Hosanagara | ಸಿಪಿಐ ನೇತೃತ್ವದ ತಂಡ ಪಟಾಕಿ ಅಂಗಡಿ ಮೇಲೆ ದಿಢೀರ್ ದಾಳಿ, ಪರಿಶೀಲನೆ
ಹೊಸನಗರ: ಸರ್ಕಾರದ ಆದೇಶದ ಮೇರೆಗೆ ಹೊಸನಗರದ ಪಟ್ಟಣದಲ್ಲಿ ಮಾರಾಟದ ಲೈಸನ್ಸ್ ಪಡೆದಿರುವ ಕೆಲವು ಪಟಾಕಿ ಅಂಗಡಿಗಳ ಮೇಲೆ ಹೊಸನಗರ ಸರ್ಕಲ್ ಇನ್ಸ್ಪೆಕ್ಟರ್ ಗುರಣ್ಣ ಎಸ್ ಹೆಬ್ಬಾಳ್ರವರ ನೇತೃತ್ವದ ತಂಡ ದಿಢೀರ್ ದಾಳಿ ನಡೆಸಿ ಪರಿಶೀಲಿಸಿದರು.
ನಂತರ ಮಾತನಾಡಿದ ಗುರಣ್ಣ ಎಸ್ ಹೆಬ್ಬಾಳ್ರವರು, ಯಾವುದೇ ಸಾಮಾನ್ಯ ಅಂಗಡಿಗಳಲ್ಲಿ ಪಟಾಕಿ ಮಾರಾಟ ಮಾಡುವುದನ್ನು ಸರ್ಕಾರ ನಿಷೇಧಿಸಿದೆ. ಅದರಲ್ಲಿಯೂ ಲೈಸನ್ಸ್ ಪಡೆಯದೇ ಕೆಲವು ಅಂಗಡಿಗಳಲ್ಲಿ ಪಟಾಕಿ ಮಾರಾಟ ಮಾಡುತ್ತಿರುವ ದೂರುಗಳು ಬರುತ್ತಿದೆ ಇಂಥಹ ಅಂಗಡಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಅಧಿಕೃತ ಲೈಸನ್ಸ್ ಹೊಂದಿರುವವರು ಕೇವಲ ಗ್ರೀನ್ ಪಟಾಕಿಗಳನ್ನು ಮಾತ್ರ ಅನುಮತಿ ಪಡೆದು ಮಾರಾಟ ಮಾಡಲು ಅವಕಾಶವಿರುತ್ತದೆ. ಉಳಿದಂತೆ ಯಾರೇ ಆಗಲಿ ಪಟಾಕಿಗಳನ್ನು ಮಾರುವುದು, ಶೇಖರಿಸುವುದು, ಸಾಗಿಸುವುದು ಮಾಡಿದಲ್ಲಿ ಕಠಿಣ ಕ್ರಮಕ್ಕೆ ಗುರಿಯಾಗಬೇಕಾಗುತ್ತದೆ.
ಬೇರೆ ಪಟಾಕಿಗಳನ್ನು ಮಾರಾಟ ಮಾಡುವುದು ಮತ್ತು ಶೇಖರಿಸುವುದು ಕಂಡು ಬರುವುದರ ಜೊತೆಗೆ ಯಾವುದೇ ಅನಾಹುತವಾದರೂ ಅಂಗಡಿಯ ಮಾಲೀಕರು ಹಾಗೂ ಅಂಗಡಿಗೆ ಬಾಡಿಗೆ ನೀಡಿರುವವರು ಪೂರ್ಣ ಜವಾಬ್ದಾರರಾಗಿದ್ದು ಹೊಸನಗರ ತಾಲ್ಲೂಕಿನಲ್ಲಿ ಅನಾಹುತದಂತಹ ಘಟನೆ ನಡೆಯದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ ಎಂದರು.