ಬ್ರಾಹ್ಮಣ ವಿದ್ಯಾರ್ಥಿನಿಗೆ ಶಾಲೆಯಲ್ಲಿ ಒತ್ತಾಯ ಪೂರ್ವಕವಾಗಿ ಮೊಟ್ಟೆ ತಿನ್ನಿಸಿದ ಆರೋಪ ; ಶಿಕ್ಷಕನಿಂದ ಕ್ಷಮೆಯಾಚನೆ
ರಿಪ್ಪನ್ಪೇಟೆ: ಸಮೀಪದ ಅಮೃತ (Amrutha) ಗ್ರಾಮದ ಕೆಪಿಎಸ್ (KPS) ಪ್ರಾಥಮಿಕ ಶಾಲೆಯಲ್ಲಿ (School) ಬ್ರಾಹ್ಮಣ ವಿದ್ಯಾರ್ಥಿನಿಗೆ ಶಾಲಾ ಶಿಕ್ಷಕರೊಬ್ಬರು ಮೊಟ್ಟೆ (Egg) ತಿನ್ನುವಂತೆ ಒತ್ತಡ ಹಾಕಿದ ಘಟನೆಯೊಂದು ಬೆಳಕಿಗೆ ಬರುವುದರೊಂದಿಗೆ ಪೋಷಕ ವರ್ಗದವರ ಆಕ್ರೋಶಕ್ಕೆ ಕಾರಣವಾಗಿತ್ತು.
ರಾಜ್ಯ ಸರ್ಕಾರ ಶಾಲಾ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುವ ಮಹತ್ವಾಕಾಂಕ್ಷಿ ಯೋಜನೆಯಡಿ ಶಾಲಾ ಶಿಕ್ಷಕರು ಮಕ್ಕಳಿಗೆ ಮೊಟ್ಟೆ, ಬಾಳೆಹಣ್ಣು ಅಥವಾ ಚಿಕ್ಕಿ ನೀಡುವ ಯೋಜನೆ ಜಾರಿಯಿದೆ. ಅದರಂತೆ ಸಮೀಪದ ಅಮೃತ ಗ್ರಾಮದ ಕೆಪಿಎಸ್ ಪ್ರಾಥಮಿಕ ಶಾಲೆಯಲ್ಲಿ ಬ್ರಾಹ್ಮಣ ವಿದ್ಯಾರ್ಥಿನಿಗೆ ಶಾಲಾ ಶಿಕ್ಷಕರೊಬ್ಬರು ಮೊಟ್ಟೆ ತಿನ್ನಿಸಿದ ಪ್ರಕರಣ ಬೆಳಕಿಗೆ ಬಂದಿತ್ತು.
ಈ ಕುರಿತು ಪೋಷಕರು ಶಾಲಾ ಆಡಳಿತದ ಗಮನಕ್ಕೆ ತಂದರೂ ಕೂಡಾ ಆಡಳಿತ ವರ್ಗ ನಿರ್ಲಕ್ಷ್ಯ ತೋರಿದರಿಂದಾಗಿ ಪೋಷಕ ವರ್ಗದವರ ಆಕ್ರೋಶಕ್ಕೆ ಕಾರಣವಾಗಿತ್ತು. ಎರಡನೇ ತರಗತಿಯಲ್ಲಿ ಸುಮಾರು 26 ಮಕ್ಕಳಿರುವ ಕೊಠಡಿಯಲ್ಲಿ 10 ವಿದ್ಯಾರ್ಥಿಗಳು ನಿತ್ಯ ಚಿಕ್ಕಿ ಸೇವನೆ ಮಾಡುತ್ತಿದ್ದರೂ ಆ ಎಲ್ಲ ಮಕ್ಕಳಿಗೂ ಒತ್ತಾಯದಿಂದ ಶಿಕ್ಷಕ ಪುಟ್ಟಸ್ವಾಮಿ ಮಕ್ಕಳಿಗೆ ಮೊಟ್ಟೆ ನೀಡಿದ್ದಾರೆನ್ನಲಾಗಿದೆ.
ಈ ಕುರಿತು ಪೋಷಕರುಗಳು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ದೂರು ನೀಡಿದ್ದರು. ಗುರುವಾರ ಇಲಾಖೆಯ ಹಿರಿಯ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ವಸ್ತು ಸ್ಥಿತಿ ಕುರಿತು ಪೋಷಕರಿಂದ ಮತ್ತು ವಿದ್ಯಾರ್ಥಿಗಳಿಂದ ಮಾಹಿತಿ ಪಡೆದು ಮೇಲ್ನೋಟಕ್ಕೆ ಶಿಕ್ಷಕರು ಲೋಪ ಎಸಗಿರುವುದು ಕಂಡು ಬಂದಿದ್ದು ಶಿಕ್ಷಕರು ತಪ್ಪು ಒಪ್ಪಿಕೊಂಡ ಮೇರೆಗೆ ಪೋಷಕವರ್ಗ ದೂರು ಹಿಂಪಡೆಯುವ ಮೂಲಕ ಪ್ರಕರಣ ಸುಖ್ಯಾಂತ ಕಂಡಿತು.