ಕೋಡೂರಿನಲ್ಲಿ ನಡೆದ ಕೃಷಿಮೇಳ – 2024 | ವಿದ್ಯಾರ್ಥಿಗಳು ಹೊಸ ಹೊಸ ತಂತ್ರಜ್ಞಾನಗಳನ್ನು ಕಂಡುಹಿಡಿದು ಕೃಷಿ ಚಟುವಟಿಕೆಗಳನ್ನ ವಿಸ್ತರಣೆ ಮಾಡಬೇಕಿದೆ ; ಕಲಗೋಡು ರತ್ನಾಕರ್

0 438

ರಿಪ್ಪನ್‌ಪೇಟೆ : ವಿದ್ಯಾರ್ಥಿಗಳ ವೈಜ್ಞಾನಿಕ ಕೃಷಿ ಜ್ಞಾನದ ಜೊತೆಗೆ ರೈತರ ಕೃಷಿಯೊಂದಿಗಿನ ಅನುಭವದ ಮಾಹಿತಿ ಜೊತೆಗೂಡಿದಾಗ ಕೃಷಿ ವಿದ್ಯಾರ್ಥಿಗಳು ಪರಿಪೂರ್ಣರಾಗುತ್ತಾರೆ ಎಂದು ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ ಹೇಳಿದರು.

ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಇರುವಕ್ಕಿ, ಕೃಷಿ ಇಲಾಖೆ ಹೊಸನಗರ, ಗ್ರಾಮ ಪಂಚಾಯಿತಿ ಕೋಡೂರು, ಮಾರುತಿಪುರ, ರಿಪ್ಪನ್‌ಪೇಟೆ, ಚಿಕ್ಕಜೇನಿ ಇವರ ಸಂಯುಕ್ತಾಶ್ರಯದಲ್ಲಿ ಗ್ರಾಮೀಣ ಕೃಷಿ ಕಾರ್ಯಾನುಭವ ಶಿವರದಡಿಯಲ್ಲಿ ವಿದ್ಯಾರ್ಥಿಗಳು ಕೋಡೂರಿನಲ್ಲಿ ಹಮ್ಮಿಕೊಂಡಿದ್ದ “ಕೃಷಿ ಮೇಳ -2024” ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಹೊಸ ತಂತ್ರಜ್ಞಾನಗಳನ್ನು ಕಂಡುಹಿಡಿದು ಕೃಷಿ ಚಟುವಟಿಕೆಗಳನ್ನ ವಿಸ್ತರಣೆ ಮಾಡಬೇಕಿದೆ. ಮಲೆನಾಡಿ ಭಾಗದಲ್ಲಿರುವ ರೈತರು ಫಲವತ್ತಾದ ಭೂಮಿ, ನೀರನ್ನು ಸಮರ್ಪಕವಾಗಿ ಉಪಯೋಗಿಸಿಕೊಂಡು ಆದಾಯ ದ್ವಿಗುಣಗೊಳಿಸಬೇಕಿದೆ. ವಾಣಿಜ್ಯ ಬೆಳೆಯಿಂದಾಗಿ ಸಿರಿಧಾನ್ಯಗಳನ್ನು ಬೆಳೆಯುವುದು ತೀರಾ ಕಡಿಮೆಯಾಗಿದೆ. ಸಿರಿಧಾನ್ಯಗಳನ್ನು ಬೆಳೆದು ಅವುಗಳನ್ನು ಸಂಗ್ರಹಿಸುವುದು ಹಾಗೂ ಮಣ್ಣಿನ ಫಲವತ್ತತೆಯನ್ನು ಕಾಪಾಡುವುದು ಅವಶ್ಯಕವಾಗಿದೆ ಎಂದರು.

