ಹರತಾಳುವಿನಲ್ಲಿ ಐತಿಹಾಸಿಕ ಕ್ಷಣ | ಬಹುವರ್ಷದ ಬೇಡಿಕೆ ಈಡೇರಿಸಿದ ಶಾಸಕ ಬೇಳೂರು ಗೋಪಾಲಕೃಷ್ಣ

0 83

ರಿಪ್ಪನ್‌ಪೇಟೆ : ಮಾಜಿ ಸಚಿವ ಹರತಾಳು ಹಾಲಪ್ಪನವರ ಸ್ವಗ್ರಾಮದ ಗ್ರಾಮಸ್ಥರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ  ದೂರದ ರಿಪ್ಪನ್‌ಪೇಟೆ ಆನಂದಪುರ ಹೀಗೆ ಸುಮಾರು 15 ಕಿ.ಮೀ.ದೂರ ಕಾಲ್ನಡಿಗೆಯಲ್ಲಿ ಹೋಗಿ ಬರಬೇಕಾದ ಅನಿವಾರ್ಯತೆ ಇದ್ದು ಈ ಬಗ್ಗೆ ಹಿಂದಿನ ಶಾಸಕರುಗಳ ಬಳಿ ಸಾಕಷ್ಟು ಬೇಡಿಕೆ ಇಟ್ಟರು ಪರಿಹಾರವಾಗಿರಲ್ಲಿಲ್ಲ. ಬೇಡಿಕೆ ಸಲ್ಲಿಸಿದ ಕೇವಲ ಎರಡು ತಿಂಗಳಲ್ಲಿ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರ ಸ್ಪಂದಿಸಿ ಹರತಾಳುವಿನಿಂದ ರಿಪ್ಪನ್‌ಪೇಟೆಗೆ ಓಡಾಡಲು ಸರ್ಕಾರಿ ಬಸ್ ಸೌಲಭ್ಯವನ್ನು ಕಲ್ಪಿಸಿದ್ದಾರೆ ಇದೊಂದು ಐತಿಹಾಸಿಕ ಕ್ಷಣ ಎಂದು ಗ್ರಾಮಸ್ಥರು ಶಾಸಕರನ್ನು ಹರ್ಷೋದ್ಘಾರದೊಂದಿಗೆ ಅಭಿನಂದಿಸಿದರು.

ಸಮೀಪದ ಹರತಾಳು ಗ್ರಾಮದಲ್ಲಿ ಇಂದು ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರ ಸರ್ಕಾರಿ ಸಾರಿಗೆ ವ್ಯವಸ್ಥೆಗೆ ಚಾಲನೆ ನೀಡಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಬಡಜನರ ಸೇವೆಗಾಗಿಯೇ ಇರುವ ಸರ್ಕಾರ ಈಗಾಗಲೇ ಚುನಾವಣೆಯ ಸಂದರ್ಭದಲ್ಲಿ ಘೋಷಿಸಲಾದ ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುವುದರೊಂದಿಗೆ ನುಡಿದಂತೆ ನಡೆದಿರುವ ಏಕೈಕ ಸರ್ಕಾರ ಎಂದು ಹೇಳಿ ದೇಶದಲ್ಲಿಯೇ 54 ಸಾವಿರ ಕೋಟಿ ರೂ. ವೆಚ್ಚದಲ್ಲಿ ಯೋಜನೆಯನ್ನು ಜಾರಿಗೊಳಿಸಿದ ಪ್ರಥಮ ಸರ್ಕಾರವಾಗಿದೆ ಎಂದ ಅವರು ಕೇಂದ್ರದ ಮನಮೋಹನ್‌ಸಿಂಗ್ ಸರ್ಕಾರ ಜಾರಿಗೊಳಿಸಿದ ಉದ್ಯೋಗ ಖಾತ್ರಿ ಯೋಜನೆಯನ್ನು ಬಿಜೆಪಿ ಸರ್ಕಾರ ಕೆಲವು ಮಾರ್ಪಾಡುಗಳನ್ನು ಮಾಡುವ ನೆಪದಲ್ಲಿ ಬಡಜನರ ಕೂಲಿ ಕಾರ್ಮಿಕರನ್ನು ವಂಚಿತರನ್ನಾಗಿಸಿದ್ದು ಈಗಿನ ನಮ್ಮ ಸರ್ಕಾರ ಖಾತ್ರಿ ಯೋಜನೆಗೆ 100 ಕೋಟಿ ರೂ. ಹಣವನ್ನು ಮೀಸಲಿಡುವ ಮೂಲಕ ಕೂಲಿಕಾರ್ಮಿಕರಿಗೆ ಉದ್ಯೋಗ ನೀಡುವುದರೊಂದಿಗೆ ಕೃಷಿ ಯೋಜನೆಗೂ ಒತ್ತು ನೀಡಿದ್ದು ಇದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗೆ ಖಡಕ್ ಸೂಚನೆ ನೀಡಿದರು.

