ಶಿವಮೊಗ್ಗ: ಹುಣಸೋಡು ಸ್ಫೋಟ ಪ್ರಕರಣ ನಡೆದು 2 ತಿಂಗಳಾದರು ತನಿಖೆಯ ವಿಷಯದಲ್ಲಿ ಏನು ಸಾಧನೆಯಾಗಿಲ್ಲ. ತನಿಖೆ ದಿಕ್ಕು ತಪ್ಪಿಸಲಾಗುತ್ತಿದೆ. ಕೂಡಲೆ ಸಿಬಿಐ ಅಥವಾ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ಮಾಡಿಸಬೇಕು ಎಂದು ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್ ಆಗ್ರಹಿಸಿದರು.
ಇಡೀ ಕರುನಾಡನ್ನೇ ಬೆಚ್ಚಿಬೀಳಿಸಿದ ಘಟನೆ ಅದು. ಘಟನೆ ನಡೆದು 2 ತಿಂಗಳಾಯಿತು. 6 ಜನರು ಮೃತಪಟ್ಟಿದ್ದರು. ನಾವು ಅವಾಗಲೇ ಹೇಳಿದ್ದೆವು. ತನಿಖೆ ದಿಕ್ಕು ತಪ್ಪುತ್ತಿದೆ ಎಂದು ನಾವು ಹೇಳಿದ್ದೆ ನಿಜವಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪನವರು ತನಿಖೆ ಸರಿಯಾದ ರೀತಿಯಲ್ಲಿ ನಡೆಯಲು ಬಿಡುತ್ತಿಲ್ಲ. ಪ್ರಮುಖ ಆರೋಪಿಗಳನ್ನು ಪೊಲೀಸರು ಹಿಡಿದ ತಕ್ಷಣವೇ ಬಿಡಿಸುತ್ತಿದ್ದಾರೆ. ಏಕೆ ಹೀಗೆ ಎಂದು ಪ್ರಶ್ನೆ ಮಾಡಿದರು.
ಕ್ರಷರ್ ಮಾಲೀಕ ಸುಧಾಕರ್, ಅಲ್ಲಿ ಕೆಲಸ ಮಾಡುವ ನರಸಿಂಹ, ಮತ್ತೊಬ್ಬ ಈ 3 ಜನರೇ ಆರೋಪಿಗಳೆ ಇದರ ಹಿಂದೆ ಯಾರು ಇಲ್ಲವೆ ಕಿಂಗ್ಪಿನ್ ಎನಿಸಿಕೊಂಡವರು ಬಂಧಿತರಾದರು ಬಿಡುಗಡೆಯಾಗುವುದು ಏಕೆ. ಅವರಿಗೆ ಸರ್ಕಾರ ಏಕೆ ರಕ್ಷಣೆಕೊಡುತ್ತಿದೆ. ಪೊಲೀಸರೇಕೆ ಈ ಸ್ಫೋಟ ಪ್ರಕರಣವನ್ನು ಸರಿಯಾಗಿ ಏಕೆ ತನಿಖೆ ಮಾಡುತ್ತಿಲ್ಲ ಎಂದರು.
ಸದನದಲ್ಲಿಯೂ ಕೂಡ ನಮ್ಮ ನಾಯಕರು ತನಿಖೆಗೆ ಆಗ್ರಹಿಸಿದ್ದರು. ಆದರೂ ಕೂಡ ಸರ್ಕಾರ ಕಿವಿಗೆ ಹಾಕಿಕೊಂಡಿಲ್ಲ. ಸ್ಫೋಟಕ ವಸ್ತುಗಳು ಎಲ್ಲಿಂದ ಬಂದವು. ಯಾವ ಯಾವ ಕಲ್ಲು ಕ್ವಾರಿಗಳನ್ನು ಅವು ತಲುಪಬೇಕಿತ್ತು. ಮುಂತಾದ ವಿಷಯಗಳನ್ನು ಸಂಗ್ರಹಿಸಲು 60 ದಿನಗಳಾದರು ಪೊಲೀಸರಿಗೆ ಏಕೆ ಸಾಧ್ಯವಾಗಿಲ್ಲ. ಇದೆಲ್ಲವನ್ನು ಗಮನಿಸಿದರೆ ತನಿಖೆ ದಾರಿ ತಪ್ಪಿದೆ ಎಂದೇ ಅರ್ಥ.
ಬಿಜೆಪಿ ನಾಯಕರ ಅಭಯವಿಲ್ಲದೆ ಇದು ಹೇಗೆ ನಡೆಯಲು ಸಾಧ್ಯ. ಆದ್ದರಿಂದ ಸಿಬಿಐ ತನಿಖೆಗೆ ಅಥವಾ ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ಮಾಡಿ ನಿಜವಾದ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.