ರಿಪ್ಪನ್ಪೇಟೆ: ಎರಡು ವಾಹನಗಳಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಮೂವರನ್ನು ರಿಪ್ಪನ್ಪೇಟೆ ಪೊಲೀಸರು ಬಂಧಿಸಿರುವ ಘಟನೆ ಇಂದು ನಡೆದಿದೆ.

ಘಟನಾ ವಿವರ :
ಹೊಸನಗರ ತಾಲೂಕಿನ ಆನೆಗದ್ದೆ ಗ್ರಾಮದ ಚಂದನ್ ಎಂಬುವವರು ಇಂದು ಬೆಳಗ್ಗೆ ಸುಮಾರು 10-00 ಗಂಟೆಗೆ ತಮ್ಮ ಬೈಕ್ ನಲ್ಲಿ ಕೆಲಸದ ನಿಮಿತ್ತ ನಿವಣೆ ಗ್ರಾಮದ ಕಡೆ ಹೊರಟಿದ್ದು ಬೆಳಗ್ಗೆ ಸುಮಾರು 10-15 ಗಂಟೆಗೆ ನಿವಣೆ ಸರ್ಕಲ್ ಬಳಿ ಬೈಕ್ ನಲ್ಲಿ ಹೋಗುವಾಗ ಹುಂಚ ಕಡೆಯಿಂದ ಸೊನಲೆ ಕಡೆಗೆ ಎರಡು ಗೂಡ್ಸ್ ಆಟೋಗಳು ಮುಂದೆ ಹೋಗುತ್ತಿದ್ದು ನೋಡಿದಾಗ ಎರಡು ಗೂಡ್ಸ್ ಆಟೋಗಳಲ್ಲಿ ಅಂದಾಜು ಸುಮಾರು 10-12 ದನಗಳನ್ನು ಹಿಂಸಾತ್ಮಕವಾಗಿ ತುಂಬಿಕೊಂಡು ಹೋಗುವುದನ್ನು ಗಮನಿಸಿದ ಚಂದನ್, ಅಲ್ಲಿಯೇ ಸರ್ಕಲ್ ಬಳಿ ಇದ್ದ ಸ್ನೇಹಿತರಾದ ಗಿರೀಶ್ ಮತ್ತು ಸಂತೋಷ ಅವರನ್ನು ಕರೆದು ಎರಡೂ ಆಟೋಗಳನ್ನು ನಿವಣೆ ಸರ್ಕಲ್ ಹತ್ತಿರ ಅಡ್ಡ ಹಾಕಿ ನಿಲ್ಲಿಸಿದ್ದು, ನಂತರ ಕೆಎ 15 A 4206 ವಾಹನದ ಚಾಲಕನ ಹೆಸರು ಕೇಳಿದ್ದಾರೆ ಹೊಸನಗರ ತಾಲೂಕಿನ ಗರ್ತಿಕೆರೆ ಬಳಿಯ ಹುಳಿಗದ್ದೆ ಗ್ರಾಮದ ಎಣ್ಣೆನೋಡ್ಲು ವಾಸಿ ಮಹಮದ್ ವಸೀಂ (26) ಎಂದು ತಿಳಿಸಿದ್ದು ಇನ್ನೊಂದು ವಾಹನ ಕೆಎ-27 C 1446 ರ ವಾಹನದ ಚಾಲಕನ ವಿಳಾಸ ಕೇಳಿದಾಗ ಗರ್ತಿಕೆರೆ ಬಳಿಯ ಹುಳಿಗದ್ದೆ ಗ್ರಾಮದ ಎಣ್ಣೆನೋಡ್ಲು ವಾಸಿ ಮಹಮ್ಮದ್ ಇರ್ಫಾನ್ (24) ಎಂದು ತಿಳಿಸಿ ಇವರ ಜೊತೆಯಲ್ಲಿದ್ದವರನ್ನು ವಿಚಾರಿಸಿದಾಗ ಜಂಬಳ್ಳಿ ಗ್ರಾಮದ ಕಲ್ಲುಕೊಪ್ಪ ವಾಸಿ ಕೃಷ್ಣಮೂರ್ತಿ (53) ಎಂದು ತಿಳಿಸಿದ್ದಾರೆ.
ಈ ವ್ಯಕ್ತಿಗಳನ್ನು ಗೂಡ್ಸ್ ಆಟೋದಲ್ಲಿ ದನ-ಕರುಗಳನ್ನು ಸಾಗಾಟ ಮಾಡಲು ಯಾವುದಾದರೂ ಪರವಾನಿಗೆ ಮತ್ತು ದಾಖಲಾತಿಗಳು ಇದೆಯಾ ? ಎಂದು ಕೇಳಿದಾಗ ಯಾವುದೇ ದಾಖಲೆ ಮತ್ತು ಪರವಾನಿಗೆ ಇಲ್ಲ ಎಂದು ತಿಳಿಸಿದ್ದು ಈ ದನಗಳನ್ನು ಕೃಷ್ಣಮೂರ್ತಿಯವರ ಮನೆಯಿಂದ ಈ ದಿನ ಬೆಳಗ್ಗೆ ಸುಮಾರು 9-00 ಗಂಟೆಗೆ ತುಂಬಿಕೊಂಡು ನಾವೆಲ್ಲರೂ ಸೇರಿ ಕಸಾಯಿ ಖಾನೆಗೆ ಮಾರಾಟ ಮಾಡಲು ತೆಗೆದುಕೊಂಡು ಬಂದಿರುವುದಾಗಿ ತಿಳಿಸಿರುತ್ತಾರೆ.

ಗೂಡ್ಸ್ ಆಟೋವನ್ನು ಪರಿಶೀಲಿಸಿದಾಗ ಕೆಎ 15 A 4206 ಮೂರು ಚಕ್ರದ ಬಜಾಜ್ ಗೂಡ್ಸ್ ಆಟೋದಲ್ಲಿ ನಾಲ್ಕು ದನಗಳು ಹಾಗೂ ಇನ್ನೊಂದು ಗೂಡ್ಸ್ ವಾಹನವಾದ ಕೆಎ-27 C 1446 ರಲ್ಲಿ ಒಟ್ಟು 06 ದನಗಳು ಅದರಲ್ಲಿ 03 ಹೆಣ್ಣು ಕರುಗಳನ್ನು ಕಿರಿದಾಗಿ ಹಿಂಸಾತ್ಮಕವಾಗಿ ಹಗ್ಗದಿಂದ ಕಟ್ಚಿರುತ್ತಾರೆ.

ಈ ದನಗಳನ್ನು ಸಾಗಿಸಲು ಯಾವುದೇ ಪರವಾನಿಗೆ ಇಲ್ಲದೇ ಇದ್ದುದರಿಂದ 112 ವಾಹನಕ್ಕೆ ಕರೆ ಮಾಡಿ ಮಾಹಿತಿ ತಿಳಿಸಿ ನಂತರ ಆರೋಪಿಗಳು ಮತ್ತು ವಾಹನ ಸಮೇತ 10 ದನ-ಕರುಗಳನ್ನು ರಿಪ್ಪನ್ಪೇಟೆ ಪೊಲೀಸ್ ಠಾಣೆಗೆ ತಂದು ಹಾಜರುಪಡಿಸಿದ್ದು ಇವುಗಳ ಅಂದಾಜು ಮೌಲ್ಯ ಸುಮಾರು 70 ಸಾವಿರ ರೂಪಾಯಿ ಆಗಬಹುದು.
