ಹೊಸನಗರ ; ಬಿಸಿಯೂಟ ಕಾರ್ಯಕರ್ತೆಯರ ಪ್ರತಿಭಟನೆ ವಾಪಸ್
ಹೊಸನಗರ: ತಾಲ್ಲೂಕು ಬಿಸಿಯೂಟ ಕಾರ್ಯಕರ್ತೆಯರಿಗೆ ಶಾಲೆಯ ಎಸ್ಡಿಎಂಸಿಯವರು ತೊಂದರೆ ನೀಡುತ್ತಿದ್ದಾರೆ ಹಾಗೂ ಹಿರೇಮೈಥೆ ಶಾಲೆಯಲ್ಲಿ ಬಿಸಿಯೂಟ ಕಾರ್ಯಕರ್ತೆಯನ್ನು ವಜಾ ಮಾಡಿದ್ದಾರೆ ಎಂಬ ಕಾರಣದಿಂದ ಜೂ.16 ರಂದು ಪಟ್ಟಣದ ನೆಹರು ಮೈದಾನದಿಂದ ಶಿಕ್ಷಣಾಧಿಕಾರಿಗಳ ಕಛೇರಿಯವರೆಗೆ ಪ್ರತಿಭಟನೆ ಹಾಗೂ ಶಿಕ್ಷಣಾಧಿಕಾರಿಗಳ ಕಛೇರಿಯ ಮುಂದೆ ಧರಣಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಿದ್ದು ಆದರೆ ಮುಂದೆ ಬಿಸಿಯೂಟ ಕಾರ್ಮಿಕರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಅಧಿಕಾರಿಗಳ ತಂಡ ನೋಡಿಕೊಳ್ಳುವ ಆಶ್ವಾಸನೆ ಮೇರೆಗೆ ಪ್ರತಿಭಟನೆ ಮತ್ತು ಧರಣಿಯನ್ನು ವಾಪಸ್ ಪಡೆಯಲಾಗಿದೆ ಎಂದು ಜಿಲ್ಲಾ ಅಧ್ಯಕ್ಷೆ ಅಕ್ಕಮ್ಮ ಜಿ.ಜಿ ಹಾಗೂ ಪ್ರದಾನ ಕಾರ್ಯದರ್ಶಿ ಪರಮೇಶ್ವರ ಕೆ ಹೊಸಕೊಪ್ಪರವರು ತಿಳಿಸಿದ್ದಾರೆ.
ಅವರು ಸುದ್ಧಿಗಾರರೊಂದಿಗೆ ಮಾತನಾಡಿ, ಹೊಸನಗರ ತಾಲ್ಲೂಕು ಪಂಚಾಯತಿ ಆವರಣದಲ್ಲಿ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಸಲಾಗಿದ್ದು ಅಕ್ಷರ ದಾಸೋಹ ನೋಡಲ್ ಅಧಿಕಾರಿ ಅನ್ಸಾರಿ ಬೇಗಂ, ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ ತಾಲ್ಲೂಕು ಅಕ್ಷರ ದಾಸೋಹ ಸಂಯೋಜನಾಧಿಕಾರಿ ಅಧಿಕಾರಿ ನಾಗರಾಜ್ ಸಿ ಇವರು ಸಂಘಟನೆಯೊಂದಿಗೆ ಸಭೆ ನಡೆಸಿ ಕಾನೂನಾತ್ಮಕವಾಗಿ ಯಾವುದೇ ತಪ್ಪಿರದ ಕಾರಣ ಏಕಾಏಕಿ ಬಿಯೂಟ ಕಾರ್ಮಿಕರನ್ನು ನಾವು ತೆಗೆಯುವುದಿಲ್ಲ ಹಾಗೂ ಎಸ್ಡಿಎಂಸಿಯವರಿಗೆ ಅಧಿಕಾರಿ ಮಟ್ಟದಲ್ಲಿ ತಿಳಿ ಹೇಳುವುದಾಗಿ ಮುಂದೆ ಈ ರೀತಿಯಾಗದಂತೆ ನೋಡಿಕೊಳ್ಳುತ್ತೇವೆ ಎಂಬ ಭರವಸೆಯ ಮೇರೆಗೆ ಧರಣಿ ಹಾಗೂ ಪ್ರತಿಭಟನೆಯನ್ನು ವಾಪಸ್ಸು ಪಡೆದಿರುವುದಾಗಿ ತಿಳಿಸಿದರು.