ಹೊಸನಗರ: ಆರಾಧನೆಯು ದೇವರನ್ನು ಪ್ರಸನ್ನಗೊಳಿಸುವ ಕಾರಣಕ್ಕೆ ಮಾಡಲಾಗುತ್ತದೆ. ದೇವರ ಪ್ರಸನ್ನತೆಯು ಹರಿದು ಮರಳಿ ಭಕ್ತರನ್ನು ಸೇರುವ ಮೂಲಕ ಲೋಕದಲ್ಲಿ ಶಾಂತಿ ನೆಲೆಸುತ್ತದೆ ಎಂದು ರಾಮಚಂದ್ರಾಪುರ ಮಠದ ಪೀಠಾಧಿಪತಿ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ಇಲ್ಲಿನ ರಾಮಚಂದ್ರಾಪುರ ಮಠದಲ್ಲಿ ಹಮ್ಮಿಕೊಂಡಿದ್ದ ಸೋಮಸಪರ್ಯಾ ಧಾರ್ಮಿಕ ಕರ್ಯಕ್ರಮಗಳಲ್ಲಿ ಪಾಲ್ಗೊಂಡ ಭಕ್ತಾದಿಗಳಿಗೆ ಅವರು ಆಶೀರ್ವಚನ ನೀಡಿದರು.
ಜಗತ್ತಿನಲ್ಲಿ ಇಂದು ಸಮಾಧಾನ ಇಲ್ಲದಂತಾಗಿದೆ. ದಿಕ್ಕು ದೆಸೆ ಇಲ್ಲದೇ ಆನಂದವನ್ನು ಹುಡುಕಲು ಹೊರಟಿದ್ದೇವೆ. ಆದರೆ ನಿಜವಾದ ಆನಂದ ಭಗವಂತನ ಆರಾಧನೆಯಿಂದ ಮಾತ್ರ ದೊರಕಲು ಸಾಧ್ಯ. ದೇವರಿಂದ ದೂರ ಇರುವಾತ ಸದಾ ದುಃಖಿಯಾಗಿರುತ್ತಾನೆ. ಸಾತ್ವಿಕ ಪರಿವರ್ತನೆ ಪ್ರತಿಯೊಬ್ಬರಲ್ಲಿಯೂ ಬರಬೇಕು. ಪೂಜೆಗೆ ದುಃಖವನ್ನು ದೂರ ಮಾಡುವ ಶಕ್ತಿ ಹೊಂದಿದೆ ಎಂದರು.
ಭಾರತ ದೇಶದ ಸಂಸ್ಕೃತಿ, ಸನಾತನ ಧರ್ಮದ ಶ್ರೇಷ್ಠತೆ ಗಟ್ಟಿಯಾಗಿ ಬೇರೂರಿದೆ. ಸಹಸ್ರ ಸಂಖ್ಯೆಯಲ್ಲಿ ಇಂದು ಮಠಕ್ಕೆ ಆಗಮಿಸಿರುವ ಭಕ್ತಾದಿಗಳೇ ಇದಕ್ಕೆ ಸಾಕ್ಷಿ. ಎಲ್ಲರ ಭಕ್ತಿ ಭಾವ ಸಮ್ಮಿಲನದ ಜೊತೆಗೆ, ಶುಭ ಸುಸಮಯದಲ್ಲಿ ಶಿವನಿಗೆ ಪೂಜೆ ನೆರವೇರಿರುವುದು ವಿಶಿಷ್ಟವಾಗಿದೆ, ಎಲ್ಲರಿಗೂ ಆನಂದ ತಂದಿದೆ. ಧನ್ಯತಾಭಾವ ಮೂಡಿಸಿದೆ ಎಂದರು.
ಹಿರಿಯ ವಿದ್ವಾಂಸ ಡಾ.ಕೆ.ಆರ್. ಶಂಕರನಾರಾಯಣ ಶಾಸ್ತ್ರಿ ಮಾತನಾಡಿ, ಚಿಕ್ಕ ದೇಗುಲವನ್ನು ಆಕರ್ಷಣೀಯವಾಗಿ ಭಕ್ತಿ ಭಾವ ಸಹಜವಾಗಿ ಮೂಡುವಂತೆ ಮಾಡುವ ಸ್ಥಳವಾಗಿ ಪರಿವರ್ತನೆ ಮಾಡುವಲ್ಲಿ ಶ್ರೀಗಳು ಕೈಗೊಂಡಿರುವ ಕಾರ್ಯ ನಮ್ಮ ಭಾಗ್ಯ ಎಂದರು.
ಕಾರ್ಯಕ್ರಮದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಶಾಸಕರಾದ ಸಿ.ಟಿ.ರವಿ, ಹರತಾಳು ಹಾಲಪ್ಪ, ಪ್ರಕಾಶ ಬೆಳ್ಳಿ, ಸುಕುಮಾರ ಶೆಟ್ಟಿ ಆರ್ಎಸ್ಎಸ್ ಪ್ರಮುಖರಾದ ಡಾ. ಕಲ್ಲಡ್ಕ ಪ್ರಭಾಕರ ಭಟ್, ಹೊರನಾಡು ಧರ್ಮದರ್ಶಿ ಡಾ.ಭೀಮೇಶ್ವರ ಜೋಷಿ, ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಅಶೋಕ ಹಾರ್ನಹಳ್ಳಿ, ಹವ್ಯಕ ಮಹಾಮಂಡಲದ ಅಧ್ಯಕ್ಷ ಆರ್.ಎಸ್.ಹೆಗಡೆ, ಕೈಗಾರಿಕ ನಿಗಮದ ಅಧ್ಯಕ್ಷ ದತ್ತಾತ್ರಿ ಮತ್ತಿತರರು ಇದ್ದರು.