ಸಾರಾ ಸಂಸ್ಥೆ ಸಹಯೋಗದಲ್ಲಿ ತುಂಬ್ರಿಕೊಪ್ಪ ಕೆರೆ ಜೀರ್ಣೋದ್ಧಾರಕ್ಕೆ ಚಾಲನೆ

0 328

ಹೊಸನಗರ : ಈಗಾಗಲೇ ಕೆರೆಗಳ ಜೀರ್ಣೋದ್ಧಾರ ಮಾಡುವ ಮೂಲಕ ರಾಜ್ಯವ್ಯಾಪಿ ಹೆಸರಾಗಿರುವ ತಾಲೂಕಿನ ಬಟ್ಟೆಮಲ್ಲಪ್ಪದ ಸಾರಾ ಸಂಸ್ಥೆಯ ಸಹಯೋಗದಲ್ಲಿ ಮಾರುತಿಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊಸಕೆಸರೆ ಗ್ರಾಮಸ್ಥರು ಸಂಘಟಿತರಾಗಿ ಇಲ್ಲಿನ ತುಂಬ್ರಿಕೊಪ್ಪ ಕೆರೆಯ ಜೀರ್ಣೋದ್ದಾರ ಕಾಮಗಾರಿಗೆ ಚಾಲನೆ ನೀಡಿದ್ದಾರೆ.

ಸರ್ಕಾರದ ನಕಾಶೆ ಕಂಡ ಈ ಕೆರೆಯು ಒಂದು ಎಕರೆ ವಿಸ್ತೀರ್ಣ ಹೊಂದಿದ್ದು, ಈ ಕೆರೆಗೆ ಆರೇಳು ದಶಕಗಳ ಇತಿಹಾಸವಿದೆ. ಸುಮಾರು 25 ಎಕರೆ ಅಚ್ಚುಕಟ್ಟು ಪ್ರದೇಶದ ರೈತಾಪಿಗಳು ಈ ಕೆರೆ ನೀರನ್ನೇ ತಮ್ಮ ಕೃಷಿ ಚಟುವಟಿಕೆಗಳಿಗೆ ಆಶ್ರಯಿಸಿದ್ದಾರೆ. ಈ ಹಿನ್ನಲೆಯಲ್ಲಿ ಗ್ರಾಮಾಭಿವೃದ್ದಿಯನ್ನೇ ತನ್ನ ಮೂಲ ಉದ್ದೇಶ ಎಂಬಿ ಬಿಂಬಿಸಿಕೊಂಡಿರುವ ಸ್ಥಳೀಯ ಸಾರಾ ಸಂಸ್ಥೆ ಗ್ರಾಮಸ್ಥರ ಹಿತ ಕಾಪಾಡಲು ಕೆರೆ ಅಭಿವೃದ್ದಿ ಕಾಮಗಾರಿಗೆ ಮುಂದಾಗಿದೆ.

ಸುಮಾರು 5 ಲಕ್ಷ ರೂ. ಮೊತ್ತದಲ್ಲಿ ಈ ಕಾಮಗಾರಿ ನಡೆಯುತ್ತಿದ್ದು, ಸರ್ಕಾರದ ನಯಾಪೈಸೆ ಬಯಸದೇ ಗ್ರಾಮಸ್ಥರೇ ಹಣ ಹೂಡಲು ಮುಂದಾಗಿರುವುದು ವಿಶೇಷ.

ಹೊಸಕೆಸರೆ ಗ್ರಾಮದ ಸರ್ವೆ ನಂಬರ್ 40ರಲ್ಲಿರುವ ಈ ಕೆರೆಗೆ ಕಾಯಕಲ್ಪ ಸೂಕ್ತ ದೊರೆತಲ್ಲಿ ಸುತ್ತಮುತ್ತಲ ರೈತಾಪಿ ವರ್ಗಕ್ಕೆ, ಜನ-ಜಾನುವಾರುಗಳಿಗೆ ಬೇಸಿಗೆಯಲ್ಲಿ ನೀರಿನ ಕೊರತೆ ನೀಗಿಸಲು ಸಹಕಾರಿ ಆಗಲಿದೆ.
– ರಾಘವೇಂದ್ರ, ಕೆರೆ ಅಭಿವೃದ್ದಿ ಸಮಿತಿ ಸದಸ್ಯ

ಈವರೆಗೆ ಜಿಲ್ಲೆಯಲ್ಲಿ ನೂರಾರು ಕೆರೆಗಳ ಕಾಯಕಲ್ಪ ನೀಡುವಲ್ಲಿ ಸಾಫಲ್ಯ ಕಂಡಿರುವ ಸಾರಾ ಸಂಸ್ಥೆ ಮುಂಬರುವ ದಿನಗಳಲ್ಲಿ ಮತ್ತಷ್ಟು ಜನಪರ ಕಾರ್ಯಕ್ರಮ ಹಮ್ಮಿಕೊಳ್ಳಲಿ ಎಂಬುದು ಗ್ರಾಮಸ್ಥರ ಆಶಯವೂ ಆಗಿದೆ.

Leave A Reply

Your email address will not be published.

error: Content is protected !!