ಇತ್ತೀಚಿನ ಕೃಷಿ ಮಾಹಿತಿಯನ್ನು ಒದಗಿಸಿ, ಹೊಸ ವೈಜ್ಞಾನಿಕ ಮತ್ತು ಲಾಭದಾಯಕ ಅಭ್ಯಾಸವನ್ನು ಅಳವಡಿಸಿಕೊಳ್ಳಲು ರೈತರಿಗೆ ಮಾರ್ಗದರ್ಶನ ಪ್ರೇರೇಪಿಸುವುದು ಕೃಷಿಮೇಳದ ಉದ್ದೇಶವಾಗಿದ್ದು, ಹೆಚ್ಚು ಇಳುವರಿ ನೀಡುವ ತಳಿಗಳು ಔಷಧೀಯ ಮತ್ತು ಸುಗಂಧಯುಕ್ತ ಸಸ್ಯಗಳು ಕೃಷಿ ಚಟುವಟಿಕೆ ಸುಲಭ ಮಾಡುವ ಹೊಸ ಯಂತ್ರೋಪಕರಣಗಳು ಸಿರಿಧಾನ್ಯಗಳ ಮಹತ್ವ ತಿಳಿಸುವ ಚಿತ್ರಗಳು ಸಮಗ್ರ ಕೃಷಿ ಮಾದರಿಗಳು ನೂತನ ಕೃಷಿ ತಂತ್ರಜ್ಞಾನ ಮಾಹಿತಿ ಹೀಗೆ ಹಲವಾರು ಆಕರ್ಷಕ ಮಳಿಗೆಗಳಿಂದ ಕೃಷಿಮೇಳ ರೈತರನ್ನು ತನ್ನತ್ತ ಕೈಬೀಸಿ ಕರೆಯುತ್ತಿತ್ತು.

ಕೃಷಿ ವಿವಿಯ ಕುಲಸಚಿವರು ಹಾಗೂ ವಿಶೇಷಾಧಿಕಾರಿ ಡಾ. ಕೆ.ಸಿ ಶಶಿಧರ್ ಮಾತನಾಡಿ, ಕೃಷಿ ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗೆ ಬೋಧನೆಯ ಜೊತೆಗೆ ಪ್ರಾಯೋಗಿಕ ಜ್ಞಾನವನ್ನು ಒದಗಿಸುತ್ತದೆ. ರೈತರು ಸಾಂಪ್ರದಾಯಿಕವಾಗಿ ಕೃಷಿ ಪದ್ಧತಿ ಅನುಸರಿಸುತ್ತಿದ್ದು, ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡು ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು. ಕೃಷಿಯ ಜ್ಞಾನದ ಕೊರತೆಯಿಂದಾಗಿ ಹೆಚ್ಚು ಉತ್ಪಾದನೆ ಖರ್ಚನ್ನು ಭರಿಸುತ್ತಿದ್ದು, ಕೃಷಿಯ ವ್ಯವಸ್ಥಿತ ಜ್ಞಾನವನ್ನು ಕೃಷಿ ವಿಶ್ವವಿದ್ಯಾಲಯದಿಂದ ಪಡೆದು ಖರ್ಚನ್ನು ಕಡಿಮೆ ಮಾಡಿ ಆದಾಯ ದ್ವಿಗುಣಗೊಳಿಸಬೇಕು ಎಂದರು.

ಡಾ.ಚಿಕ್ಕಕೊಮಾರಿಗೌಡ ದತ್ತಿ ಪಂಚಾಯತ್ ಪ್ರಶಸ್ತಿ ವಿಜೇತ ಕಲಗೋಡು ರತ್ನಾಕರ್ ರವರಿಗೆ ಗ್ರಾಮ ಪಂಚಾಯತಿ ವತಿಯಿಂದ ನಾಗರಿಕ ಸನ್ಮಾನಿಸಲಾಯಿತು.

