ಮಕ್ಕಳ ಮಾನವಿಕ ವಿಕಾಸಕ್ಕೆ ಪೂರಕವಾಗಿ ಶಿಕ್ಷಣ ದೊರಕಬೇಕು
ಸೊರಬ: ಶೈಕ್ಷಣಿಕ ಪ್ರಗತಿಯ ಜೊತೆಗೆ ಸ್ವಾವಲಂಬನೆಗೆ, ಆತ್ಮ ರಕ್ಷಣೆಗೂ ಪೂರಕವಾಗುವಂತಹ ಚಟುವಟಿಕೆಗಳನ್ನು ಮಕ್ಕಳಿಗೆ ನೀಡುವ ಮೂಲಕ ಅವರಲ್ಲಿ ಆತ್ಮಸ್ಥೈರ್ಯ ಮೂಡಿಸಬೇಕು ಎಂದು ಶ್ರೀಪಾದ ಬಿಚ್ಚುಗತ್ತಿ ಹೇಳಿದರು.
ಹಳೇಸೊರಬ ಸರ್ಕಾರಿ ಪ್ರೌಢಶಾಲಾ ಹೆಣ್ಣು ಮಕ್ಕಳು ಕರಾಟೆ ಕಲಿತು ಈಚೆಗೆ ಗಣರಾಜ್ಯೋತ್ಸವ ವೇಳೆ ಯಶಸ್ವಿಯಾಗಿ ಪ್ರದರ್ಶಿಸಿದ್ದರಿಂದ ಹೆಲ್ಪಿಂಗ್ ಹ್ಯಾಂಡ್ ಸಮೂಹದ ಮೂಲಕ ಪ್ರೋತ್ಸಾಹಿಸಿ ಕಿರುಕಾಣಿಕೆ ವಿತರಿಸಿ ಮಾತನಾಡಿದರು.
ಮಕ್ಕಳ ಮಾನವಿಕ ವಿಕಾಸಕ್ಕೆ ಪೂರಕವಾಗಿ ಶಿಕ್ಷಣ ದೊರಕಬೇಕು. ವಿಶೇಷವಾಗಿ ಹಳೇಸೊರಬ ಸರ್ಕಾರಿ ಪ್ರೌಢಶಾಲೆ ಗ್ರಾಮಾಂತರ ಪ್ರದೇಶಗಳ ಮಕ್ಕಳ ಅಂತರ್ಗತ ಮೌಲ್ಯಗಳನ್ನು ಗುರುತಿಸಿ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಮುಂಚೂಣಿಯಲ್ಲಿದ್ದು ಮಾನವಿಕ ಮೌಲ್ಯವನ್ನು ಎತ್ತಿಹಿಡಿಯುವಲ್ಲಿ ಸಫಲವಾಗಿದೆ. ಹಲವಾರು ಒತ್ತಡಗಳನ್ನು ಎದುರಿಸುತ್ತಿರುವ ಸರ್ಕಾರಿ ಶಾಲೆಗಳ ಶಿಕ್ಷಕರು ದೊರೆತ ಅಲ್ಪಾವಧಿಯ ಸಮಯದಲ್ಲಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಟೊಂಕ ಕಟ್ಟಿರುವುದು ಶ್ಲಾಘನೀಯ ಎಂದರು.
ಮಕ್ಕಳು ಯಂತ್ರಗಳಲ್ಲ ಅವುಗಳ ಅಭೀಪ್ಸೆ ಗುರುತಿಸಿ ಅವರಿಗೆ ಇಚ್ಛೆ ಇರುವ ವಲಯದಲ್ಲಿ ಬೆಳೆಸಬೇಕಾದುದು ಪೋಷಕರ ಕರ್ತವ್ಯವಾಗಿರತ್ತದೆ. ಶಿಕ್ಷಕರ ಜೊತೆಗೆ ಪೋಷಕರ ಸಹಕಾರವಿದ್ದರೆ ಸರ್ಕಾರಿ ಶಾಲೆಗಳೆಲ್ಲವೂ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯ. ಶಿಕ್ಷಕರಿಗೆ ಗೌರವಿಸುವ ಮೂಲಕ ನಾಡಿಗೆ ನೆರವಾಗುವ ಮಕ್ಕಳು ನೀವಾಗಬೇಕು ಎಂದು ಆಶಿಸಿದರು.
ಹೆಲ್ಪಿಂಗ್ ಹ್ಯಾಂಡ್ ನ ಮಧುಕೇಶ್ವರ ಆರ್ ಮಾತನಾಡಿ, ಕರಾಟೆ ಕಲಿಸುವ ಉತ್ಸಾಹ ತೋರಿಸುತ್ತಿದ್ದಂತೆ ಶಾಲೆ ಸ್ಪಂದಿಸಿದ್ದು ಮಕ್ಕಳು ಸಣ್ಣ ಅವಧಿಯಲ್ಲಿ ಅಪ್ರತಿಮ ಸಾಧನೆ ಮೆರೆದಿದ್ದು ಸಂತಸದ ಸಂಗತಿ. ಈ ವೇಳೆ ಕರಾಟೆ ಕಲಿಸಿದ ಶಿಯಾನ್ ಪಂಚಪ್ಪ ಗುರುಗಳು ಸ್ತುತ್ಯಾರ್ಹ ಎಂದರು.
ಮಕ್ಕಳಿಗೆ ಲೇಖನಿ, ಪುಸ್ತಕ ವಿತರಿಸಲಾಯಿತು.
ಶಾಲಾ ಮುಖ್ಯ ಶಿಕ್ಷಕ ಒಂಕಾರಪ್ಪ ಬಿ. ಸುಜಾತ ಕೆ. ಕಲಾವತಿ. ಡಿ,ರಮೇಶ್ ಹೆಚ್ ಆರ್, ಜಯಶ್ರೀ ಡಿಎಸ್ , ಶೋಭಾ ಎಸ್ ಪಿ, ಶಿಲ್ಪ ಎಲ್ ಎನ್, ಶೋಭಾ ಡಿ, ಚಂದ್ರಕಲಾ ಕೆಆರ್, ಲಕ್ಷ್ಮಿ ವಿ, ಪ್ರೇಮ ಆರ್, ಗೋಪಾಲ್ ಪಿ, ಸುಜಾತ ಭಂಡಾರಿ, ಕಲಾಧರೆ, ಶ್ರೀನಿವಾಸಮೂರ್ತಿ, ಉಮೇಶ್ ರಾಥೋಡ, ಸತ್ಯನಾರಾಯಣ, ಮಕ್ಕಳು, ಶಾಲಾ ಸಿಬ್ಬಂದಿ ಇದ್ದರು.