ಸರ್ಕಾರಿ ಬಸ್ ಮತ್ತು ಕಾರಿನ ನಡುವೆ ಡಿಕ್ಕಿ ; ಇಬ್ಬರ ಸ್ಥಿತಿ ಗಂಭೀರ
ತರೀಕೆರೆ : ತಾಲ್ಲೂಕಿನ ಬೇಲೇನಹಳ್ಳಿ ಗ್ರಾಮದ ಸಮೀಪ ಮಂಗಳವಾರ ಬೆಳಗಿನ ಜಾವ ಕೆಎಸ್ಆರ್ಟಿಸಿ ಬಸ್ ಹಾಗೂ ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ 9 ಮಂದಿಗೆ ಗಾಯಗಳಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ.
ಗಾಯಾಳುಗಳನ್ನು ಹಾವೇರಿ ಜಿಲ್ಲೆ ಹಿರೇಕೆರೂರಿನ ನಿವಾಸಿಗಳಾದ ಇಮ್ರಾನ್ (35) ಮಮ್ತಾಜ್ (40) ನಾಜಿಯಾ (25) ಆಶೀಯಾ (28) ಸುಹಾನ್ (13) ಜಾಕೀರ್ (37) ಜುನೇದ್ (17) ಹಾಗೂ ಮದರ್ಸಾಬ್ (45) ಎಂದು ಗುರುತಿಸಲಾಗಿದೆ.
ಇವರೆಲ್ಲರೂ ಸೋಮವಾರ ಕಡೂರು ಪಟ್ಟಣದಲ್ಲಿ ಮದುವೆಗೆ ಗೊತ್ತಾಗಿರುವ ವಧುವಿನ ಮನೆಗೆ ಮಾತುಕತೆಗೆ ಒಂದೇ ಕಾರಿನಲ್ಲಿ ಹೋಗಿದ್ದರು. ಮಂಗಳವಾರ ನಸುಕಿನ 1 ಗಂಟೆ ಸಮಯದಲ್ಲಿ ಊರಿಗೆ ಹಿಂತಿರುಗುವಾಗ ಬೇಲೇನಹಳ್ಳಿ ಗ್ರಾಮದ ಬಳಿ ಅಪಘಾತ ಸಂಭವಿಸಿದೆ.
ಶಿವಮೊಗ್ಗ ಕಡೆಯಿಂದ ಬೆಂಗಳೂರಿಗೆ ಹೊರಟಿದ್ದ ಕೆಎಸ್ಆರ್ಟಿಸಿ ಬಸ್ ಕಾರಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಇಮ್ರಾನ್ ಮತ್ತು ಮಮ್ತಾಜ್ ಎಂಬುವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಶಿವಮೊಗ್ಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತರೀಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.