ಶಿವಮೊಗ್ಗ: ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರಿಗೆ ಕ್ಲೀನ್ ಚಿಟ್ ನೀಡಿದಂತೆ ಸಚಿವ ಅಶ್ವತ್ಥನಾರಾಯಣ ಅವರಿಗೂ ಸರ್ಕಾರ ರಕ್ಷಣೆ ಮಾಡಲು ಮುಂದಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದರು.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಅಶ್ವತ್ಥನಾರಾಯಣ ನನ್ನ ಬಗ್ಗೆ ಸಲ್ಲದ ಆರೋಪ ಮಾಡಿದ್ದಾರೆ. ತಿಹಾರ್ ಜೈಲೇ ಅವರಿಗೆ ಗತಿ ಎಂದು ಹೇಳಿದ್ದಾರೆ. ಅವರು ತಿಹಾರ್ ಜೈಲಿಗಾದರೂ ಹಾಕಲಿ, ಪರಪ್ಪನ ಅಗ್ರಹಾರ ಜೈಲಿಗಾದರೂ ಹಾಕಲಿ. ಆದರೆ ಅವರು ಮಾಡಿರುವ ಹಗರಣಗಳು ಮುಚ್ಚಿ ಹೋಗುವುದಿಲ್ಲ ಎಂದು ಅಶ್ವತ್ಥನಾರಾಯಣ ಅವರಿಗೆ ತಿರುಗೇಟು ನೀಡಿದರು.
ಈಗಾಗಲೇ ರಾಜ್ಯ ಸರ್ಕಾರ ಸಚಿವರ ಮೇಲೆ ಬಂದ ಆರೋಪಗಳನ್ನು ಮುಚ್ಚಿ ಹಾಕಲು ಹುನ್ನಾರ ನಡೆಸಿದೆ. ಕೆ.ಎಸ್. ಈಶ್ವರಪ್ಪ ಮೇಲೆ ಬಂದ ಆರೋಪವನ್ನು ಸಚಿವರು, ಕೆಲವು ಹಿರಿಯರು ಕ್ಲೀನ್ ಚಿಟ್ ನೀಡಿದಂತೆ ಅಶ್ವತ್ಥನಾರಾಯಣ ಅವರ ಮೇಲೆ ಬಂದ ಆರೋಪಗಳನ್ನು ಮುಚ್ಚಿ ಹಾಕಲು ಹೊರಟಿದ್ದಾರೆ ಎಂದು ಟೀಕಿಸಿದರು.
ಬಿಜೆಪಿ ಸರ್ಕಾರ ಈ ರಾಜ್ಯಕ್ಕೆ ದ್ರೋಹ ಬಗೆದಿದೆ. ಪಿಎಸ್ಐ ಹಗರಣ ಸೇರಿದಂತೆ ಎಲ್ಲಾ ನೇಮಕಾತಿಗಳಲ್ಲೂ ಅಕ್ರಮ ನಡೆದಿದೆ. ಉದ್ಯೋಗ ಬಯಸುವ ಯುವ ಆಕಾಂಕ್ಷಿಗಳಿಗೆ ದ್ರೋಹ ಮಾಡಿದೆ. ಪ್ರಶ್ನೆ ಪತ್ರಿಕೆಗಳ ಬಹಿರಂಗಗೊಂಡಿವೆ. ಪ್ರತಿಯೊಂದು ಹುದ್ದೆಗಳ ನೇಮಕಾತಿಯಲ್ಲಿ ಹಗರಣ ನಡೆದಿದೆ. ಆದರೆ, ಅದರ ರೂವಾರಿಗಳಾದ ಸಚಿವರ ಪಾತ್ರವನ್ನು ಮಾತ್ರ ರಾಜ್ಯ ಸರ್ಕಾರ ಮುಚ್ಚಿ ಹಾಕಿದೆ ಎಂದು ದೂರಿದರು.
