ಸಂತೃಪ್ತಿ ಜೀವನವೇ ನಿಜವಾದ ಸಂಪತ್ತು ; ಶ್ರೀ ರಂಭಾಪುರಿ ಜಗದ್ಗುರುಗಳು

0 64

ಎನ್.ಆರ್ ಪುರ: ಭೌತಿಕ ಸಂಪತ್ತು ಬರಬಹುದು ಇಲ್ಲವೇ ಹೋಗಬಹುದು. ಆದರೆ ಸ್ನೇಹ ಸಂತೃಪ್ತಿ ಸಂತೋಷವೇ ಜೀವನದ ನಿಜವಾದ ಸಂಪತ್ತು ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.


ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವದ ಅಂಗವಾಗಿ ಭದ್ರಾ ನದಿ ತೀರದಲ್ಲಿ ಸುರಗಿ ಸಮಾರಾಧನೆ-ಇಷ್ಟಲಿಂಗ ಮಹಾಪೂಜಾ ನೆರವೇರಿಸಿ ಆಶೀರ್ವಚನ ನೀಡುತ್ತಿದ್ದರು.


ಹುಟ್ಟು ಸಾವು ಮನುಷ್ಯನ ಕೈಯಲ್ಲಿ ಇಲ್ಲ. ಆದರೆ ಬದುಕು ಕಟ್ಟಿಕೊಳ್ಳುವ ಶಕ್ತಿಯಿದೆ. ಪ್ರಯತ್ನದಿಂದ ಕಾರ್ಯಗಳು ಸಿದ್ಧಿಸುತ್ತವೇ ಹೊರತು ಬರಿ ಬಯಕೆಗಳಿಂದಲ್ಲ ಬೆಳೆಯ ಸುರಕ್ಷತೆಗೆ ಬೇಲಿ ಇರುವಂತೆ ಆತ್ಮೋನ್ನತಿಗಾಗಿ ಧರ್ಮಾಚರಣೆ ಅವಶ್ಯಕತೆಯಿದೆ. ಧರ್ಮ ಯಶಸ್ಸು ನೀತಿ ದಕ್ಷತೆ ಮತ್ತು ಒಳ್ಳೆಯ ಮಾತು ಯಾರಲ್ಲಿರುವವೋ ಅವರು ಎಂದೆಂದಿಗೂ ದು:ಖಿತರಾಗುವುದಿಲ್ಲ. ಕಾಲ ಕಾಲಕ್ಕೆ ಮರದ ಎಲೆಗಳು ಉದುರಿದರೂ ಮರದ ಬೇರು ಭದ್ರವಾಗಿರುವಂತೆ ಮನುಷ್ಯನ ಅಭಿಪ್ರಾಯಗಳು ಬದಲಾದರೂ ತತ್ವಸಿದ್ಧಾಂತಗಳು ಬದಲಾಗಬಾರದು. ಮನುಷ್ಯ-ಧರ್ಮಗಳ ಮಧ್ಯೆ ಸೇತುವೆ ನಿರ್ಮಿಸಬೇಕೇ ವಿನಾ ಗೋಡೆಗಳನ್ನಲ್ಲ. ಶ್ರೀ ಜಗದ್ಗುರು ರೇಣುಕಾಚಾರ್ಯರ ವಿಚಾರ ಧಾರೆಗಳು ಸಾಮರಸ್ಯ ಬದುಕಿಗೆ ಹೊಸ ಬೆಳಕು ಮೂಡಿಸುತ್ತವೆ. ಈ ವರ್ಷದ ಜಾತ್ರಾ ಮಹೋತ್ಸವದ ಕಾರ್ಯಗಳು ತಮಗೆ ತೃಪ್ತಿ ತಂದಿವೆ ಎಂದರು.


ಶ್ರೀ ಪೀಠದ ಮುಂಭಾಗದಲ್ಲಿ ವಸಂತೋತ್ಸವ ನೆರವೇರಿಸಿ ಭದ್ರಾ ನದಿ ದಡದಲ್ಲಿ ಸುರಗಿ ಸಮಾರಾಧನಾ ನಿಮಿತ್ಯ ಇಷ್ಟಲಿಂಗ ಮಹಾಪೂಜಾ ನೆರವೇರಿಸಿ ಭಕ್ತ ಸಂಕುಲಕ್ಕೆ ಶುಭ ಹಾರೈಸಿದರು.

ಅಬ್ಬಿಗೇರಿ ಹಿರೇಮಠದ ಲಿಂ.ಸೋಮಶೇಖರ ಶ್ರೀಗಳ ಸ್ಮರಣಾರ್ಥವಾಗಿ ಸಿದ್ಧರಬೆಟ್ಟ ಕ್ಷೇತ್ರದ ವೀರಭದ್ರ ಶಿವಾಚಾರ್ಯರು ಮತ್ತು ಅಬ್ಬಿಗೇರಿ ಗ್ರಾಮದ ಭಕ್ತರು ದಾಸೋಹ ಸೇವೆ ಸಲ್ಲಿಸಿದರು.

ಹರಿಹರದ ಲಿಂ.ಕೊಂಡಜ್ಜಿ ತೋಟದಪ್ಪನವರ ಮಕ್ಕಳು ಶ್ರೀ ರಂಭಾಪುರಿ ಜಗದ್ಗುರುಗಳ ಪಾದಪೂಜೆ ನೆರವೇರಿಸಿದರು. ಭದ್ರಾ ನದಿ ತಟದಲ್ಲಿ ಸಾವಿರಾರು ಭಕ್ತರು ಮತ್ತು ಅನೇಕ ಮಠಾಧೀಶರು ಎಲ್ಲರಿಗೂ ಏಕ ಕಾಲದಲ್ಲಿ ಪ್ರಸಾದ ವಿನಿಯೋಗ ಜರುಗಿತು.

Leave A Reply

Your email address will not be published.

error: Content is protected !!