ಮುಖ್ಯ ಶಿಕ್ಷಕ ತರಗತಿಗೆ ಗೈರು ; ಪೋಷಕರಿಂದ ಶಾಲೆ ಎದುರು ದಿಢೀರ್ ಪ್ರತಿಭಟನೆ ! ಎಲ್ಲಿದು ?
ರಿಪ್ಪನ್ಪೇಟೆ: ಸಮೀಪದ ಅರಸಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತಮ್ಮಡಿಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಕಳೆದ ಎರಡ್ಮೂರು ವರ್ಷದಿಂದ ಮುಖ್ಯೋಪಾದ್ಯಾಯರು ಅನಾರೋಗ್ಯದ ಕಾರಣ ಗೈರು ಹಾಜರಾಗುತ್ತಿದ್ದು ಶಾಲಾ ಮಕ್ಕಳಿಗೆ ಪಾಠ-ಪ್ರವಚನ ಸರಿಯಾಗಿ ಆಗದೇ ವಂಚಿತರಾಗುತ್ತಿದ್ದಾರೆಂದು ಆರೋಪಿಸಿ ಇಂದು ಪೋಷಕರು ಮತ್ತು ಗ್ರಾಮಸ್ಥರು ಶಾಲಾ ಅವರಣದಲ್ಲಿ ದಿಢೀರ್ ಪ್ರತಿಭಟನೆ ನಡೆಸುವ ಮೂಲಕ ಮುಖ್ಯ ಶಿಕ್ಷಕರನ್ನು ಕೂಡಲೇ ವರ್ಗಾಯಿಸುವಂತೆ ಆಗ್ರಹಿಸಿದರು.
ಕಳೆದ ಮೂರು ವರ್ಷದಿಂದಲೂ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಉಮೇಶ್ ಸಾಕಷ್ಟು ಭಾರಿ ಕ್ಷೇತ್ರಶಿಕ್ಷಣಾಧಿಕಾರಿಗಳ ಗಮನಕ್ಕೆ ಈ ಬಗ್ಗೆ ತರಲಾದರೂ ಕೂಡಾ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆಂದು ಬಿ.ಇ.ಓ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಒಂದರಿಂದ 8ನೇ ತರಗತಿವರೆಗೆ 70 ವಿದ್ಯಾರ್ಥಿಗಳಿದ್ದು ಈ ಶಾಲೆಯಲ್ಲಿ ಶಿಕ್ಷಕರ ಕೊರತೆಯಿಂದಾಗಿ 11 ವಿದ್ಯಾರ್ಥಿಗಳು ವರ್ಗಾವಣೆ ಪತ್ರವನ್ನು ಹಿಂಪಡೆದು ಬೇರೆ ಕಡೆ ಶಾಲೆಗಳಿಗೆ ದಾಖಲಾಗಿದ್ದಾರೆ. ಉಳಿದಂತೆ ಈಗ 59 ವಿದ್ಯಾರ್ಥಿಗಳಿದ್ದು ಇಬ್ಬರು ಖಾಯಂ ಶಿಕ್ಷಕರು ಮಾತ್ರ ಇದ್ದಾರೆ ಅದರಲ್ಲೂ ಹಿಂದಿ ಇಂಗ್ಲಿಷ್ ಶಿಕ್ಷಕರುಗಳಿಲ್ಲದೆ ಗ್ರಾಮೀಣ ಪ್ರದೇಶದ ನಮ್ಮ ಮಕ್ಕಳು ಪಾಠ ಪ್ರವಚನದಿಂದ ಹಿಂದೆ ಉಳಿಯುವ ಸ್ಥಿತಿ ನಿರ್ಮಾಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಪ್ರತಿಭಟನಾ ಸಂದರ್ಭದಲ್ಲಿ ಅರಸಾಳು ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಲೋಕೇಶ್, ಕೃಷ್ಣಮೂರ್ತಿ, ನಾಗೇಶ, ಧರ್ಮೋಜಿ, ಟಿ.ಎನ್.ಸುರೇಶ, ಲಲಿತಾ, ತುಳಸಿಕುಮಾರ್, ಸರಿತಾ,ಟಿ.ಹೆಚ್.ಮಂಜುನಾಥ, ಮಂಜುನಾಥ, ಕೀರ್ತಿಕುಮಾರ, ಟಿ.ಎನ್.ರಾಜೇಶ್, ಯಶೋಧ, ಸಚಿನ್, ಚಂದ್ರಶೇಖರ, ಚರಣ, ರಾಮಣ್ಣ, ರಾಘವೇಂದ್ರ, ದೇವರಾಜ್, ಓಂಕಾರ ಇನ್ನಿತರರು ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ತಾವು ಹಾಲಿ ಗೈರು ಹಾಜರಾಗುವ ಮುಖ್ಯೋಪಾದ್ಯಾಯರನ್ನು ಕೂಡಲೇ ಬದಲಾಯಿಸಿ ನಮಗೆ ಖಾಯಂ ನಾಲ್ವರು ಶಿಕ್ಷಕರನ್ನು ನಿಯೋಜಿಸುವಂತೆ ಆಗ್ರಹಿಸಿದರು.
ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ. https://fb.watch/mEscjP_UWB/?mibextid=NnVzG8https://fb.watch/mEscjP_UWB/?mibextid=NnVzG8
ಪ್ರತಿಭಟನಾಕಾರರ ಮನವಿಯನ್ನು ಸ್ವೀಕರಿಸಿ ಮೇಲಾಧಿಕಾರಿಗಳೊಂದಿಗೆ ಸಮಾಲೋಚಿಸಿ ಬರುವ ಸೋಮವಾರದೊಳಗೆ ಹೆಚ್ಚುವರಿ ಇಬ್ಬರು ಶಿಕ್ಷರನ್ನು ನಿಯೋಜಿಸುವುದಾಗಿ ಭರವಸೆ ನೀಡಿದ ಮೇರೆಗೆ ಪ್ರತಿಭಟನೆಯನ್ನು ಹಿಂಪಡೆದರು.
ಹೊರಗಡೆ ಪೋಷಕರಿಂದ ಪ್ರತಿಭಟನೆ ಕೊಠಡಿಯೊಳಗೆ ವಿದ್ಯಾರ್ಥಿಗಳಿಗೆ ಬೋಧನೆ:
ಕಳೆದ ಮೂರು ವರ್ಷದಿಂದ ಶಾಲೆಗೆ ಸರಿಯಾಗಿ ಹಾಜರಾಗದೇ ಗೈರು ಹಾಜರಾಗುತ್ತಿರುವ ಮುಖ್ಯೋಪಾದ್ಯಾಯ ಗಂಗಾನಾಯ್ಕ್ ವಿರುದ್ದ ಎಸ್.ಡಿ.ಎಂ.ಸಿ. ಸದಸ್ಯರು ಮತ್ತು ಗ್ರಾಮಸ್ಥರು, ಪೋಷಕ ವರ್ಗ ಪ್ರತಿಭಟನೆ ನಡೆಸುತ್ತಿದ್ದರೆ ಶಾಲಾ ವಿದ್ಯಾರ್ಥಿಗಳು ಮಾತ್ರ ಉಳಿದ ಇಬ್ಬರು ಶಿಕ್ಷಕರ ಬೋಧನೆಯಲ್ಲಿ ಕೊಠಡಿಯೊಳಗೆ ಕುಳಿತಿದ್ದು ವಿಶೇಷವಾಗಿತ್ತು.
ಸಾಕಷ್ಟು ಪ್ರತಿಭಟನೆಯಲ್ಲಿ ಮಕ್ಕಳು ಶಿಕ್ಷಕರಿಲ್ಲ ಎಂದು ಶಾಲೆಗೆ ಬೀಗ ಜಡಿದು ಪ್ರತಿಭಟನೆಯಲ್ಲಿ ಭಾಗವಹಿಸುವುದರನ್ನು ನೋಡಿದ್ದೇವೆ ಆದರೆ ಇಲ್ಲಿ ಮಕ್ಕಳು ತಮ್ಮ ಭೋದನೆಯಲ್ಲಿ ಪಾಲ್ಗೊಂಡು ಪೋಷಕರುಗಳೇ ಪ್ರತಿಭಟನೆಯ ಜವಾಬ್ದಾರಿಯ ವಹಿಸಿಕೊಂಡು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಬರುವಿಕೆಗಾಗಿ ಕಾದುಕುಳಿತಿರುವುದು ವಿಶೇಷವಾಗಿತ್ತು.