ಉಪನ್ಯಾಸಕರ ನೇಮಕಾತಿಯಲ್ಲಿ ಫೋನ್ ಮೂಲಕವೇ ಅವ್ಯವಹಾರ ನಡೆದಿರುವುದು ಪತ್ತೆಯಾಗಿದ್ದರೂ ರಾಜ್ಯ ಸರ್ಕಾರ ಸುಮ್ಮನಿದೆ ಎಂದರು.
ಕಾಂಗ್ರೆಸ್ ಪಾದಯಾತ್ರೆ ಬಗ್ಗೆ ಹಗುರವಾಗಿ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಹೇಳಿಕೆಗೆ ತಿರುಗೇಟು ನೀಡಿದ ಡಿ.ಕೆ. ಶಿವಕುಮಾರ್, ಇದು ಚುನಾವಣೆ ಗಿಮಿಕ್ ಅಲ್ಲ. ಹಾಗಾದರೆ ಹಿಂದೆ ಯಡಿಯೂರಪ್ಪನವರು ಮಾಡಿದ ಪಾದಯಾತ್ರೆ, ಲಾಲ್ ಕೃಷ್ಣ ಅಡ್ವಾಣಿಯವರ ರಥಯಾತ್ರೆ ಇವೆಲ್ಲವೂ ಗಿಮಿಕ್ಕೇ ಎಂದು ಪ್ರಶ್ನಿಸಿದರು.
ಶಿವಮೊಗ್ಗಕ್ಕೆ ವಿಶೇಷ ಭೇಟಿ ನೀಡಿರುವೆ. ಇದು ಸಂಸ್ಕೃತಿಯ ನಾಡು. ಇಂತಹ ಮಲೆನಾಡು ಜಿಲ್ಲೆಯನ್ನು ಗೃಹ ಸಚಿವರು, ಮಾಜಿ ಸಚಿವ ಈಶ್ವರಪ್ಪನವರು ಶಾಂತಿ ಕದಡುವ ಕೆಲಸ ಮಾಡಿದ್ದಾರೆ. 144 ಸೆಕ್ಷನ್ ಉಲ್ಲಂಘನೆ, ಕೋಮು ಗಲಭೆ ನಡುವೆ ಶಿವಮೊಗ್ಗ ನಲುಗಿ ಹೋಗಿದೆ. ಶಿವಮೊಗ್ಗದಲ್ಲಿ ಹೊಸ ಉದ್ಯೋಗಗಳನ್ನು ಕಲ್ಪಿಸುವುದಾಗಿ ಬಿಜೆಪಿ ಸರ್ಕಾರ ಹೇಳಿತ್ತು. ಆದರೆ, ಇರುವ ಎರಡು ಕಾರ್ಖಾನೆಗಳು ಮುಚ್ಚಿ ಹೋಗಿವೆ. ಇವರು ಕೋಮುವಾದವನ್ನು ಅಭಿವೃದ್ಧಿಪಡಿಸುತ್ತಾರೆ ಹೊರತು ಅಭಿವೃದ್ಧಿ ಕಾರ್ಯಗಳನ್ನಲ್ಲ. ಇಲ್ಲಿ ಉದ್ಯೋಗಗಳನ್ನು ಸೃಷ್ಠಿಸಲಿ ಎಂದು ಹೇಳಿದರು.
ಮಸೀದಿ ಮತ್ತು ದೇವಸ್ಥಾನದ ಮೈಕ್ ಗಳಿಗೆ ಸಂಬಂಧಿಸಿದಂತೆ ಸರ್ಕಾರ ಆದೇಶ ನೀಡಿ ನಿರ್ಬಂಧ ತರುವ ಬದಲು ಹೊರಗಡೆ ನಡೆಯುವ ಪಾರ್ಟಿಗಳನ್ನು ತಡೆಯಲಿ ಎಂದು ಹೇಳಿದರು.
Related