ಧಾರಾಕಾರ ಮಳೆಗೆ ಮನೆ ಗೋಡೆ ಕುಸಿದು ಬಿದ್ದು ವೃದ್ಧ ಸ್ಥಳದಲ್ಲೇ ಸಾವು !
ಕಡೂರು : ಧಾರಾಕಾರ ಮಳೆಯಿಂದ ತಾಲ್ಲೂಕಿನ ಮಚ್ಷೇರಿ ಕೋಡಿಹಳ್ಳಿಯಲ್ಲಿ ಮನೆಯ ಗೋಡೆ ಕುಸಿದು ಲಚ್ಚಾನಾಯ್ಕ (80) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಸೋಮವಾರ ರಾತ್ರಿ ಮಳೆ ಅಬ್ಬರಿಸಿತ್ತು. ಇಂದು ಬೆಳಗ್ಗೆ ತೋಟಕ್ಕೆ ಹೋಗಿ ಬಂದಿದ್ದ ಲಚ್ಚಾನಾಯ್ಕ, ಮನೆಯ ಹಿಂದಿನ ಶೌಚಾಲಯದಲ್ಲಿ ಇಟ್ಟಿದ್ದ ಕೋಲು ತೆಗೆದುಕೊಳ್ಳಲು ಹೋಗಿದ್ದಾರೆ. ಇದೇ ವೇಳೆ ಕುಸಿದ ಗೋಡೆ ಅವರ ಮೇಲೆ ಬಿದ್ದಿದೆ.
ಗೋಡೆಯಡಿ ಸಿಲುಕಿದ್ದನ್ನು ಕಂಡ ಅವರ ಪತ್ನಿ ಕಾಳಿಬಾಯಿ ಕೂಗಿಕೊಂಡಿದ್ದಾರೆ. ನೆರೆಹೊರೆಯವರು ಲಚ್ಚಾನಾಯ್ಕ ಅವರನ್ನು ಹೊರ ತೆಗೆದಿದ್ದಾರೆ. ಅಷ್ಟರಲ್ಲಿ ಅವರು ಮೃತಪಟ್ಟಿದ್ದರು. ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.