ಇಲ್ಲಿ ಗಲಾಟೆ ಮಾಡಬೇಡಿ ಅಂದಿದಕ್ಕೆ ಅನ್ಯಕೋಮಿನ ಗುಂಪಿನಿಂದ ಮೂವರ ಮೇಲೆ ಮಾರಣಾಂತಿಕ ಹಲ್ಲೆ !
ಶಿವಮೊಗ್ಗ: ಇಲ್ಲಿ ಗಲಾಟೆ ಮಾಡಬೇಡಿ, ಹೋಗ್ರೋ ಎಂದಿದ್ದಕ್ಕೆ ತಿಮ್ಮಪ್ಪ ಎಂಬುವವರಿಗೆ ಅನ್ಯಕೋಮಿನ ಯುವಕರು ಹಿಗ್ಗಾಮುಗ್ಗಾ ಥಳಿಸಿ ದೊಣ್ಣೆಯಿಂದ ತಲೆ ಹಿಂಭಾಗ ಹಲ್ಲೆ ನಡೆಸಿದ್ದಾರೆ.
ಸುಮಾರು 15 ಜನ ಯುವಕರ ತಂಡ ತಿಮ್ಮಪ್ಪ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದೆ. ಗೋಪಾಳ ಬಡಾವಣೆಯ ಕೊರಮರಕೇರಿ ಮಾರಿಯಮ್ಮ ದೇಗುಲ ಬಳಿ ಘಟನೆ ನಡೆದಿದೆ.
ಯುವಕರ ತಂಡವೊಂದು ಯಾರನ್ನೋ ಹುಡುಕಿಕೊಂಡು ಕೂಗಾಡಿಕೊಂಡು ಬಂದಿತ್ತು. ಈ ವೇಳೆ ತಿಮ್ಮಪ್ಪ ಅವರು ಯುವಕರಿಗೆ ಬೈದು ಬುದ್ಧಿ ಹೇಳಿದ್ದಾರೆ. ಆಗ ಆಕ್ರೋಶಗೊಂಡ ಯುವಕರು ತಿಮ್ಮಪ್ಪ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಜಗಳ ಬಿಡಿಸಲು ಬಂದ ತಿಮ್ಮಪ್ಪರ ಪುತ್ರ ದರ್ಶನ್ (19) ಹಾಗೂ ಮನು ಎಂಬ ಯುವಕರ ಮೇಲೆ ಕೂಡ ಹಲ್ಲೆ ನಡೆದಿದೆ.
ಡ್ರ್ಯಾಗರ್ನಿಂದ ದರ್ಶನ್ ತೋಳಿನ ಭಾಗಕ್ಕೆ ದಾಳಿ ಮಾಡಲಾಗಿದ್ದು ಮತ್ತೊಬ್ಬ ಯುವಕ ಮನು ಎಂಬಾತನ ಮೇಲೂ ಭೀಕರ ಹಲ್ಲೆ ನಡೆದಿದೆ. ಬಳಿಕ ಮೂವರನ್ನೂ ಥಳಿಸಿ ಯುವಕರ ತಂಡ ಪರಾರಿಯಾಗಿದೆ.
ಸ್ಥಳಕ್ಕೆ ತುಂಗಾನಗರ ಪೊಲೀಸರು ದೌಡಾಯಿಸಿ ದೂರು ದಾಖಲಿಸಿದ್ದಾರೆ. ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಅನಿಲ್ ಕುಮಾರ್ ನೇತೃತ್ವದಲ್ಲಿ ಭದ್ರತೆ ಕೈಗೊಳ್ಳಲಾಗಿದೆ. ಹಲ್ಲೆ ಮಾಡಿದ ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.