ಎನ್.ಆರ್.ಪುರ: ಸಾಗುವಳಿ ಚೀಟಿ, ಮನೆ ಹಂಚಿಕೆ, ನೀರಾವರಿ, ಮಲೆನಾಡಿನ ಜನರನ್ನು ಒಕ್ಕಲೆಬ್ಬಿಸುವ ಮಾರಕ ಅರಣ್ಯ ಯೋಜನೆಗಳಿಂದ ಜನತೆ ಭಯ ಭೀತರಾಗಿದ್ದು, ಯಾವ ಶಾಸಕರು ಅಧಿಕಾರಕ್ಕೆ ಬಂದರೂ ಶೃಂಗೇರಿ ಕ್ಷೇತ್ರ ಅಭಿವೃದ್ಧಿ ಶೂನ್ಯವಾಗಿದೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್ ಎಸ್. ಶೆಟ್ಟಿ ಆರೋಪಿಸಿದರು.
ಬಾಳೆಹೊನ್ನೂರು ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ಪಕ್ಷದ ಹಿರಿಯ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ, ಪ್ರಾತಿನಿಧ್ಯ ವಹಿಸುವ ಪ್ರತಿಯೊಬ್ಬನಿಗೂ ಕ್ಷೇತ್ರದ ಸಂಪೂರ್ಣ, ಅಧ್ಯಯನ, ಅರಿವು, ತಿಳುವಳಿಕೆ ಅಗತ್ಯವಾಗಿರಬೇಕು. ತಳ ಮಟ್ಟದಿಂದ ಪಕ್ಷ ಸಂಘಟಿಸಿ ಜನಮತ ಪಡೆಯಬಹುದಾಗಿದ್ದು, ಜನರು ಕೊಟ್ಟ ಅಧಿಕಾರದಿಂದ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಬಹುದು. ಸದಸ್ಯತ್ವ ಅಭಿಯಾನದಿಂದ ಪಕ್ಷವನ್ನು ಉನ್ನತ ಮಟ್ಟದಲ್ಲಿ ಸಂಘಟಿಸುವ ಮೂಲಕ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದರು.
Related