ಪ್ರಕೃತಿಯ ಆರಾಧನೆ : ಸಿಂಹವಾಹನೋತ್ಸವದ ಸಂದೇಶ | ಆರೋಗ್ಯದಾಯಕ ಪರಿಸರ ಪಸರಿಸಲಿ ; ಹೊಂಬುಜ ಶ್ರೀಗಳು

0 125

ರಿಪ್ಪನ್‌ಪೇಟೆ : ಅತಿಶಯ ಶ್ರೀಕ್ಷೇತ್ರ ಹೊಂಬುಜದಲ್ಲಿ (Hombuja) ಸಂಪ್ರದಾಯದಂತೆ ವಾರ್ಷಿಕ ರಥಯಾತ್ರಾ ಮಹೋತ್ಸವದ ಅಂಗವಾಗಿ ಭಗವಾನ ಶ್ರೀ 1008 ಪಾರ್ಶ್ವನಾಥ ಸ್ವಾಮಿ ಹಾಗೂ ಯಕ್ಷಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಜಿನಾಗಮ ಪೂರ್ವ ಪದ್ಧತಿಯಂತೆ ವಿಶೇಷ ಪೂಜಾವಿಧಿ ನೆರವೇರಿತು.

ಪೂಜ್ಯ ಮುನಿಶ್ರೀ 108 ಅಮೋಘಕೀರ್ತಿ ಮಹಾರಾಜರು ಹಾಗೂ ಮುನಿಶ್ರೀ 108 ಅಮರಕೀರ್ತಿ ಮಹಾರಾಜರು ಪೂಜಾ ವಿಧಿ-ವಿಧಾನ, ಕಲಿಕುಂಡ ಯಂತ್ರಾರಾಧನೆ ಸಾನಿಧ್ಯ ನೀಡಿದರು. ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಹೊಂಬುಜ ಶ್ರೀಕ್ಷೇತ್ರದ ಮಠದ ಜಿನಮಂದಿರದ ಶ್ರೀ ನೇಮಿನಾಥ ಸ್ವಾಮಿ, ಮಕ್ಕಳ ಬಸದಿಯ ಶ್ರೀ ಪಾರ್ಶ್ವನಾಥ ಸ್ವಾಮಿ, ನಗರ ಜಿನಾಲಯದ ಶ್ರೀ ಆದಿನಾಥ ಸ್ವಾಮಿ ಮತ್ತು ಬೋಗಾರ ಬಸದಿಯ ತೀರ್ಥಂಕರ ಸನ್ನಿಧಿಯಲ್ಲಿ ಕ್ರಮವಾಗಿ ಗಣಧರವಲಯ ಆರಾಧನೆ, ಕಲ್ಯಾಣ ಮಂದಿರ ಆರಾಧನೆ, ಭಕ್ತಾಮರ ಆರಾಧನೆ, ಚೌಷಟ್ ಋದ್ಧಿ ವಿಧಾನ ನೆರವೇರಿಸಿದರು.

ದ್ವಿತೀಯ ದಿನದಂದು ಸಿಂಹವಾಹನೋತ್ಸವವು ಭಕ್ತಾದಿಗಳ ಜಯಘೋಷದೊಂದಿಗೆ ನಗರ ಪ್ರದಕ್ಷಿಣೆಯನ್ನು ಶಾಸ್ತ್ರಬದ್ಧವಾಗಿ ಜರುಗಿಸಲಾಯಿತು.

ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮಿಗಳವರು ಪ್ರಕೃತಿಯ ಆರಾಧನೆಯ ಅಂಗವಾಗಿ ಮೃಗರಾಜ ಸಿಂಹ ಸಾಂಕೇತಿಕವಾಗಿ, ಶ್ರೀ ದೇವರ ಯಾತ್ರೆಯನ್ನು ಸಿಂಹವಾಹನೋತ್ಸವದಲ್ಲಿ ನೆರವೇರಿಸಲಾಗುವುದು.

ನಾಗವಾಹನೋತ್ಸವವು ಪ್ರಥ್ವಿಯ ಜಲನಿಧಿಯ ಸಂಕೇತವಾಗಿದ್ದು, ಶ್ರೀಕ್ಷೇತ್ರ ಹೊಂಬುಜದ ರಥಯಾತ್ರೆಯು ಪ್ರಕೃತಿಯ ಜೀವರಾಶಿಯ ಆರಾಧನೆಯೇ ಆಗಿದೆ ಎಂಬ ಸಂದೇಶ ನೀಡಿದರು. ಪರಿಸರ ಸಂರಕ್ಷಣೆ, ಅನ್ಯೋನ್ಯ ಬಾಂಧವ್ಯದ ಅನುಕರಣೆ ಮಾಡುವುದು ಆರೋಗ್ಯದಾಯಕ ಸಮಾಜ ನಿರ್ಮಾಣದ ಬುನಾದಿ ಎಂದು ಭಕ್ತರನ್ನು ಹರಸಿದರು.

ಪವನ್ ಕುಮಾರ್ ರಾರಾ ಸಹೋದರಿಯರು ತೀನ್‌ಸುಕಿಯಾ (ಅಸ್ಸಾಂ) ಅವರು ಸೇವಾಕರ್ತರಗಿದ್ದು ಪೂಜ್ಯ ಸ್ವಾಮೀಜಿಯವರು ಆಶೀರ್ವದಿಸಿದರು.

Leave A Reply

Your email address will not be published.

error: Content is protected !!