ಅಂಬೇಡ್ಕರ್ ಭವನ ನಿರ್ಮಿಸಲು ಜಿಲ್ಲಾಡಳಿತಕ್ಕೆ ದಸಂಸ ಒತ್ತಾಯ
ಚಿಕ್ಕಮಗಳೂರು : ನೂರಾರು ಸಂಖ್ಯೆಯಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಜಾತಿ ಮತ್ತು ಪಂ ಗಡದ ಕುಟುಂಬಗಳಿಗೆ ಗ್ರಾಮದಲ್ಲಿ ಡಾ|| ಬಿ.ಆರ್.ಅಂಬೇಡ್ಕರ್ ಭವನ ನಿರ್ಮಿಸಿ ಸಭೆ ಸಮಾರಂಭ ನಡೆಸಲು ಅನುವು ಮಾಡಿಕೊಡಬೇಕು ಎಂದು ದಸಂಸ ಮುಖಂಡರುಗಳು ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ಅವ ರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಈ ಕುರಿತು ದಸಂಸ ಜಿಲ್ಲಾ ಸಂಚಾಲಕ ಎಲ್.ಎಸ್.ಶ್ರೀಕಾಂತ್ ಮಾತನಾಡಿ, ನ.ರಾ.ಪುರ ತಾಲ್ಲೂಕಿನ ಕಾನೂರು ಹಾಗೂ ಹರವರಿ ಗ್ರಾಮಗಳಲ್ಲಿ ಕಳೆದ ಹಲವಾರು ಕಾಲದಿಂದ 500ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿರುವ ಹಿನ್ನೆಲೆಯಲ್ಲಿ ಸಣ್ಣಪುಟ್ಟ ಕಾರ್ಯಕ್ರಮ ಅಥವಾ ಕುಟುಂಬದ ಸಮಾರಂಭಕ್ಕೆ ಭವನವಿಲ್ಲದೇ ಬಹಳಷ್ಟು ಸಮಸ್ಯೆಯಾಗಿದೆ ಎಂದು ಹೇಳಿದರು.
ಬಾಳೆಹೊನ್ನೂರು ಹೋಬಳಿ ಕಾನೂರು ಗ್ರಾಮಸ್ಥರು ಸೌಹಾರ್ದತೆಯಿಂದ ಜೀವನ ನಡೆಸುತ್ತಿದ್ದು ಈ ವ್ಯಾಪ್ತಿಯ ಸೊಪ್ಪಿನ ಬೆಟ್ಟದ ಸರ್ವೆ ನಂ.97 ರಲ್ಲಿ ವಿಸ್ತಾರವಾಗಿ ಜಾಗವಿದ್ದು ಈ ಪೈಕಿ 10 ಗುಂಟೆ ಜಮೀನಿನ ಜಾಗವನ್ನು ಗುರುತಿಸಿ ಸರ್ವೆ ನಡೆಸಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಮಂಜೂರು ಮಾಡಿಕೊಡಬೇಕು ಎಂದರು.
ಕಾನೂರು ಗ್ರಾ.ಪಂ. ವ್ಯಾಪ್ತಿಯ ಹರವರಿ ಗ್ರಾಮಸ್ಥರಿಗೆ ಸರ್ಕಾರಿ ಅಥವಾ ಇತರೆ ಕಾರ್ಯಕ್ರಮಗಳನ್ನು ಏರ್ಪಡಿಸಲು ಭವನಗಳಿಲ್ಲ. ಹೀಗಾಗಿ ಈ ವ್ಯಾಪ್ತಿಯ ದೊಡ್ಡಹಡ್ಲು ಸರ್ವೆ ನಂ.63 ರಲ್ಲಿ ವಿಶಾಲವಾದ ಸರ್ಕಾರಿ ಜಾಗವಿದ್ದು ಈ ಪೈಕಿ 10 ಗುಂಟೆ ಜಾಗವನ್ನು ಗುರುತಿಸಿ ಸರ್ವೆ ನಡೆಸುವ ಮೂಲಕ ಭವನ ನಿರ್ಮಾಣಕ್ಕೆ ಭೂ ಮಂಜೂರಾತಿಗಾಗಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ರಾಮು ಎನ್.ಆರ್.ಪುರ, ಕಾನೂರು ಗ್ರಾಮ ಸಂಚಾಲಕ ಸುಜಿತ್, ಕಾರ್ಯದರ್ಶಿ ಚಂದ್ರಶೇಖರ್, ಮುಖಂಡರುಗಳಾದ ವಿನಯ್, ಸುರೇಶ್, ಹರೀಶ್, ಶಿವಕುಮಾರ್, ಸಂತೋಷ್, ತಿಮ್ಮಯ್ಯ ಮತ್ತಿತರರು ಹಾಜರಿದ್ದರು.