Shivamogga | ಕರ್ನಾಟಕ ಬಂದ್ ; ನೀರಸ ಪ್ರತಿಕ್ರಿಯೆ

0 69

ಶಿವಮೊಗ್ಗ: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಕನ್ನಡಪರ, ರೈತ ಪರ ಸಂಘಟನೆಗಳಿಂದ ಇಂದು ಕರೆನೀಡಿದ್ದ ಕರ್ನಾಟಕ ಬಂದ್‌ಗೆ ಶಿವಮೊಗ್ಗದಲ್ಲಿ ನೀರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ನಗರದಲ್ಲಿ ಎಂದಿನಂತೆ ವಾಣಿಜ್ಯ ವಹಿವಾಟು, ಶಾಲಾ-ಕಾಲೇಜು, ಕಚೇರಿ, ಕಾರ್ಯನಿರ್ವಹಿಸಿವೆ. ವಿವಿಧ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ನೆಹರು ರಸ್ತೆ. ಬಿ.ಹೆಚ್. ರಸ್ತೆ ಸೇರಿದಂತೆ ಹಲವೆಡೆ ಅಂಗಡಿಗಳನ್ನು ಬಂದ್ ಮಾಡಿ ಕರ್ನಾಟಕ ಬಂದ್‌ಗೆ ಬೆಂಬಲಿಸುವಂತೆ ಮನವಿ ಮಾಡಿದರು.


ಆದರೂ ವ್ಯಾಪಾರಸ್ತರು ತಮ್ಮ ವ್ಯಾಪಾರ ವಹಿವಾಟು ಮುಂದುವರಿಸಿದ್ದರು. ಸರ್ಕಾರಿ ಮತ್ತು ಖಾಸಗಿ ಬಸ್ ಆಟೋ ಸೇರಿದಂತೆ ಎಲ್ಲಾ ವಾಹನಗಳ ಸಂಚಾರ ಎಂದಿನಂತೆಯೇ ಇತ್ತು. ಅಗತ್ಯ ವಸ್ತುಗಳ ಜೊತೆಗೆ ವಿವಿಧ ಅಂಗಡಿ ಮುಂಗಟ್ಟುಗಳು, ಹೋಟೆಲ್‌ಗಳು ಎಂದಿನಂತೆಯೇ ತೆರೆದಿದ್ದವು. ಜನಜೀವನ ಸಹಜವಾಗಿತ್ತು.
ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ನಗರದಲ್ಲಿ ಜಯ ಕರ್ನಾಟಕ ಜನಪರ ವೇದಿಕೆ, ಕರ್ನಾಟಕ ರಕ್ಷಣಾವೇದಿಕೆ, ರೈತ ಸಂಘ, ಕನ್ನಡ ಕಾರ್ಮಿಕರ ರಕ್ಷಣಾ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪೊಲೀಸರು ಪ್ರತಿಭಟನಕಾರರನ್ನು ವಾಹನದಲ್ಲಿ ಕರೆದೊಯ್ದರು.


ಶಿವಮೊಗ್ಗ ಸೇರಿದಂತೆ ಜಿಲ್ಲೆಯ ಎಲ್ಲಾ ಕಡೆಗಳಲ್ಲಿಯೂ ಕರ್ನಾಟಕ ಬಂದ್‌ಗೆ ನೈತಿಕ ಬೆಂಬಲ ವ್ಯಕ್ತವಾಗಿದೆ. ಎಂದಿನಂತೆ ಕಾರ್ಯಚಟುವಟಿಕೆಗಳು ನಡೆದಿವೆ.

ಪ್ರತಿಕೃತಿ ದಹನ :

ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಬಾರದು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಕನ್ನಡ ಪರ ಸಂಘಟನೆಗಳ ಒಕ್ಕೂಟ) ಇಂದು ನಗರದ ಬಸ್ ನಿಲ್ದಾಣದಿಂದ ಸೀನಪ್ಪಶೆಟ್ಟಿ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಪ್ರತಿಕೃತಿ ದಹನ ಮಾಡಿದರು.


ನೆಹರು ರಸ್ತೆಯಲ್ಲಿ ವೇದಿಕೆಯ ಸದಸ್ಯರು ಅಂಗಡಿ ಬಂದ್ ಮಾಡುವಂತೆ ವ್ಯಾಪಾರಸ್ತರಲ್ಲಿ ವಿನಂತಿಸುತ್ತಾ ಮೆರವಣಿಗೆಯಲ್ಲಿ ಬಂದರು. ಆದರೆ ಕೆಲವು ವರ್ತಕರು ಬಂದ್‌ಗೆ ವಿರೋಧ ವ್ಯಕ್ತಪಡಿಸಿ, ಹೋರಾಟಕ್ಕೆ ನೈತಿ ಬೆಂಬಲ ಸೂಚಿಸಿದರು.


