VISL ಕಾರ್ಖಾನೆ ಮುಚ್ಚುವ ಭೀತಿ ; ತಂಗಿ ಮದುವೆ ನಡುವೆಯೇ ನೇಣಿಗೆ ಕೊರಳೊಡ್ಡಿದ ಗುತ್ತಿಗೆ ಕಾರ್ಮಿಕ !
ಭದ್ರಾವತಿ : ಪಟ್ಟಣದಲ್ಲಿರುವ ವಿಐಎಸ್ಎಲ್ ಕಾರ್ಖಾನೆ ಮುಚ್ಚುವ ಭೀತಿಯಿಂದ ಕೆಲಸ ಕಳೆದುಕೊಳ್ಳುವ ಆತಂಕಕ್ಕೆ ಮತ್ತೊಂದು ಜೀವವನ್ನು ಬಲಿ ತೆಗೆದುಕೊಂಡಿದೆ.
ಈ ಕಾರ್ಖಾನೆಯ ಗುತ್ತಿಗೆ ಕಾರ್ಮಿಕ ಚೇತನ್ ಕುಮಾರ್ (32) ಎಂಬುವವರು ತಮ್ಮ ತಂಗಿಯ ಮದುವೆ ಶಾಸ್ತ್ರದ ನಡುವೆಯೇ ನೇಣಿಗೆ ಶರಣಾಗಿದ್ದಾರೆ. ನಗರದ ದೈವಜ್ಞ ಕಲ್ಯಾಣ ಮಂಟಪದ ಹಿಂದೆ ಮರಕ್ಕೆ ಸೀರೆ ಬಿಗಿದು ನೇಣಿಗೆ ಕೊರಳೊಡ್ಡಿದ್ದಾರೆ. ಇದೇ ಕಲ್ಯಾಣ ಮಂಟಪದಲ್ಲಿ ತಮ್ಮ ತಂಗಿಯ ಮದುವೆ ನಡೆಯುತ್ತಿತ್ತು. ಸಾವಿನ ನಡುವೆಯೇ ಹಿರಿಯರು ಮದುವೆ ಶಾಸ್ತ್ರ ಮುಗಿಸಿದ್ದಾರೆ.
ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ- ಉಕ್ಕು ಕಾರ್ಖಾನೆ ವಿಐಎಸ್ಎಲ್ ನಷ್ಟದಿಂದಾಗಿ ಮುಚ್ಚುತ್ತಿದೆ. ಕಾರ್ಮಿಕ ವಲಯದಲ್ಲಿ ಇದು ಆತಂಕ ಸೃಷ್ಟಿಸಿದೆ. ಕಳೆದ 19 ದಿನಗಳಲ್ಲಿ ಮೂರನೇ ಕಾರ್ಮಿಕ ಸಾವಿಗೀಡಾಗುತ್ತಿದ್ದು, ಇನ್ನಿಬ್ಬರು ಹೃದಯಾಘಾತದಿಂದ ನಿಧನರಾಗಿದ್ದರು. ಹೇಮಗಿರಿ, ನಾಗರಾಜ್ ಈ ಹಿಂದೆ ಮೃತಪಟ್ಟವರು.