ಕೃಷಿ ವಿವಿಯ ವಿಜ್ಞಾನಿಗಳೊಂದಿಗೆ ರೈತರ ಸಂವಾದ ಏರ್ಪಡಿಸಲಾಗಿತ್ತು. ಅಡಿಕೆ ಸಿಪ್ಪೆಯನ್ನು ಹೇಗೆ ಮರುಬಳಕೆ ಮಾಡಬಹುದು ? ಎಂಬುದರ ರೈತರ ಪ್ರಶ್ನೆಗೆ ಉತ್ತರಿಸಿದ ಡಾ.ಸ್ವಾತಿ, ಅಡಿಕೆ ಸಿಪ್ಪೆಯನ್ನು ರೈತರು ರಸ್ತೆಯಲ್ಲಿ ಎಸೆಯುತ್ತಿದ್ದಾರೆ. ಅಡಿಕೆ ಸಿಪ್ಪೆಯನ್ನು ಸ್ವಲ್ಪ ದಿನಗಳ ಕಾಲ ಒಣಗಿಸಿ ಮೈಕ್ರೋಬಿಯಲ್ ಕಲ್ಚರ್ ಹಾಕಿ, ಉತ್ಕೃಷ್ಟ ಗೊಬ್ಬರವನ್ನು ತಯಾರಿಸಬಹುದು. ಅಡಿಕೆ ಸಿಪ್ಪೆ ಗೊಬ್ಬರದಲ್ಲಿ ಪೋಟಾಸ್ ಅಂಶ ಹೆಚ್ಚಾಗಿರುತ್ತದೆ. ಗೊಬ್ಬರವನ್ನು ಅಡಿಕೆಗೆ ಹಾಕುವಾಗ ಬುಡದಿಂದ ಒಂದೂವರೆ ಅಡಿ ದೂರದಲ್ಲಿ ಪಾಥಿಯನ್ನು ಮಾಡಿ ಗೊಬ್ಬರವನ್ನು ಹಾಕಿ, ನಂತರ ಮೇಲೆ ಮಣ್ಣನ್ನು ಮುಚ್ಚಬೇಕು. ಪಾಥಿಯನ್ನು ಮಾಡುವಾಗ ಬೇರುಗಳಿಗೆ ಹಾನಿಯಾಗದಂತೆ ನೋಡಿಕೊಳ್ಳಬೇಕು ಮಾಹಿತಿ ನೀಡಿದರು.

ಅಡಿಕೆಯಲ್ಲಿ ಅಂತರ ಬೆಳೆಯಾಗಿ ಕಾಳುಮೆಣಸನ್ನು ಬೆಳೆದಾಗ ಶಿಫಾರಸ್ಸಿನ ಗೊಬ್ಬರವನ್ನು ಅಡಿಕೆಗೆ ಹಾಗೂ ಕಾಳುಮೆಣಸಿಗೆ ಬೇರೆ ಬೇರೆಯಾಗಿ ನೀಡಬೇಕು. ಇದರಿಂದಾಗಿ ಗಿಡಗಳ ಮಧ್ಯೆ ಗೊಬ್ಬರ ಹಾಗೂ ನೀರಿಗೆ ಸ್ಪರ್ಧೆ ನಡೆಯುವುದಿಲ್ಲ. ಕೊಟ್ಟಿಗೆ ಗೊಬ್ಬರವನ್ನು ಹಾಕುವುದರ ಜೊತೆಗೆ ಸ್ವಲ್ಪ ಪ್ರಮಾಣದ ಟ್ರೈಕೋಡರ್ಮವನ್ನು ಮಿಶ್ರಣ ಮಾಡಿ ಹಾಕುವುದು ಸೂಕ್ತ ಎಂದು ತಿಳಿಸಲಾಯಿತು.

ಕೋಡೂರು ಗ್ರಾಮದ ರೈತರಾದ ರಾಘವೇಂದ್ರ ಅವರು ತಮ್ಮ ತೋಟದಲ್ಲಿ ಹಿಡಿಮುಂಡಿಗೆ ರೋಗವು ಹೆಚ್ಚಾಗಿದ್ದು ಇಳುವರಿ ಕುಂಠಿತಗೊಂಡಿದೆ ಎಂಬ ಸಮಸ್ಯೆಗೆ ಉತ್ತರಿಸಿದ ಅಡಿಕೆ ಸಂಶೋಧನಾ ಕೇಂದ್ರದ ತಜ್ಞರಾದ ಡಾ.ಸ್ವಾತಿ, ಭತ್ತದ ಗದ್ದೆಯನ್ನು ಅಡಿಕೆ ತೋಟವನ್ನಾಗಿ ಪರಿವರ್ತಿಸಿದ ಜಾಗದಲ್ಲಿ ಹಿಡಿಮುಂಡಿಗೆ ಹೆಚ್ಚಾಗಿ ಕಂಡು ಬರುತ್ತದೆ ಹಾಗೂ ಬೇರೆ ಮುಣ್ಣನ್ನು ತಂದು ಹಾಕುವುದರಿಂದ, ಜಿಂಕ್ ಹಾಗೂ ಬೊರಾನ್ ಪೋಷಕಾಂಶಗಳ ಕೊರತೆ ಇರುವ ತೋಟದಲ್ಲಿ ಹಿಡಿಮುಂದಿಗೆ ರೋಗ ಹೆಚ್ಚಾಗಿ ಕಂಡುಬರುತ್ತದೆ ಎಂದು ಕಾರಣಗಳನ್ನು ತಿಳಿಸಿದರು.