ಮಧ್ಯೆ ಮಾತಿನ ಚಕಮಕಿ ನಡೆಯಿತು. ಪೊಲೀಸರು ಮಧ್ಯ ಪ್ರವೇಶಿಸಿ ಬಲವಂತದ ಬಂದ್‌ಗೆ ಅವಕಾಶವಿಲ್ಲ ಎಂದು ಹೋರಾಟಗಾರರಿಗೆ ಎಚ್ಚರಿಕೆ ನೀಡಿದ ಘಟನೆಯೂ ನಡೆಯಿತು.


ರಾಜ್ಯದಲ್ಲಿ ಈ ಬಾರಿ ಮಳೆ ಆಗಿಲ್ಲ. ಬರಗಾಲ ತಾಂಡವವಾಡುತ್ತಿದೆ. ಕುಡಿಯುವ ನೀರಿಗೆ ತೊಂದರೆ ಇದೆ. ರೈತರು ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಬಿಡುಗಡೆ ಮಾಡುತ್ತಿರುವುದು ಶೋಚನೀಯ ಸಂಗತಿ. ರಾಜ್ಯ ಸರ್ಕಾರ ತಕ್ಷಣವೇ ನೀರು ಬಿಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಮಂಜು, ಅನಿಲ್, ಅಂಬರೀಶ್, ಮಧು, ಶೈಲೇಶ್, ವಿಜಯಕುಮಾರ್ ಮೊದಲಾದವರಿದ್ದರು.

ಡಿಸಿಗೆ ಮನವಿ :

ತಮಿಳುನಾಡಿಗೆ ಕಾವೇರಿ ನೀರು ಬಿಡುವ ನೀರು ನಿಯಂತ್ರಣ ಪ್ರಾಧಿಕಾರ ಸಮಿತಿಯ ತೀರ್ಪು ಅವೈಜ್ಞಾನಿಕವಾಗಿದೆ. ಅದನ್ನು ಮರು ಪರಿಶೀಲಿಸಬೇಕು ಎಂದು ವಕೀಲರ ಸಂಘ ಇಂದು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.


ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ಖಂಡಿಸಿ ಅನೇಕ ಸಂಘ, ಸಂಸ್ಥೆಗಳು ಬಂದ್ ಕೈಗೊಂಡಿರುವುದು ಸರಿಯಾಗಿಯೇ ಇದೆ. ರಾಜ್ಯ ವಕೀಲರ ಪರಿಷತ ಇದಕ್ಕೆಬೆಂಬಲ ನೀಡಿದೆ. ಕರ್ನಾಟಕದ ನೆಲ, ಜಲ, ಗಾಳಿ, ಪರಿಸರಕ್ಕೆ ಸಂಬಂಧಿಸಿದಂತೆ ಏನೇ ಅಡೆ ತಡೆ ಬಂದರೂ ನಮ್ಮ ಸಂಘ ಅದನ್ನು ಖಂಡಿಸುತ್ತದೆ. ಮತ್ತು ಪ್ರಾಧಿಕಾರ ಸಮಿತಿ ನೀಡಿದ ತೀರ್ಪನ್ನು ಮರು ಪರಿಶೀಲಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.


ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಬಿ.ಜಿ. ಶಿವಮೂರ್ತಿ, ಅಣ್ಣಪ್ಪ, ಗಿರೀಶ್ ಎಸ್, ಜಾಧವ್, ಟೀಕೋಜಿರಾವ್, ಮಹೇಂದ್ರ ಕುಮಾರ್ ಮೊದಲಾದವರಿದ್ದರು.

ಪ್ರತಿಭಟನಾಕಾರರು ವಶಕ್ಕೆ :

ಕರ್ನಾಟಕ ರಕ್ಷಣಾ ವೇದಿಕೆ ಶಿವಮೊಗ್ಗ, ಕನ್ನಡ ಕಾರ್ಮಿಕರ ರಕ್ಷಣಾ ವೇದಿಕೆ ವತಿಯಿಂದ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಬಾರದು ಎಂದು ಆಗ್ರಹಿಸಿ ಬೆಳಿಗ್ಗೆ 6 ಗಂಟೆಗೆ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಮುಂಭಾಗ ಬಸ್ ತಡೆದು ಹೋರಾಟ ನಡೆಸಲಾಯಿತು.


ಈ ಸಂದರ್ಭದಲ್ಲಿ ಬಸ್ ತಡೆಯಲು ಹೊರಟ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದರು. ಹೋರಾಟದಲ್ಲಿ ಎರಡೂ ಸಂಘಟನೆಯ ಪ್ರಮುಖರಾದ ವಾಟಾಳ್ ಮಂಜುನಾಥ್, ಕಿರಣ್‌ಕುಮಾರ್, ಹರೀಶ್ ಮತ್ತಿತರರಿದ್ದರು.

Leave A Reply

Your email address will not be published.

error: Content is protected !!