ಶಿಕಾರಿಪುರದಲ್ಲಿ ಗ್ಯಾರಂಟಿ ಯೋಜನೆಗಳ ಕುರಿತು ಫೆ.18 ರಂದು ಸಮಾವೇಶ ; ಕಲಗೋಡು ರತ್ನಾಕರ್
ಶಿಕಾರಿಪುರ : ರಾಜ್ಯ ಸರ್ಕಾರವು ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನೀಡಿದ 5 ಗ್ಯಾರಂಟಿಗಳನ್ನ ಈಡೇರಿಸಿದ್ದು ತಾಲ್ಲೂಕಿನಲ್ಲಿಯೂ ಕೂಡ ಈ ಯೋಜನೆಯನ್ನ ಶೇ. 99 ಈಡೇರಿಸಿದ್ದು ಇನ್ನುಳಿದ ಶೇ.1 ಬಾಕಿ ಇದ್ದು, ಈ ಕುರಿತು ತಾಲ್ಲೂಕಿನಲ್ಲಿ ಫೆ. 18 ರಂದು ಪಟ್ಟಣದ ಆಡಳಿತ ಸೌಧದ ಹಿಂಭಾಗದಲ್ಲಿ ಸಮಾವೇಶ ಹಮ್ಮಿಕೊಂಡಿದ್ದು, ಯಾರು ಈ ಯೋಜನೆಗಳಿಂದ ವಂಚಿತರಾಗಿದ್ದಾರೋ ಅವರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಎಂದು ರಾಜ್ಯ ಕಾಂಗ್ರೆಸ್ ಕಾರ್ಯದರ್ಶಿ ಹಾಗೂ ಮಾಜಿ ಜಿಲ್ಲಾ ಪಂಚಾಯತಿ ಅದ್ಯಕ್ಷ ಕಲಗೋಡು ರತ್ನಾಕರ್ ಕರೆ ನೀಡಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಪಕ್ಷ ಬೇದವಿಲ್ಲದೆ ಜಾತಿಭೇದವಿಲ್ಲದೆ ಧರ್ಮಭೇದವಿಲ್ಲದೆ ಐದು ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿದ್ದು ಇವುಗಳ ಮೌಲ್ಯಮಾಪನ ಕಾರ್ಯ ನಡೆಯಲಿದ್ದು, ರಾಜ್ಯದಾದ್ಯಂತ ಪ್ರತಿ ತಾಲ್ಲೂಕುಗಳಲ್ಲಿ ಸಮಾವೇಶ ನಡೆಸುವುದರ ಮೂಲಕ ತಾಂತ್ರಿಕ ದೋಷಗಳಿಂದ ಗ್ಯಾರಂಟಿ ಯೋಜನೆಗೆ ಒಳಪಡುವಂತೆ ಮಾಡಲಾಗುವುದು. ಅಂತೆಯೇ ತಾಲ್ಲೂಕಿನಲ್ಲಿಯೂ ಕೂಡ ಈ ಯೋಜನೆಯನ್ನ ಶೇ. 99 ಈಡೇರಿಸಿದ್ದು ಇನ್ನುಳಿದ ಶೇ.1 ಬಾಕಿ ಇದ್ದು, ಈ ಕುರಿತು ಫೆ. 18 ರಂದು ಪಟ್ಟಣದ ಆಡಳಿತ ಸೌಧದ ಹಿಂಭಾಗದಲ್ಲಿ ಸಮಾವೇಶ ಹಮ್ಮಿಕೊಂಡಿದ್ದು, ಯಾರು ಈ ಯೋಜನೆಗಳಿಂದ ವಂಚಿತರಾಗೀದ್ದಾರೋ ಅವರು ಆಗಮಿಸಿ ಕಾರ್ಯಕ್ರಮ ಯಶಸ್ಚಿಗೊಳಿಸಬೇಕು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುಲ್ಮಾರ್ ಮಹೇಶ್ ಮಾತನಾಡುತ್ತಾ, ತಾಲೂಕಿನಲ್ಲಿ ಗೃಹಲಕ್ಷ್ಮಿ ಯೋಜನೆಗೆ 10,74,16,000 ರೂಪಾಯಿಗಳಷ್ಟು ಹಣ ಮಹಿಳೆಯರ ಖಾತೆಗೆ ಜಮವಾಗುತ್ತಿದ್ದು, ಗೃಹಜ್ಯೋತಿಯಡಿ 37,744 ಮನೆಗಳಿಗೆ ಉಚಿತ ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಮಾಡಲಾಗುತ್ತಿದ್ದು, ಶಕ್ತಿ ಯೋಜನೆಯಡಿ, 12,74,688 ಜನ ಮಹಿಳೆಯರು ಈ ತಾಲ್ಲೂಕಿನ ಮಾರ್ಗವಾಗಿ ಸಂಚಾರ ಮಾಡಿದ್ದು, 5,41,9,935 ಮಹಿಳೆಯರು ತಾಲ್ಲೂಕಿನಿಂದ ಹೊರ ತಾಲ್ಲೂಕುಗಳಿಗೆ ಸಂಚಾರ ಮಾಡಿದ್ದು, ಉಚಿತ ಅಕ್ಕಿ ಯೋಜನೆಯಡಿ 55,947 ಕುಟುಂಬಗಳು ಉಚಿತ ಅಕ್ಕಿ ಸೌಲಭ್ಯವನ್ನು ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ನಿಕಟ ಪೂರ್ವ ಅಭ್ಯರ್ಥಿ ಹಾಗೂ ಕೆಪಿಸಿಸಿ ಸದಸ್ಯ ಗೋಣಿ ಮಾಲತೇಶ್ ಮಾತನಾಡಿ, ಕಾಂಗ್ರೇಸ್ ಪಕ್ಷದ ಯೋಜನೆಯು ಜಾತ್ಯತೀತವಾಗಿ, ಪಕ್ಷಾತೀತವಾಗಿ ನೀಡಿದ್ದು, ಇದರ ಅತಿಹೆಚ್ಚಿನ ಲಾಭ ಪಡೆದುಕೊಂಡಿದ್ದು, ಈ ಯೋಜನೆಯ ವಿರುದ್ಧವಾಗಿ ಮಾತನಾಡುತ್ತಿರುವವರೆ ಬಿಜೆಪಿಗರೆ ಎಂದು ಲೇವಡಿ ಮಾಡಿದರು.
