ಹೊಸನಗರ: ತಾಲ್ಲೂಕಿನ ತ್ರಿಣಿವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಕ್ರಮವಾಗಿ ಹಗಲು-ರಾತ್ರಿ ಮರಳು ಸಾಗಾಣಿಕೆ ನಡೆಯುತ್ತಿದ್ದು ಓಡಾಡುವ ರಸ್ತೆಗಳು ಹಾಳಾಗುತ್ತಿದೆ. ಮುಂದಿನ ದಿನದಲ್ಲಿ ಈ ರೀತಿ ಅಕ್ರಮ ಮರಳು ದಂಧೆ ನಡೆದರೆ ದನಗಳು ಮೇಯುವ ಜಾಗವು ಬಯಲು ಸೀಮೆಯಾಗಲಿದೆ. ದನಗಳಿಗೆ ಮೇಯಲು ಹುಲ್ಲು ಇಲ್ಲದಂತಾಗುತ್ತದೆ ಎಂದು ಅಲ್ಲಿನ ಗ್ರಾಮಸ್ಥರಾದ ಎನ್. ಪ್ರಕಾಶ್ ಶೆಟ್ಟಿಯವರು ಗ್ರಾಮ ಪಂಚಾಯಿತಿಯ ಮೇಲೆ ಆಪಾದಿಸಿದ್ದಾರೆ.
ಅವರು ಸುದ್ಧಿಗಾರರೊಂದಿಗೆ ಮಾತನಾಡಿ, ತ್ರಿಣಿವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಕ್ರಮ ಮರಳು ಸಾಗಣಿಕೆ ಸರ್ವೆ ನಂಬರ್ 74ರ ಗೋಮಾಳ ಜಾಗದಲ್ಲಿ ನಡೆಯುತ್ತಿದ್ದು ಲಾರಿಗಳು ರಾತ್ರಿ ವೇಳೆಯಲ್ಲಿ ಸಂಚಾರಿಸುತ್ತಿದ್ದು ಗೋವುಗಳಿಗೆ ಮುಂದೆ ಮೇವು ಹುಟ್ಟದ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮ ಪಂಚಾಯಿತಿಯ ಸಾರ್ವಜನಿಕ ಮುಖ್ಯ ರಸ್ತೆ ಇದ್ದರೂ ಅಕ್ರಮವಾಗಿ ಸರ್ವೆ ನಂಬರ್ 74ರಲ್ಲಿ ಮರಳು ಸಾಗಣಿಕೆ ಮಾಡುತ್ತಿರುವುದರಿಂದ ಈ ರೀತಿ ಲಾರಿಗಳು ಓಡಾಟ ನಡೆಸಿದರೆ ಗೋವುಗಳಿಗೆ ಮಳೆಗಾಲದಲ್ಲಿ ಹುಲ್ಲು ಚಿಗುರುವಂತ ಪ್ರದೇಶದಲ್ಲಿ ಲಾರಿಗಳು ಸಂಚರಿಸಿ ಮೂಕ ಪ್ರಾಣಿಗಳ ಹೊಟ್ಟೆಯ ಮೇಲೆ ಹೊಡೆಯುವಂತ ಕೆಲಸ ನಡೆಯುತ್ತಿದೆ.
ಗ್ರಾಮ ಸಭೆಯಲ್ಲಿ ಗ್ರಾಮ ಪಂಚಾಯಿತಿಯವರ ಗಮನಕ್ಕೆ ತಂದರೂ ಏನೂ ಪ್ರಯೋಜನವಾಗಿಲ್ಲ. ಲಿಖಿತ ದೂರು ನೀಡಿದರೂ ಗ್ರಾಮ ಪಂಚಾಯಿತಿಯಿಂದ ತಡೆಯುವ ಪ್ರಯತ್ನವಾಗಿಲ್ಲ. ಗ್ರಾಮಸ್ಥರು ಲಾರಿಯನ್ನು ತಡೆದು ಈ ರೀತಿ ಗೋಮಾಳ ಜಾಗದಲ್ಲಿ ಹೋಗಬೇಡಿ, ನೀವು ಮರಳು ಹೊಡೆಯುವುದೇ ಆದಲ್ಲಿ ರಸ್ತೆಯಲ್ಲೇ ಸಂಚಾರಿಸಿ ಎಂದು ಅನೇಕ ಬಾರಿ ಹೇಳಿದರೂ ಕೂಡ ಲಾರಿ ಮಾಲೀಕರು ಗ್ರಾಮಸ್ಥರ ಮಾತಿಗೆ ಬೆಲೆ ನೀಡದೇ ಅಕ್ರಮವಾಗಿ ಮರಳು ಹೊಡೆಯುವುದಕ್ಕೆ ಜಾಗ ನೀಡಿರುವ ಖಾತೆದಾರರು ಇಲ್ಲಿಯೇ ಸಂಚರಿಸಲು ಹೇಳಿದ್ದರೆಂದು ಹೇಳಿ ಸರ್ವೆ ನಂಬರ್ 74ರಲ್ಲಿಯೇ ಅಕ್ರಮವಾಗಿ ಮರಳು ಸಾಗಿಸುತ್ತಿದ್ದಾರೆ. ತಕ್ಷಣ ಮೇಲಿನ ಅಧಿಕಾರಿಗಳು ಆಗಮಿಸಿ ಅಕ್ರಮವಾಗಿ ರಾತ್ರಿ ನಡೆಸುತ್ತಿರುವ ಮರಳು ದಂಧೆಯನ್ನು ನಿಲ್ಲಿಸಬೇಕು ಎಂದು ಪ್ರಕಾಶ್ ಶೆಟ್ಟಿಯವರು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ತ್ರಿಣಿವೆ ಗ್ರಾಮಸ್ಥರಾದ ಶ್ರೀಧರ ಎನ್ ಎಸ್, ಜಗನ್ನಾಥ, ಪ್ರಭಾಕರ್, ಶೇಷಾದ್ರಿ ಹಾಗೂ ಇತರರು ಉಪಸ್ಥಿತರಿದ್ದರು.
Related