ಹಣದ ಹಿಂದೆ ಹೋಗದೆಯೆ ಬದುಕಿನ ಅನುಭವಗಳಿಗಾಗಿ ಕಲಿಯಲು ಪ್ರಯತ್ನಿಸಿ

0 64

ಶಿವಮೊಗ್ಗ: ಜೀವನ ಅನೇಕ ಅನುಭವಗಳನ್ನು ನೀಡಲಿದ್ದು, ಹಣದ ಹಿಂದೆ ಹೋಗದೆಯೆ ಬದುಕಿನ ಅನುಭವಗಳಿಗಾಗಿ ಕಲಿಯಲು ಪ್ರಯತ್ನಿಸಿ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣರಾವ್ ಹೇಳಿದರು.


ನಗರದ ರಾಷ್ಟ್ರೀಯ ಔಷಧ ಮಹಾವಿದ್ಯಾಲಯದ ವತಿಯಿಂದ ಗುರುವಾರ ಕುವೆಂಪು ರಂಗಮAದಿರದಲ್ಲಿ ಏರ್ಪಡಿಸಿದ್ದ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ ‘ಕಲಾ ಸಂಭ್ರಮ – 2023’ ಉದ್ಘಾಟಿಸಿ ಮಾತನಾಡಿದರು.
ಆಧುನಿಕತೆಯ ಭರದಲ್ಲಿ ನಾವೂ ಕಳೆದುಕೊಂಡ ವಿಚಾರಗಳನ್ನು ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ. ನಮ್ಮ ಪೂರ್ವಜರು ಕೇವಲ ಕಾಗದದ ಮೂಲಕ ಅತ್ಯುತ್ತಮ ಸಂಪರ್ಕ ಸಾಧನ ಹೊಂದಿದ್ದರು. ಇಂದಿನ ದಿನಮಾನ ಆಧುನಿಕತೆಯಿಂದ ಎಲ್ಲವನ್ನೂ ಗೆಲ್ಲಲು ಸಾಧ್ಯ ಎಂಬ ಅಂಧತ್ವದಲ್ಲಿದ್ದಾರೆ. ಆಧುನಿಕತೆಯ ಒಳಗೆ ಸಿಲುಕಿ ಯಾರಿಗೂ ಸಮಯವೇ ಇಲ್ಲ. ಒತ್ತಡ ಬದುಕಿನಲ್ಲಿ ಬೆರೆತು ಹೋಗಿದ್ದು, ಸಂಬಂಧಗಳು ನಾಶವಾಗುತ್ತಿದೆ ಎಂದರು.
ಮಾನವೀಯ ಸಂಬಂಧಗಳನ್ನು ಉಳಿಸಿಕೊಳ್ಳಬೇಕಿದೆ. ಶಿಕ್ಷಣದಲ್ಲಿ ಮಾನವೀಯ ಮೌಲ್ಯಗಳಿಗೆ, ಸಂಬಂಧಗಳಿಗೆ, ಸಂಪರ್ಕಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕಿದೆ. ಪಠ್ಯ ಜ್ಞಾನವನ್ನು ನೀಡಿದರೆ ಪಠ್ಯೇತರ ಚಟುವಟಿಕೆ ಮೌಲ್ಯವನ್ನು ನೀಡುತ್ತದೆ ಎಂದು ಹೇಳಿದರು.


ಒಳ್ಳೆಯ ಸ್ನೇಹಿತರು ಮತ್ತು ಉತ್ತಮ ಗುರಿ ತಲುಪುವ ಕನಸು ನಿಮ್ಮದಾಗಲಿ. ನಿಜವಾದ ಸ್ನೇಹಿತರು ಕನ್ನಡಿ ಮತ್ತು ತೆರಳಿದ್ದ, ಕನ್ನಡಿ ಯಾವತ್ತು ಸುಳ್ಳು ಹೇಳುವುದಿಲ್ಲ ನೆರಳು ನಮ್ಮನ್ನು ಎಂದಿಗೂ ಬಿಡುವುದಿಲ್ಲ, ಅಂತಹ ಸ್ನೇಹ ವರ್ಗ ಸಂಪಾದಿಸಿ. ಸುಲಭವಾಗಿ ಸಿಕ್ಕಿದ್ದು ಹೆಚ್ಚು ಕಾಲ ನಮ್ಮ ಬಳಿ ಉಳಿಯುವುದಿಲ್ಲ. ಹೆಚ್ಚು ಕಾಲ ಉಳಿಯುವುದು ಸುಲಭವಾಗಿ ನಮಗೆ ಸಿಗುವುದಿಲ್ಲ ಎಂದು ಕಿವಿಮಾತು ಹೇಳಿದರು.


ಹಾಸ್ಯ ಕಲಾವಿದರಾದ ಮಿಮಿಕ್ರಿ ಗೋಪಿ ಮಾತನಾಡಿ, ಪೋಷಕರು ನಮಗಾಗಿ ಅನೇಕ ಕಷ್ಟಗಳನ್ನು ಅನುಭವಿಸಿರುತ್ತಾರೆ. ಅವರಿಗೆ ಪ್ರೀತಿ ಗೌರವ ಮತ್ತು ಉತ್ತಮ ವ್ಯಕ್ತಿತ್ವದ ಮೂಲಕ ಋಣ ತೀರಿಸಲು ಪ್ರಯತ್ನಿಸಿ ಎಂದು ಹೇಳಿದರು.
ಎನ್‌ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿದರು. ರಾಷ್ಟ್ರೀಯ ಔಷಧ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಜಿ.ನಾರಾಯಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

Leave A Reply

Your email address will not be published.

error: Content is protected !!