ಕುಡಿಯುವ ನೀರು ಶುದ್ಧವಾಗಿದ್ದರೆ ಕಾಯಿಲೆಗಳು ತಡೆಗಟ್ಟಲು ಸಾಧ್ಯ ; ಶಾಸಕ ತಮ್ಮಯ್ಯ

0 65

ಚಿಕ್ಕಮಗಳೂರು : ಕುಡಿಯುವ ನೀರು ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಕುಡಿಯುವ ನೀರು ಶುದ್ಧವಾಗಿದ್ದರೆ ಎಷ್ಟೋ ಕಾಯಿಲೆಗಳನ್ನು ತಡೆಗಟ್ಟಲು ಸಾಧ್ಯ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.


ನಗರದ ಹಿರೇಮಗಳೂರಿನ ವಾರ್ಡ್ ನಂ.04 ರಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ಕುಡಿಯುವ ನೀರನ್ನು ಹೆಚ್ಚಾಗಿ ವ್ಯರ್ಥಗೊಳಿಸದೇ ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.


ಶುದ್ಧ ಕುಡಿಯುವ ನೀರಿನ ಘಟಕ ನಿವಾಸಿಗಳ ಸಲುವಾಗಿ ಮಾಡಿರುವುದು ಹಾಗಾಗಿ ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು, ನೀರಿನಿಂದ ಸಾಕಷ್ಟು ಸಾಂಕ್ರಾಮಿಕ ರೋಗಗಳು ಬರುತ್ತವೆ. ಆರೋಗ್ಯ ಕಾಪಾಡಿ ಕೊಳ್ಳಬೇಕಾದರೆ ಶುದ್ಧ ಕುಡಿಯುವ ನೀರನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದರು.


ಪ್ರತಿಯೋಬ್ಬರು ಆರೋಗ್ಯವನ್ನು ಸದೃಢವಾಗಿಟ್ಟುಕೊಳ್ಳಲು ನೀರಿನ ಬಳಕೆ ಅಚ್ಚುಕಟ್ಟಾಗಿ ಮಾಡಬೇಕು. ಅಷ್ಟೇ ಅಲ್ಲದೇ ಸರಕಾರದಿಂದ ಬರುವ ಅನೇಕ ಯೋಜನೆಗಳನ್ನು ಪಡೆದುಕೊಂಡು ಯುವಕರು ಸ್ವಯಂ ಉದ್ಯೋಗದಲ್ಲಿ ತೊಡಗಿಸಿಕೊಂಡರೆ ಸದೃಢ ಸಮಾಜ ನಿರ್ಮಾಣಕ್ಕೆ ಸಹಕಾರಿ ಎಂದು ಹೇಳಿದರು.


ನಗರಸಭಾ ಸದಸ್ಯೆ ವಿದ್ಯಾ ಬಸವರಾಜ್ ಮಾತನಾಡಿ, ಹಲವಾರು ವರ್ಷಗಳಿಂದ ಕುಡಿಯುವ ನೀರಿನ ಘಟಕ ಒದಗಿಸುವ ಸಂಬಂಧ ನಿವಾಸಿಗಳ ಬೇಡಿಕೆಯಿದ್ದ ಹಿನ್ನೆಲೆಯಲ್ಲಿ ಇದೀಗ ಘಟಕವನ್ನು ಸ್ಥಾಪಿಸಿದೆ. ನಿವಾಸಿಗಳು ಬೇಸಿಗೆ ಸಮಯವಾಗಿರುವ ಹಿನ್ನೆಲೆಯಲ್ಲಿ ನೀರನ್ನು ಹೆಚ್ಚಾಗಿ ಕುಡಿಯುವುದಕ್ಕಾಗಿ ಮಾತ್ರ ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.


ಈಗಾಗಲೇ ವಾರ್ಡ್‌ನ ರಸ್ತೆ, ಚರಂಡಿ ಸೇರಿದಂತೆ ಮೂಲಸೌಕರ್ಯಗಳ ಕಾಮಗಾರಿಗಳು ಅನಿವಾರ್ಯ ಕಾರಣಗಳಿಂದ ಸ್ಥಗಿತವಾಗಿರುವ ಹಿನ್ನೆಲೆಯಲ್ಲಿ ಶಾಸಕರು ಹಾಗೂ ನಗರಸಭಾ ಅಧ್ಯಕ್ಷರು ಮುತುವರ್ಜಿ ವಹಿಸಿ ವಾರ್ಡ್‌ನ ಕಾಮಗಾರಿಗಳಿಗೆ ಉತ್ತೇಜನ ನೀಡಿ ನಿವಾಸಿಗಳಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.


ನಗರಸಭಾ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಮಾತನಾಡಿ ಸುಮಾರು 10.74 ಲಕ್ಷ ರೂ. ವೆಚ್ಚದಲ್ಲಿ 15 ಸಾವಿರ ಸಾಮರ್ಥ್ಯವನ್ನು ಹೊಂದಿರುವ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಿದೆ. ಈ ಘಟಕದಿಂದ ಸುತ್ತಮುತ್ತಲಿನ ಜನತೆಗೆ ಬಹಳಷ್ಟು ಉಪಕಾರಿಯಾಗಲಿದೆ. ಹೀಗಾಗಿ ಹೆಚ್ಚು ವ್ಯರ್ಥಗೊಳಿಸದಂತೆ ಸೂಕ್ತ ರೀತಿಯಲ್ಲಿ ಬಳಸಿ ಕೊಳ್ಳಬೇಕು ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ನಗರಸಭಾ ಪೌರಾಯುಕ್ತ ಬಿ.ಸಿ.ಬಸವರಾಜ್, ಇಂಜಿನಿಯರ್‌ಗಳಾದ ಲೋಕೇಶ್, ರಶ್ಮಿ, ಗ್ರಾಮಸ್ಥರಾದ ಹಿರೇಮಗಳೂರು ರಾಮಚಂದ್ರ, ಸೋಮಶೇಖರ್, ಜಗದೀಶ್, ಮಂಜುನಾಥ್, ಮತ್ತಿತರರು ಹಾಜರಿದ್ದರು.

Leave A Reply

Your email address will not be published.

error: Content is protected !!