒಂದಿಷ್ಟು ನಿಗೂಢ ಘಟನಗಳ ಸುತ್ತ ಈ ಚಿತ್ರ ಸಾಗಿದೆ. ಕುತೂಹಲವಿದೆ. ಒಳ್ಳೆಯ ಹಾಡುಗಳು ಇವೆ. ರಂಗಾಯಣ ರಘು ಮತ್ತು ಗೋಪಾಲಕೃಷ್ಣ ದೇಶಪಾಂಡೆಯಂತವರು ಚಿತ್ರದಲ್ಲಿ ನಟಿಸಿದ್ದಾರೆ. ಕತೆಯೇ ಇದರ ನಾಯಕ. ಈ ಇಬ್ಬರು ಮಹಾ ನಟರ ಜೊತೆಗೆ ಸುಜಯ್ ಶಾಸ್ತ್ರಿ ಪ್ರತಿಮಾ ನಾಯಕ್, ಹರಿಣಿ, ವಿನಯ್, ಶ್ರೀಹರ್ಷ ಗೋಭಟ್ಟ, ನಿಧಿ ಹೆಗಡೆ ಮುಂತಾದವರು ಅಭಿನಯಿಸಿದ್ದಾರೆ ಎಂದರು.
ನಿರ್ಮಾಪಕ ರಾಜೇಶ್ ಕೀಳಂಬಿ ಮಾತನಾಡಿ, ನನ್ನ ಜೊತೆಗೆ ರಂಜಿನಿ ಪ್ರಸನ್ನ ನಿರ್ಮಾಪಕರಾಗಿದ್ದಾರೆ. ಈ ಸಿನಿಮಾ ಮಾಡುವುದೇ ಒಂದು ಅವಿಸ್ಮರಣೀಯ ಕ್ಷಣವಾಗಿದೆ. ಸಿನಿಮಾ ವೀಕ್ಷಕನಾದ ನಾನು ಚಿತ್ರಕ್ಕೆ ಬಂಡವಾಳ ಹೂಡುವಾಗ ಸಾಕಷ್ಟು ಯೋಜನೆ ಮಾಡಿದ್ದೇನೆ ಎಂದರು.
ಪ್ರಮುಖವಾಗಿ ಬೆಂಗಳೂರು ಕೇಂದ್ರಿಕೃತವಾಗಿರುವ ಈ ಸಿನಿಮಾ ಉದ್ಯಮ ಬೇರೆ ಬೇರೆ ಜಿಲ್ಲೆಗಳತ್ತ ಸಾಗಬೇಕಾಗಿದೆ. ಶಿವಮೊಗ್ಗ ದಲ್ಲಿಯೂ ಸಹ ಅನೇಕ ಯುವಕರು ಸಿನಿಮಾ ಕ್ಷೇತ್ರಕ್ಕೆ ಬರು ತ್ತಿದ್ದಾರೆ. ಹಾಗಾಗಿ ಶಿವಮೊಗ್ಗವು ಕೂಡ ಸಿನಿಮಾದ ಬ್ರ್ಯಾಂಚ್ ಆಫೀಸ್ ತರಹ ಹೆಸರಾಗಬೇಕು, ಹಲವರಿಗೆ ಉದ್ಯೋಗ ಸಿಗಬೇಕು, ಪ್ರತಿಭೆಗಳಿಗೆ ಅವಕಾಶವಾಗಬೇಕು. ಇಲ್ಲಿ ಬರಹಗಾರರಿದ್ದಾರೆ, ತಂತ್ರ ಜ್ಞರು ಇದ್ದಾರೆ, ಬಂಡವಾಳ ಹಾಕುವವರು ಇದ್ದಾರೆ. ಹಾಗಾಗಿ ಶಿವಮೊಗ್ಗ ಒಂದು ಸಿನಿಮಾ ಉದ್ಯಮದ ಕ್ಷೇತ್ರವಾಗಬೇಕು ಎಂದರು.
ನಟ ಗೋಪಾಲದೇಶ ಪಾಂಡೆ ಮಾತನಾಡಿ, ಇದೊಂದು ಅಪರೂಪದ ಸರಳವಾದ ಕಥೆ. ಇಲ್ಲಿ ಸ್ಥಳೀಯರು ಅಭಿನಯಿಸಿದ್ದಾರೆ. ಸ್ಥಳೀಯ ಸಂಸ್ಕೃತಿ ಇದೆ. ಚಿತ್ರ ಶಾಖಾಹಾರಿಯಾದರು ತಣ್ಣನೆಯ ಕೌರ್ಯವಿದೆ. ಹೆಚ್ಚು ಜನರನ್ನು ತಲುಪುತ್ತದೆ ಎಂಬ ವಿಶ್ವಾಸ ನನ್ನದು, ಈ ಚಿತ್ರ ಗೆಲ್ಲುತ್ತದೆ. ರಂಗಾಯಣ ರಘುವಿನಂತ ದೊಡ್ಡ ನಟರ ಜೊತೆ ಮೊದಲ ಬಾರಿಗೆ ಅಭಿನಯಿಸಿದ್ದೇನೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕಿ ರಂಜಿನಿ, ನಿರ್ದೇಶಕ ಸಂದೀಪ್ ತಂದೆ ಶಿವಮೂರ್ತಿ, ವಿನಯ್ ಸೇರಿದಂತೆ ಹಲವರಿದ್ದರು.