ಸಿದ್ದರಾಮಯ್ಯನವರ ಮುಂದಿನ ವರ್ಷದಲ್ಲಿ ಬಜೆಟ್ ನಂತರದಲ್ಲಿ ಕ್ಷೇತ್ರದ ವ್ಯಾಪ್ತಿಯಲ್ಲಿ ರಸ್ತೆ ಕಾಲುಸಂಕ ಹೀಗೆ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ಹೆಚ್ಚು ಅನುದಾನ ತರುವುದಾಗಿ ವಿವರಿಸಿ ತುರ್ತಾಗಿ ಅದ್ಯತೆಯ ಮೇಲೆ ಅಭಿವೃದ್ದಿ ಕಾಮಗಾರಿಗಳನ್ನು ಮಾಡುವುದಾಗಿ ವಿವರಿಸಿ ಈ ಭಾರಿಯಲ್ಲಿ ಗ್ಯಾರಂಟಿ ಯೋಜನೆಗೆ ಹಣಹೊಂದಿಸಿಕೊಂಡು ಮುಂದಿನ ಸಾಲಿನಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿಗೆ ಅನುದಾನತರುವುದಾಗಿ ಪ್ರಕಟಿಸಿದರು.

ಈಗಾಗಲೇ ಈ ಹಿಂದಿನ ಸರ್ಕಾರದ ಶಾಸಕರು ಚುನಾವಣೆಯ ತರಾತುರಿಯಲ್ಲಿ ಕೆಲವು ಸಂಪರ್ಕ ರಸ್ತೆಗಳ ಕಾಮಗಾರಿ ಮಾಡಲಾಗಿದ್ದು ಇನ್ನೂ ಅರಂಭಿಕ ಹಂತದಲ್ಲಿಯೇ ಕಿತ್ತು ಹೋಗುವಂತಾಗಿ ಕಳಪೆ ದರ್ಜೆಯಲ್ಲಿ ಕಾಮಗಾರಿ ನಿರ್ವಹಿಸಿರುವ ಗಂಟಿನಕೊಪ್ಪ ರಸ್ತಯ ಬಗ್ಗೆ ತನಿಖೆಗೆ ಸರ್ಕಾರವನ್ನು ಆಗ್ರಹಿಸಲಾಗಿದ್ದು ಇದರಲ್ಲಿ ಇಂಜಿನಿಯರ್ ಮತ್ತು ಗುತ್ತಿಗೆದಾರರಲ್ಲಿ ಭಯ ಉಂಟಾಗಿದೆ ಎಂದು ಹೇಳಿ ಯಾವುದೇ ಇಂತಹ ಕಳಪೆ ಕಾಮಗಾರಿಗಳ ಕುರಿತು ಸಾರ್ವಜನಿಕರು ದೂರು ನೀಡಿದಲ್ಲಿ ಯಾವುದೇ ಮುಲಾಜು ಇಲ್ಲದೇ ತನಿಖೆ ನಡೆಸುವುದಾಗಿ ಹೇಳಿ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಲಾಗುವುದೆಂದರು.

ಹರತಾಳು ಗ್ರಾಮ ಪಂಚಾಯ್ತಿ ಕಛೇರಿಯಲ್ಲಿ ಸಾರ್ವಜನಿಕರ ಪರವಾಗಿ ಗ್ರಾಮ ಪಂಚಾಯ್ತಿ
ಅಧ್ಯಕ್ಷ ಎಸ್.ಈ.ಶಿವಪ್ಪ ಮತ್ತು ಗ್ರಾಮಾಡಳಿತದವರು ನೂತನ ಶಾಸಕ ಗೋಪಾಲಕೃಷ್ಣ ಬೇಳೂರರನ್ನು ಸನ್ಮಾನಿಸಿ ಗೌರವಿಸಿದರು.

ಈ ಸಭೆಯಲ್ಲಿ ಜಿ.ಪಂ.ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ತಾಲ್ಲೂಕ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ.ನಾಗರಾಜ್, ತಾ.ಪಂ.ಮಾಜಿ ಸದಸ್ಯ ಬಿ.ಜಿ.ಚಂದ್ರಮೌಳಿ, ಎರಗಿ ಉಮೇಶ್, ತಹಶೀಲ್ದಾರ್ ಡಿ.ಜಿ. ಕೋರಿ , ತಾಲ್ಲೂಕ್ ಪಂಚಾಯ್ತಿ ಪ್ರಭಾರಿ ಇಓ ನರೇಂದ್ರಕುಮಾರ್, ಸಾಕಮ್ಮ, ಉಪಾಧ್ಯಕ್ಷೆ ನಾಗರತ್ನ, ಸತ್ಯಾವತಿ, ನಾರಿ ರವಿ, ಶಿವಮೂರ್ತಿ, ನಾರಾಯಣಪ್ಪ, ರವಿಂದ್ರಕೆರೆಹಳ್ಳಿ, ರಮೇಶ್, ಜಿ.ಆರ್.ಗೋಪಾಲಕೃಷ್ಣ, ಮಹಾಮಲ, ಮಾರುತಿಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷ ಚಿದಂಬರ್ ಇನ್ನಿತರರು ಹರತಾಳು ಗ್ರಾಮಸ್ಥರು ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು ಪಾಲ್ಗೊಂಡಿದ್ದರು.

Leave A Reply

Your email address will not be published.

error: Content is protected !!