ರಿಪ್ಪನ್ಪೇಟೆ: ಗೋಹತ್ಯೆ ನಿಷೇಧದ ನಂತರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಕುರಿ ಕೋಳಿ ಮೇಕೆ ಸಾಕಾಣಿಕೆಕೆಗೆ ಹೆಚ್ಚಿನ ಉತ್ತೇಜನ ನೀಡುತ್ತಿದ್ದು ಇದರಿಂದ ರೈತರ ಆರ್ಥಿಕ ಅಭಿವೃದ್ದಿಗೆ ದ್ವಿಗುಣಗೊಳ್ಳಲು ಸಹಕಾರಿಯಾಗುವವುದೆಂದು ಜಿಲ್ಲಾ ಪಶುಪಾಲನ ಇಲಾಖೆಯ ಉಪನಿರ್ದೇಶಕ ಡಾ.ಶಿವಯೋಗಿ.ಬಿ. ಹೇಳಿದರು.
ರಿಪ್ಪನ್ಪೇಟೆಯ ಕುವೆಂಪು ಸಭಾಭವನದಲ್ಲಿ ಹೊಸನಗರ ಪಶುಪಾಲನ ಇಲಾಖೆ ಪಶುಪಾಲನ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರ ದಾವಣಗೆರೆ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮ ಗ್ರಾ.ಪಂ. ರಿಪ್ಪನ್ಪೇಟೆ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಆಸಕ್ತ ರೈತರಿಗೆ ಮೂರು ದಿನಗಳ ವೈಜ್ಞಾನಿಕ ಕುರಿ, ಮೇಕೆ, ಹಂದಿ ಸಾಕಾಣೆ ತರಬೇತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ರೈತರು ಕೃಷಿಯೊಂದಿಗೆ ಕೋಳಿ, ಕುರಿ, ಮೇಕೆಗಳನ್ನು ಸಾಕಾಣಿಕೆ ಮಾಡುವುದರಿಂದ ಕೈಗಾರಿಕ ಉದ್ಯಮಿಗಳು ಗಳಿಸುವ ಆದಾಯಕ್ಕಿಂತ ಹೆಚ್ಚಿನ ಆದಾಯವನ್ನು ಹೈನೋದ್ಯಮದಿಂದ ಪಡೆಯಬಹುದಾಗಿದೆ ಎಂದು ವಿವರಿಸಿದರು.
ಗ್ರಾ.ಪಂ. ಉಪಾಧ್ಯಕ್ಷೆ ಮಹಾಲಕ್ಷ್ಮಿ ಅಣ್ಣಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಬಯಲು ಸೀಮೆ ಪ್ರದೇಶದಲ್ಲಿ ಕುರಿ, ಕೋಳಿ, ಹಂದಿ ಸಾಕಾಣಿಕೆಯಿಂದ ರೈತರು ಆರ್ಥಿಕವಾಗಿ ಪ್ರಗತಿ ಹೊಂದಿರುತ್ತಾರೆ. ಆದರೆ ಮಲೆನಾಡಿನ ವ್ಯಾಪ್ತಿಯಲ್ಲಿ ಹೈನುಗಾರಿಕೆಗೆ ಹವಾಮಾನದ ಅನಾನುಕೂಲತೆಯಿಂದಾಗಿ ಸಾಕಷ್ಟು ಸಂಕಷ್ಟ ಎದುರಿಸುವಂತಾಗಿತ್ತು. ಆದರೆ ಈಗ ಸರ್ಕಾರದ ಪ್ರೋತ್ಸಾಹದಿಂದಾಗಿ ಮಲೆನಾಡಿನ ವ್ಯಾಪ್ತಿಯಲ್ಲೂ ಹವಾಮಾನ ಅನುಗುಣವಾಗಿ ಕೋಳಿ, ಕುರಿ ತಳಿಗಳನ್ನು ಅಭಿವೃದ್ದಿ ಪಡಿಸಲಾಗಿದ್ದು ಇದರ ಸದುಪಯೋಗವನ್ನು ಮಲೆನಾಡಿನ ರೈತ ಸಮೂಹ ಪಡೆದುಕೊಳ್ಳುವಂತೆ ಕರೆ ನೀಡಿದರು.
ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೊಸನಗರ ತಾಲ್ಲೂಕು ಪಶುಪಾಲನ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಕೆ.ಎಂ.ನಾಗರಾಜ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದ ಸಹಾಯಕ ನಿರ್ದೇಶಕ ಡಾ.ಡಿ.ಬಿ.ಶಿವರಾಜ್, ಪಿ.ಡಿ.ಒ.ಜಿ.ಚಂದ್ರಶೇಖರ್, ಗ್ರಾ.ಪಂ. ಸದಸ್ಯರಾದ ದೀಪ, ಅಶ್ವಿನಿ, ವನಮಾಲ, ವಿನೋದ, ದಾನಮ್ಮ, ಸುಂದರೇಶ್ ಇನ್ನಿತರರು ಭಾಗವಹಿಸಿದ್ದರು.
ಇದೆ ಸಂದರ್ಭದಲ್ಲಿ ಪಶು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಟಿ.ವಿ.ಗೀರೀಶ್, ಡಾ.ಕೆ.ಧನಂಜಯ್, ಡಾ.ಶರತ್.ವಿ.ಸಾಗರ್, ಡಾ.ಪಣಿರಾಜ್ ಇನ್ನಿತರರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ತರಬೇತಿ ನೀಡಿದರು.