ಭದ್ರಕಾಡ ಮಾಜಿ ಅಧ್ಯಕ್ಷ ನಗರದ ಮಹದೇವಪ್ಪ ಮಾತನಾಡುತ್ತಾ, ತಾಂತ್ರಿಕ ಕಾರಣದಿಂದಾಗಿ ಐದು ಯೋಜನೆಗಳ ಫಲಾನುಭವಿಗಳಿಗೆ ಅವಕಾಶ ಸಿಗದೇ ಇದ್ದವರಿಗಾಗಿ ಸ್ಥಳದಲ್ಲಿಯೇ ಸಮಸ್ಯೆ ಪರಿಹರಿಸಲು ವ್ಯವಸ್ಥೆ ಕಲ್ಪಿಸಲಾಗಿದ್ದು ಇದರ ಪ್ರಯೋಜನವನ್ನು ಅವಕಾಶ ವಂಚಿತ ಫಲಾನುಭವಿಗಳು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಗೋಷ್ಟಿಯಲ್ಲಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಪುರಸಭಾ ಸದಸ್ಯ ನಾಗರಾಜ್ ಗೌಡ, ಗೋಣಿ ಪ್ರಕಾಶ್, ಶಕುಂತಲಮ್ಮ,ಸೌಭಾಗ್ಯಮ್ಮ, ಜಯಶ್ರಿ, ಶಿರಾಳಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕವಲಿ ಗಂಗಾಧರ್, ಮುಖಂಡರಾದ ಕೆ ಪಿ ರುದ್ರೇಗೌಡ, ಗಣಪತಿ, ಶಿವಾನಾಯ್ಕ್, ವೀರೇಶ್, ಲೋಕೇಶ್, ಚಂದ್ರಣ್ಣ, ಭಂಡಾರಿ ಮಾಲತೇಶ್ ಸೇರಿದಂತೆ ಪಕ್ಷದ ಮುಖಂಡರು ಕಾರ್ಯಕರ್ತರು ಹಾಜರಿದ್ದರು.
ಕಾಂಗ್ರೆಸ್ ಪಕ್ಷ ನೀಡಿರುವ ಯೋಜನೆಗಳಿಂದ ಬಿಜೆಪಿ ಪಕ್ಷದವರಿಗೆ ಈಗಾಗಲೇ ಸೋಲಿನ ಭಯ ಹುಟ್ಟಿರುವಂತೆ ಕಾಣುತ್ತಿದ್ದು ಮುಂಬರುವ ಲೋಕಸಭಾ ಚುನಾವಣೆಗೆ ಈಗಿನಿಂದಲೇ ತಯಾರಿ ನಡೆಸಿದ್ದಾರೆ. ಮರಾಠ ಸಮಾಜದವರು ತಮ್ಮ ಆರಾಧ್ಯ ದೈವ ತುಳಜಾ ಭವಾನಿ ಹಾಗೂ ವಿವಿಧ ದೇವಸ್ಥಾನದ ಲೋಕಾರ್ಪಣೆ ಮಾಡುತ್ತಿದ್ದು, ಈ ಸಂದರ್ಭದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮರಾಠ ಸಮಾಜದ ಮನೆ ಮನೆಗಳಿಗೆ ಮಹಿಳೆಯರಿಗೆ ಉಡಿ ನೀಡುವ ನೆಪದಲ್ಲಿ ಸೀರೆ ಅರಿಶಿಣ ಕುಂಕುಮ ಅಕ್ಷತೆ ಜೊತೆ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರವಿರುವ ಕ್ಯಾಲೆಂಡರ್ ಕೊಟ್ಟು ಬರುತ್ತಿದ್ದಾರೆ. ಈ ವಿಷಯ ನನ್ನ ಗಮನಕ್ಕೆ ಬಂದಿದೆ. ಬಿಜೆಪಿ ಮುಖಂಡರು ಇದೇ ರೀತಿ ಮುಂದುವರೆದರೆ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು.
– ಮಹೇಶ್ ಹುಲ್ಮಾರ್, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