ಯುವ ಪತ್ರಕರ್ತನ ಟ್ವೀಟ್‌ಗೆ ಮಾಜಿ ಗೃಹ ಸಚಿವರಿಂದಲೂ ಮೆಚ್ಚುಗೆ ! ಸೂಲಿಬೆಲೆಯೂ ಪ್ರಸ್ತಾಪ

0 15,976

ರಿಪ್ಪನ್‌ಪೇಟೆ : ಸದ್ಯ ಶಿವಮೊಗ್ಗದಲ್ಲಿ ಬಾರಿ ಚರ್ಚೆ ಆಗುತ್ತಿರುವ ಈದ್ ಮಿಲಾದ್ ಹಬ್ಬದಲ್ಲಿ ಅಳವಡಿಸಿದ್ದ ಪ್ಲೆಕ್ಸ್ ಗಳ ಬಗ್ಗೆ ರಿಪ್ಪನ್‌ಪೇಟೆ ಯುವ ಪತ್ರಕರ್ತ ರಫಿ ರಿಪ್ಪನ್‌ಪೇಟೆ ಮಾಡಿದ್ದ ಟ್ವೀಟ್ (X) ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಈ ಟ್ವೀಟ್ ಬಗ್ಗೆ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ನೇರವಾಗಿ ಕರೆ ಮಾಡಿ ನಿಮ್ಮಂತಹ ವಿಚಾರವಂತರಿಂದ ದಾರಿ ತಪ್ಪುತ್ತಿರುವ ಸಮಾಜವನ್ನು ತಿದ್ದಲು ಸಾಧ್ಯ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಚಿಂತಕ ಚಕ್ರವರ್ತಿ ಸೂಲಿಬೆಲೆ ಕೂಡ ಮಾಧ್ಯಮಗಳಲ್ಲಿ ಮಾತನಾಡುತ್ತ ರಫಿ ರಿಪ್ಪನ್‌ಪೇಟೆ ರವರ ಟ್ವೀಟ್ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ.

ಈದ್ ಮಿಲಾದ್ ಹಬ್ಬದ ಅಂಗವಾಗಿ ಶಿವಮೊಗ್ಗದಲ್ಲಿ ಔರಂಗಜೇಬ್ ಕಟೌಟ್ ಹಾಕಿದ್ದು ಬಾರಿ ಚರ್ಚೆ ಮಾಡಿತ್ತು.

ಅದರಲ್ಲಿ ರಿಪ್ಪನ್‌ಪೇಟೆ ಯುವ ಪತ್ರಕರ್ತ ಹಾಗೂ ಯುವ ಸಾಹಿತಿ ರಫಿ ರಿಪ್ಪನ್‌ಪೇಟೆ ಯವರು ತಮ್ಮ ಟ್ವೀಟರ್ ಖಾತೆಯಲ್ಲಿ ಟ್ವೀಟ್ ವೊಂದನ್ನು ಮಾಡಿದ್ದರು. ಅವರು ಮಾಡಿದ ಟ್ವೀಟ್ ನಲ್ಲಿ “ಪವಿತ್ರ ಈದ್ ಮಿಲಾದ್ ಹಬ್ಬಕ್ಕೂ ಔರಂಗಜೇಬ್ ಮತ್ತು ಟಿಪ್ಪು ಸುಲ್ತಾನನಿಗೂ ಏನ್ರೋ ಸಂಬಂಧ, ಇಸ್ಲಾಂ ಧರ್ಮದ ಯುವ ಪೀಳಿಗೆಗೆ ಪ್ರವಾದಿಯವರ ಜೀವನ ಶೈಲಿ ಆದರ್ಶವಾಗಬೇಕೆ ಹೊರತು ಈ ಔರಂಗಜೇಬ್ ಅಥವಾ ಟಿಪ್ಪು ಸುಲ್ತಾನ್ ಅಲ್ಲ. ನೀವು ಹೊಡೆಯುವ ಒಂದೊಂದು ಕಲ್ಲು ನಿಮ್ಮ ಯುವ ಪೀಳಿಗೆಯ ಮುಂದಿನ ಭವಿಷ್ಯವನ್ನೇ ಕಸಿಯುತ್ತಿದೆ” ಎಂದು ಟ್ವೀಟ್ ಮಾಡಿದ್ದರು.

ಈ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಹಲವರ ಮನಸ್ಸನ್ನು ಕದ್ದಿತು. ನಮ್ಮ ದೇಶಕ್ಕೆ ಇಂತಹ ವ್ಯಕ್ತಿಗಳ ಅವಶ್ಯಕತೆ ಇದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಕೂಡ ಆಯಿತು. ಒಟ್ಟಿನಲ್ಲಿ ನಮಗೆ ಆದರ್ಶ ಯಾರು ಎಂಬ ಮಾತನ್ನು ಸಮಾಜದ ಮುಂದೆ ತೆರೆದಿಟ್ಟ ಯುವಪತ್ರಕರ್ತರು ಈಗ ಎಲ್ಲರಿಗೂ ಆದರ್ಶವಾಗಿದ್ದಾರೆ.

Leave A Reply

Your email address will not be published.

error: Content is protected !!