ಹೊಸನಗರ ; ವರಕೋಡು ಗ್ರಾಮದಲ್ಲಿ 11ನೇ ಶತಮಾನದ ಅಪ್ರಕಟಿತ ಶಾಸನ ಪತ್ತೆ

0 215

ಹೊಸನಗರ: ಇತ್ತೀಚಿಗೆ ಹೊನ್ನಾಳಿ ಎಸ್.ಎಮ್.ಎಸ್.ಎಫ್ ಕಾಲೇಜು ಪ್ರಾಚಾರ್ಯರಾದ ಡಾ.ಪ್ರವೀಣ್ ದೊಡ್ಡಗೌಡ್ರು ಸಹಕಾರದಿಂದ ಸಾಗರ ಎಲ್.ಬಿ ಮತ್ತು ಎಸ್.ಬಿ.ಎಸ್ ಕಾಲೇಜಿನ ಇತಿಹಾಸ ಅಧ್ಯಾಪಕರಾದ ನವೀನ ಜೀ ಆಚಾರ್ಯಾ ಇವರು ವರಕೋಡು ಗ್ರಾಮದ ಕೋಟೆಕಾನು ಪರಿಸರದಲ್ಲಿ ಕ್ಷೇತ್ರ ಕಾರ್ಯ ನಡೆಸಿದಾಗ 11ನೇ ಶತಮಾನದ ಕಲ್ಯಾಣ ಚಾಲುಕ್ಯರ ಕಾಲದ ಅಪ್ರಕಟಿತ ಶಾಸನವನ್ನು ಸಂಶೋಧನೆ ಮಾಡಿದ್ದಾರೆ. ಈ ಶಾಸನವನ್ನು ಓದುವಲ್ಲಿ ಜಗದೀಶ್ ಅಗಸಿಬಾಗಿಲು ಇವರು ಸಹಕರಿಸಿದರು.

ಈ ಶಾಸನವು ಹೊಸನಗರ ತಾಲೂಕು ಕೇಂದ್ರದಿಂದ ಆಗ್ನೇಯ ದಿಕ್ಕಿಗೆ 3 ಕಿ.ಮೀ ದೂರದಲ್ಲಿ ಕೋಟೆಕಾನು ಪರಿಸರದಲ್ಲಿ ದೊರೆತಿದೆ. ಶಾಸನಕ್ಕೆ ಗ್ರಾನೈಟ್ ಕಲ್ಲನ್ನು ಬಳಕೆ ಮಾಡಿದ್ದು 5 ಅಡಿ ಎತ್ತರ, 2.5 ಅಡಿ ಅಗಲ, 4 ಇಂಚು ದಪ್ಪ, 27 ಸಾಲುಗಳನ್ನು ಹೊಂದಿದೆ. ಈ ಶಾಸನದ ಪಕ್ಕದಲ್ಲಿ 2 ಅಡಿ ಎತ್ತರದ ಮತ್ತೆರಡು ಶಾಸನ ತುಂಡುಗಳು ಲಭ್ಯವಾಗಿದೆ. ಈ ಶಾಸನ ಕ್ರಮವಾಗಿ 10-11 ಸಾಲುಗಳನ್ನು ಹೊಂದಿದ್ದು ಮಾಹಿತಿ ಅಸ್ಪಷ್ಟವಾಗಿದೆ. ಉಳಿದಂತೆ ಮೂಲ ಶಾಸನವು ಕನ್ನಡ ಭಾಷೆ ಮತ್ತು ಕನ್ನಡ ಲಿಪಿಯಲ್ಲಿ ಬರೆಯಲ್ಪಟ್ಟಿದೆ. ಶಾಸನದ ಸಾಲುಗಳು ಅಲ್ಲಲ್ಲಿ ಅಳಿಸಿಹೋಗಿದ್ದು ಶಾಸನದ ಸಂಪೂರ್ಣ ಮಾಹಿತಿಯನ್ನು ಗ್ರಹಿಸಲು ಸಾಧ್ಯವಾಗಿಲ್ಲ ದೊರೆತಿರುವ ಅಂಶಗಳ ಅನ್ವಯ ಈ ಶಾಸನವು 11ನೇ ಶತಮಾನದಲ್ಲಿ ಆಳ್ವಿಕೆ ಮಾಡುತ್ತಿದ್ದ ಕಲ್ಯಾಣ ಚಾಳುಕ್ಯರ “ತ್ರೈಲೊಕ್ಯಮಲ್ಲ”(ಒಂದನೇ ಸೋಮೇಶ್ವರ) ಹೆಸರು ಶಾಸನದಲ್ಲಿ ಉಲ್ಲೇಖವಾಗಿದೆ. ಇವನ ಮಹಮಂಡಲೇಶ್ವರ “ವೀರ ಶಾಂತರದೇವ” ಈ ಶಾಸನ ಹಾಕಿಸಿದ್ದಾಗಿ ತಿಳಿದು ಬರುತ್ತದೆ. ಇದೊಂದು ದಾನಶಾಸನವಾಗಿದ್ದು ದಾನದ ಕುರಿತು ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಕಲ್ಯಾಣ ಚಾಳುಕ್ಯರ ಕಾಲದಲ್ಲಿ ಬಳಕೆಯಲ್ಲಿದ್ದ “ಹಣ” ಎಂಬ ನಾಣ್ಯದ ಕುರಿತು ಶಾಸನವು ಉಲ್ಲೇಖಿಸಿದೆ. ಶಾಸನದ ಕೊನೆಯಲ್ಲಿ ಪಾಪಶಯ ವಾಕ್ಯವಿದ್ದು ಶಾಸನ ಹಾಳು ಮಾಡಿದರೆ ಸಾಸಿರ (ಸಾವಿರ) ಕವಿಲೆ (ಗೋವು) ಕೊಂದ ಪಾಪಕ್ಕೆ ಹೋಗುವರು ಎಂದು ಉಲ್ಲೇಖವಿದೆ. ಈ ಶಾಸನವನ್ನು ಕಳವೂರು (ಇವತ್ತಿನ ಕಳೂರು) ನಾಗವರ್ಮ ಎಂಬುವನು ಈ ಶಾಸನ ಕೆತ್ತಿದ್ದಾನೆ ಎಂದು ಉಲ್ಲೇಖಿಸಲಾಗಿದೆ.

ಕ್ಷೇತ್ರ ಕಾರ್ಯ ಸಂದರ್ಭದಲ್ಲಿ ವೀರಪ್ಪ ಗೌಡ್ರು ವರಕೋಡು ಮತ್ತು ಮಧು ಆಚಾರ್ ವರಕೋಡು ಮತ್ತು ಪ್ರಶಾಂತ್ ಯು ಶೇಟ್ ಇವರು ಸಹಕಾರ ನೀಡಿರುತ್ತಾರೆ.

Leave A Reply

Your email address will not be published.

error: Content is protected !!