ಎಲೆಗಳು ಚಿಕ್ಕದಾಗಿದ್ದು, ಗೆಣ್ಣುಗಳ ಅಂತರ ಕಡಿಮೆಯಾಗುತ್ತದೆ. ಮರವು ಅಡಿಕೆಯನ್ನು ಬಿಡಲು ವಿಫಲವಾಗುತ್ತದೆ ಎಂದು ರೋಗದ ಲಕ್ಷಣಗಳನ್ನು ತಿಳಿಸಿದರು. ಹಿಡಿ ಮುಂಡಿಗೆಯನ್ನು, ಎರಡು ಗಿಡಗಳ ಮಧ್ಯೆ ಎರಡು ಅಡಿ ಆಳದ ಬಸಿಗಾಲಿಗೆಗಳನ್ನು ಮಾಡಬೇಕು ಹಾಗೂ ಅದನ್ನು ಸ್ವಚ್ಛಗೊಳಿಸುತ್ತಾ ಇರಬೇಕು. ನೀರು ಗಿಡಗಳಿಗೆ ಅವಶ್ಯಕತೆಗಳಿಗುಣವಾಗಿ ನೀಡಬೇಕು ಹಾಗೂ ಮಣ್ಣಿಗೆ ಕಾಪರ್ ಸಲ್ಪೇಟ್ ಮತ್ತು ಸುಣ್ಣವನ್ನು ಹಾಕುವುದರ ಮೂಲಕ ನಿರ್ವಹಣೆ ಮಾಡಬಹುದು. ಜೊತೆಗೆ ಟ್ರೈಕೋಡರ್ಮ ಜೈವಿಕ ಗೊಬ್ಬರವನ್ನು ಗೊಬ್ಬರದ ಜೊತೆಗೆ ಮಿಶ್ರಣ ಮಾಡಿ ಹಾಕಬೇಕು ಎಂದು ಸಲಹೆ ನೀಡಿದರು.


ಕೋಡೂರು ಗ್ರಾಪಂ ಅಧ್ಯಕ್ಷ ಉಮೇಶ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಸುಧಾಕರ್, ತಾಪಂ ಮಾಜಿ ಸದಸ್ಯ ಚಂದ್ರಮೌಳಿ, ರಿಪ್ಪನ್‌ಪೇಟೆ ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮಿ, ಚಿಕ್ಕಜೇನಿ ಗ್ರಾಪಂ ಅಧ್ಯಕ್ಷ ರಾಜು, ಮಾರುತಿಪುರ ಗ್ರಾಪಂ ಅಧ್ಯಕ್ಷೆ ದೀಪಿಕಾ, ಕೃಷಿ ವಿವಿ ಕುಲಸಚಿವ ಕೆ.ಸಿ ಶಶಿಧರ್, ತಾಪಂ ಇಒ ನರೇಂದ್ರ ಕುಮಾರ್, ಕೋಡೂರು ಸೊಸೈಟಿ ಅಧ್ಯಕ್ಷ ವೇದಾಂತಪ್ಪಗೌಡ, ಹೊಸನಗರ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಸಚಿನ್ ಹೆಗಡೆ, ಹೊಸನಗರ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಟಿ.ಸಿ. ಪುಟ್ಟನಾಯ್ಕ್, ಇನ್ನಿತರ ಅಧಿಕಾರಿಗಳು, ಗ್ರಾಪಂ ಸದಸ್ಯರು, ಸುತ್ತಮುತ್ತಲ ಗ್ರಾಮದ ರೈತರು, ಪಿಡಿಒ ನಾಗರಾಜ್, ಗ್ರಾಪಂ ಸಿಬ್ಬಂದಿ ವರ್ಗ ಇನ್ನಿತರರು ಹಾಜರಿದ್ದರು.

ಸಂಜೆ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ವಿದ್ಯಾರ್ಥಿಗಳಾದ ನಿಶ್ಚಿತಾ ಮತು ಸಂಗಡಿಗರು ಪ್ರಾರ್ಥಿಸಿದರು. ಗ್ರಾಪಂ ಸದಸ್ಯ ಜಯಪ್ರಕಾಶ್ ಸ್ವಾಗತಿಸಿದರು.

Leave A Reply

Your email address will not be published.

error: Content is protected !!