ಹೊಸ ದೇವಾಲಯ ನಿರ್ಮಾಣಕ್ಕಿಂತ ದೇವಾಲಯದ ಜೀರ್ಣೋದ್ಧಾರ ಶ್ರೇಷ್ಠ ಕಾರ್ಯ ; ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ
ಹೊಸನಗರ : ಹೊಸ ದೇವಾಲಯ ನಿರ್ಮಾಣಕ್ಕಿಂತ ದೇವಾಲಯದ ಜೀರ್ಣೋದ್ಧಾರ ಶ್ರೇಷ್ಠ ಕಾರ್ಯ. ಕಾರಣಗಿರಿ ಶ್ರೀ ಸಿದ್ಧಿವಿನಾಯಕ ದೇವಾಲಯವು ಪೂರ್ಣ ಪ್ರಮಾಣದಲ್ಲಿ ಶಿಲಾಮಯವಾಗಿ ಅಭಿವೃದ್ಧಿ ಪಡಿಸಿರುವುದು ಶ್ಲಾಘನೀಯ ಎಂದು ರಾಮಚಂದ್ರಾಪುರ ಮಠದ ಶ್ರೀ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಹೇಳಿದರು.
ಕಾರಣಗಿರಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ನವೀಕೃತ ಗರ್ಭಗುಡಿಯಲ್ಲಿ ಶ್ರೀ ದೇವರ ಪುನಃಪ್ರತಿಷ್ಠೆ, ಶಿಖರ ಪ್ರತಿಷ್ಠೆ ಕಾರ್ಯ ನೆರವೇರಿಸಿ ಅವರು ಆಶೀರ್ವಚನ ನೀಡಿದರು.
ರಾಮಚಂದ್ರಾಪುರ ಮಠಕ್ಕೂ ಕಾರಣಗಿರಿ ದೇವಸ್ಥಾನಕ್ಕೂ ಅವಿನಾಭಾವ ಸಂಬಂಧವಿದ್ದು 33ನೇ ಯತಿಗಳಾದ ಶ್ರೀ ರಾಘವೇಶ್ವರ ಭಾರತೀ ಶ್ರೀಗಳ ಕಾಲದಲ್ಲಿ ದೇವಸ್ಥಾನದ ವಿಗ್ರಹ ಪ್ರತಿಷ್ಠೆ, ನಂದಾದೀಪ, ನಿತ್ಯ ಪೂಜೆಗಾಗಿ ಸಹಾಯ ಮಾಡಿದ ಉಲ್ಲೇಖವಿದ್ದು ಈ ಹಿಂದೆ ರಾಮಚಂದ್ರ ಭಾರತೀ ಸ್ವಾಮಿಗಳ ಅನಾರೋಗ್ಯವಿದ್ದಾಗ ಕಾರಣಗಿರಿ ಸಿದ್ಧಿವಿನಾಯಕನಿಗೆ ಹರಕೆ ಮಾಡಿಕೊಂಡಿದ್ದ ದಾಖಲೆಗಳನ್ನ ಉಲ್ಲೇಖಿಸಿದರು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್. ಡಿ. ನಾಗೇಂದ್ರರಾವ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಾಸುದೇವ ಉಡುಪ, ಕಾರ್ಯಾಧ್ಯಕ್ಷ ಪ್ರಭಾಕರ್, ಅರ್ಚಕ ಗಜಾನನ ಭಟ್ ಮುಂತಾದವರು ಉಪಸ್ಥಿತರಿದ್ದರು.
ವಾಸ್ತುತಜ್ಞ ಬಾ.ನಾ. ಜಗದೀಶ್ ಭಟ್ ಸಾಗರ, ಶಿಲ್ಪಿ ಶಂಕರಾಚಾರ್ರನ್ನು ಗೌರವಿಸಲಾಯಿತು. ಹನಿಯ ರವಿ ಪ್ರಸ್ತಾವನೆಗೈದರು.