ಹೊಸನಗರದ ಕೆಇಬಿ ಸರ್ಕಲ್ ಇನ್ಮುಂದೆ ಪುನೀತ್ ರಾಜ್‍ಕುಮಾರ್ ವೃತ್ತ ; ಶಾಸಕ ಬೇಳೂರು ಘೋಷಣೆ

0 501

ಹೊಸನಗರ : ಪಟ್ಟಣದ ನಗರ ರಸ್ತೆಯ ಲೋಕೋಪಯೋಗಿ ಇಲಾಖೆ ಮೆಸ್ಕಾಂ ಇಲಾಖೆ ಅರಣ್ಯ ಅಧಿಕಾರಿಗಳ ಕಚೇರಿ ಸಂಪರ್ಕಿಸುವ ವೃತ್ತವನ್ನು ಸುಸಜ್ಜಿತವಾಗಿ ರಚಿಸಿ ಈ ವೃತ್ತವನ್ನು ಮುಂದೆ ಯುವರತ್ನ ಡಾ|| ಪುನೀತ್ ರಾಜ್‍ಕುಮಾರ್ ವೃತ್ತ ಎಂದು ನಾಮಕರಣ ಮಾಡಬೇಕೆಂದು ಶಾಸಕ ಬೇಳೂರು ಗೋಪಾಲಕೃಷ್ಣ ಘೋಷಿಸಿದರು.

ವಿಧಾನಸಭಾ ಚುನಾವಣೆ ವೇಳೆ ಹೊಸನಗರಕ್ಕೆ ಭೇಟಿ ನೀಡಿದ ನಟ ಡಾ|| ಶಿವರಾಜ್ ಕುಮಾರ್ ಅವರು ಸಹ ಈ ವೃತ್ತದಲ್ಲಿ ನಿಂತು ಈ ವೃತ್ತದಲ್ಲಿದ್ದ ತಮ್ಮ ಸಹೋದರನ ಭಾವಚಿತ್ರಕ್ಕೆ ಅಶ್ವತರ್ಪಣದೊಂದಿಗೆ ಪುಷ್ಪ ನಮನ ಸಲ್ಲಿಸಿದ್ದ ಕ್ಷಣ.

ಅವರು ಇಂದು ಪಟ್ಟಣದ ಕುವೆಂಪು ವಿದ್ಯಾ ಶಾಲೆಯ ಆವರಣದಲ್ಲಿ ಏರ್ಪಡಿಸಿದ ಶರಣ ಸಾಹಿತ್ಯ ಸಮ್ಮೇಳನದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳುತ್ತಿರುವಾಗ ಈ ವೃತ್ತದಲ್ಲಿ ನಿಂತು ಈಗ ಈ ರಸ್ತೆ ರಾಷ್ಟ್ರೀಯ ಹೆದ್ದಾರಿ 776 ಸಿ ಅಗಲೀಕರಣ ಕಾಮಗಾರಿ ನಡೆಯಲಿದ್ದು ಈ ಸಂದರ್ಭದಲ್ಲಿ ಇಲ್ಲಿ ಸುಸಜ್ಜಿತ ವೃತ್ತವನ್ನು ನಿರ್ಮಿಸುವಂತೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮಾಲೋಚಿಸುವಂತೆ ತಮ್ಮ ಕಚೇರಿ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು ಅವರಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಕಳೂರು ಸೇವಾ ಸಹಕಾರ ಸಂಘದ ಅಧ್ಯಕ್ಷ ಡಿ ಆರ್ ವಿನಯ್, ಪಟ್ಟಣ ಪಂಚಾಯತಿ ಸದಸ್ಯ ಕೆ ಕೆ ಅಶ್ವಿನಿ ಕುಮಾರ್, ಪುನೀತ್ ರಾಜ್‍ಕುಮಾರ್ ಕನ್ನಡ ಸಂಘದ ಅಧ್ಯಕ್ಷ ಪ್ರಶಾಂತ್, ಬಾವಿಕಟ್ಟೆ ಸತೀಶ್, ಗಣೇಶ ಸಿಟಿ ಮಂಜು, ಕೆ ಪಿ ಮಾಲತೇಶ್, ಕಾಳಿಕಾಪುರ ಗಣೇಶ್, ನಾಗರಾಜ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!