Hosanagara | ಅಪರಾಧ ತಡೆ ಮಾಸಾಚರಣೆ – ಅಪರಾಧ ನಡೆಯುವುದಕ್ಕಿಂತ ಮುಂಚಿತವಾಗಿ ಎಚ್ಚೆತ್ತುಕೊಳ್ಳುವುದು ಸೂಕ್ತ ; ಪಿಎಸ್ಐ ಶಿವಾನಂದ್ ಕೋಳಿ
ಹೊಸನಗರ: ಅಪರಾಧ ನಡೆಯುವುದಕ್ಕಿಂತ ವಂಚಿತವಾಗಿ ಎಚ್ಚೆತ್ತುಕೊಂಡರೆ ನಮ್ಮ ಜೀವದ ಜೊತೆಗೆ ಇನ್ನೊಬ್ಬರಿಗೂ ನೋವು ಆಗದಂತೆ ನೋಡಿಕೊಳ್ಳಬಹುದು ಎಂದು ಹೊಸನಗರದ ಸಬ್ ಇನ್ಸ್ಪೆಕ್ಟರ್ ಶಿವಾನಂದ್ ಕೋಳಿ ಹೇಳಿದರು.
ಹೊಸನಗರ ಟೌನ್ನಲ್ಲಿ (Hosanagara) ಅಪರಾಧ ತಡೆ ಮಾಸಾಚರಣೆ ಪ್ರಯುಕ್ತ ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ ರಸ್ತೆ ಸುರಕ್ಷತೆ ಮತ್ತು ಕಾನೂನಿನ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಏರ್ಪಡಿಸಲಾಗಿದ್ದು ಈ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಾಹನವನ್ನು ಚಲಾಯಿಸುತ್ತಿರುವಾಗ ಎಚ್ಚರದಿಂದಿರಬೇಕು. 18ವರ್ಷದ ಒಳಗಿನವರಿಗೆ ವಾಹನ ಚಲಾಯಿಸಲು ನೀಡುವುದು ಅಪರಾಧ. ನಾವು ಕೇಸ್ ಹಾಕುತ್ತೇವೆ ಎಂದು ಹೆಲ್ಮೆಟ್ ಹಾಕುವುದಕ್ಕಿಂತ ನಿಮ್ಮ ಜೀವವನ್ನು ರಕ್ಷಿಸಿಕೊಳ್ಳುವುದಕ್ಕಾಗಿ ಹೆಲ್ಮೆಟ್ ಧರಿಸಿ. ಪ್ರತಿಯೊಬ್ಬರು ದ್ವಿಚಕ್ರ ವಾಹನ ಓಡಿಸುವವರು ಹಾಗೂ ಮೂರು ಚಕ್ರದ ವಾಹನ, ನಾಲ್ಕು ಚಕ್ರದ ವಾಹನ ಓಡಿಸುವವರು ಕಡ್ಡಾಯವಾಗಿ ವಾಹನದ ಪರವಾನಿಗೆ, ಡ್ರೈವಿಂಗ್ ಲೈಸನ್ಸ್, ಹೊಗೆ ತಪಾಸಣೆ ಪತ್ರ, ಇನ್ಶುರೆನ್ಸ್ ಪ್ರತಿಯನ್ನು ಕಡ್ಡಾಯವಾಗಿ ಜೊತೆಯಲ್ಲಿ ಇಟ್ಟುಕೊಂಡಿರಬೇಕು. ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸಿದರೇ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಈ ಸಂದರ್ಭದಲ್ಲಿ ವಾಹನ ಚಾಲಕರಿಗೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿಗಳಾದ ತೀರ್ಥೇಶ್, ಗೋಪಾಲಕೃಷ್ಣ, ಅವಿನಾಶ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.