ಶಿವಮೊಗ್ಗ: ನಗರದಲ್ಲಿ ಬಿಸಿಲಿನ ಧಗೆ ಹೆಚ್ಚಾಗಿರುವ ಕಾರಣ ಹೆಲ್ಮೆಟ್ ಧಾರಣೆಗೆ ವಿನಾಯಿತಿ ನೀಡಬೇಕೆಂದು ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿಗೆ ರಾಜ್ಯ ನಾಗರೀಕ ರಕ್ಷಣಾ ಸಮಿತಿ ವತಿಯಿಂದ ಮನವಿ ಸಲ್ಲಿಸಿದ್ದಾರೆ.
ಶಿವಮೊಗ್ಗ ನಗರದಲ್ಲಿ ಬಿಸಿಲಿನ ಧಗೆ ದಿನೇ ದಿನೇ ಹೆಚ್ಚುತ್ತಿರುವ ಕಾರಣ ಜನಸಾಮಾನ್ಯರು ಪರದಾಡುವಂತಾಗಿದೆ ಮತ್ತು ಬಿಸಿಲು ಇರುವ ಸಂದರ್ಭದಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುವಾಗ ಹೆಲ್ಮೆಟ್ ಅನ್ನು ಧರಿಸಿರುವಾಗ ಅಲರ್ಜಿ ಸೇರಿದಂತೆ ನಾನಾ ಸಮಸ್ಯೆಗಳು ಹೆಚ್ಚಾಗುತ್ತಿವೆ ಹಾಗೂ ಹಿರಿಯ ನಾಗರೀಕರು ಬಿಸಿಲಿನಲ್ಲಿ ಹೆಲ್ಮೆಟ್ ಧಾರಣೆ ಮಾಡಿ ಪ್ರಯಾಣಿಸುವಾಗ ತಲೆಸುತ್ತು ಬರುವಂತಹ ಸಮಸ್ಯೆಗಳು ಹೆಚ್ಚಾಗುತ್ತಿವೆ.
ಆದ್ದರಿಂದ ದೂರ ಪ್ರಯಾಣ ಮಾಡುವ ಸ್ಥಳಗಳಲ್ಲಿ ಹೆಲ್ಮೆಟ್ ಪರಿಶೀಲನೆ ಮುಂದುವರಿಸಿ ನಗರ ವ್ಯಾಪ್ತಿಗಳಲ್ಲಿ ಹೆಲ್ಮೆಟ್ ಧಾರಣೆ ಗೆ ವಿನಾಯ್ತಿ ನೀಡಿ ಹೆಲ್ಮೆಟ್ ತಪಾಸಣೆ ಬದಲಾಗಿ ವೇಗ ಮಿತಿಯನ್ನು ಪರಿಶೀಲಿಸಲು ಸೂಚಿಸಬೇಕು. ಬಿಸಿಲಿನಿಂದ ತತ್ತರಿಸಿರುವ ಹಿರಿಯ ನಾಗರಿಕರಿಗೆ ಸಹಕರಿಸಬೇಕೆಂದು ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯ ನಾಗರೀಕರ ರಕ್ಷಣಾ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್. ರಾಘವೇಂದ್ರ, ಗೌರವಾಧ್ಯಕ್ಷರಾದ ಲಕ್ಷ್ಮೀಕಾಂತ್, ಉಪಾಧ್ಯಕ್ಷರಾದ ಕೆ. ಶೇಖರ್, ಸಹ ಕಾರ್ಯದರ್ಶಿಯಾದ ಶಿವಮೊಗ್ಗ ವಿನೋದ್ ಹಾಗೂ ಶಂಭುಲಿಂಗ, ಸಂಘಟನಾ ಕಾರ್ಯದರ್ಶಿಗಳಾದ ಹರೀಶ್, ರಾಜ್ಯ ಸಂಚಾಲಕರಾದ ಮಲ್ಲೇಶಪ್ಪ ಹಾಗೂ ಪ್ರಮುಖರಾದ ಕಾರ್ಯಕರ್ತರಾದ ಕುಬೇರ ಹಾಗೂ ಷಣ್ಮುಖ ರವರು ಉಪಸ್ಥಿತರಿದ್ದರು.
Related