ಎನ್.ಆರ್ ಪುರ : ವಿವಾಹ ನಿಶ್ಚಯವಾಗಿದ್ದ ಯುವತಿಯೊರ್ವಳು ನೇಣು ಬಿಗಿದುಕೊಂಡು ಮೃತಪಟ್ಟ ಘಟನೆ ಪಟ್ಟಣದಲ್ಲಿ ನಡೆದಿದೆ.
ತಾಲ್ಲೂಕಿನ ಜೈಲ್ ರಸ್ತೆ ಸಮೀಪದ ಆಜಾದ್ ಗಲ್ಲಿ ನಿವಾಸಿ ರಂಜಾನ್ ಸಾಬ್ ಎಂಬುವವರ ಪುತ್ರಿ ನಾಜನೀನ್ ಬಾನು (23) ಮೃತಪಟ್ಟ ಯುವತಿ.
ನಾಜನೀನ್ ಅವರಿಗೆ ಮುಂದಿನ ತಿಂಗಳು ವಿವಾಹ ನಿಶ್ಚಯವಾಗಿತ್ತು. ಆಕೆಯ ವಿವಾಹಕ್ಕೆ ಮನೆಯವರು ಸಕಲ ಸಿದ್ಧತೆಯನ್ನು ನಡೆಸುತ್ತಿದ್ದರು. ನಾಜನೀನ್ ಸಹ ಉತ್ಸಾಹದಿಂದಲೇ ವಿವಾಹ ಪೂರ್ವ ಸಿದ್ಧತೆಗಳಲ್ಲಿ ತೊಡಗಿದ್ದರು. ಕೆಲ ವಸ್ತುಗಳ ಖರೀದಿಸಲು ನರಸಿಂಹರಾಜಪುರ ಪಟ್ಟಣಕ್ಕೆ ತೆರಳುತ್ತಿರುವುದಾಗಿ ಮನೆಯವರಿಗೆ ಮಾಹಿತಿ ನೀಡಿ ಮನೆಯಿಂದ ಹೊರಟಿದ್ದರು. ಹೊತ್ತು ಕಳೆದರೂ ಆಕೆ ಮರಳದಿದ್ದರಿಂದ ಗಾಬರಿಗೊಂಡ ಮನೆಯವರು ಎಲ್ಲೆಡೆ ಹುಡುಕಾಟ ನಡೆಸಿದ್ದಾರೆ.
ಬಳಿಕ ಜೈಲ್ ರಸ್ತೆಯ ತೋಟದ ಮನೆಗೆ ಹೋಗಿ ಹುಡುಕಾಡಿದಾಗ ಅಲ್ಲಿನ ಮನೆಯ ಛಾವಣಿಗೆ ವೇಲ್ ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಸ್ಥಿತಿಯಲ್ಲಿ ನಾಜನೀನ್ ಬಾನು ಮೃತದೇಹ ಪತ್ತೆಯಾಗಿದೆ.
ಘಟಗೆ ಕುರಿತು ಮೃತಳ ತಾಯಿ ಆಯುಷಾ ಬಾನು ಪೊಲೀಸರಿಗೆ ದೂರು ನೀಡಿದ್ದು, ನನ್ನ ಪತಿಗೆ ಆರೋಗ್ಯ ಸಮಸ್ಯೆಯಿರುವುದರಿಂದ ಪುತ್ರಿ ನೊಂದಿದ್ದಳು. ತನ್ನ ವಿವಾಹದ ಖರ್ಚು ವೆಚ್ಚಗಳಿಂದ ಇಬ್ಬರು ತಂಗಿಯರು, ಓರ್ವ ತಮ್ಮನ ವಿದ್ಯಾಭ್ಯಾಸಕ್ಕೆ ಹಾಗೂ ಸಂಸಾರದ ಜವಾಬ್ದಾರಿಗಳನ್ನು ನಿರ್ವಹಿಸಲು ಕುಟುಂಬಕ್ಕೆ ಕಷ್ಟಕರವಾಗಲಿದೆ ಎಂದು ಮನನೊಂದು ಆತ್ಮಹತ್ಯೆ ನಿರ್ಧಾರ ಕೈಗೊಂಡಿದ್ದಾಳೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಸದ್ಯದಲ್ಲೇ ಹಸೆಮಣೆ ಏರಬೇಕಿದ್ದ ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.
ಈ ಸಂಬಂಧ ನರಸಿಂಹರಾಜಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Related