ಜ.15ಕ್ಕೆ ಮೂಲೆಗದ್ದೆ ಮಠದಲ್ಲಿ ಸಂಕ್ರಾಂತಿ ಜಾತ್ರೋತ್ಸವ
ಹೊಸನಗರ: ತಾಲೂಕಿನ ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದಲ್ಲಿ ಜ.15ರಂದು ಮಕರ ಸಂಕ್ರಾಂತಿ ಹಬ್ಬದ ಜಾತ್ರೋತ್ಸವ ನಡೆಯಲಿದೆ ಎಂದು ಮೂಲಗದ್ದೆ ಮಠದ ಅಭಿನವ ಚನ್ನಬಸವ ಸ್ವಾಮೀಜಿಯವರು ಹೇಳಿದರು.
ಅವರು ಪ್ರವಾಸಿ ಮಂದಿರಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಮಾತನಾಡಿ, ವರ್ಷದ ಮೊದಲ ಹಬ್ಬದ ಅಂಗವಾಗಿ ಮಠದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮಠದ ಲಿಂಗೈಕ್ಯ ಸ್ವಾಮೀಜಿಗಳ ಗದ್ದುಗೆಯಲ್ಲಿ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಮಹಾಮಂಗಲ ಪೂಜೆ, ಚೌಡೇಶ್ವರಿ ದೇವಿಯ ಆರಾಧನೆ, ಭಕ್ತಾದಿಗಳಿಗೆ ದಾಸೋಹ ಏರ್ಪಡಿಲಾಗಿದೆ. ಬಳಿಕ ನಡೆಯುವ ಧರ್ಮಸಭೆಯಲ್ಲಿ ಆನಂದಪುರದ ಮುರುಘಾಮಠದ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಶಿವಮೊಗ್ಗದ ಬಸವ ಕೇಂದ್ರದ ಶ್ರೀ ಹಾಗೂ ಅಕ್ಕಿ ಆಲೂರು ಮಠದ ಶ್ರೀ ಸಾನ್ನಿದ್ಯ ವಹಿಸಲಿರುವರು.
ಸಂಸದ ಬಿ.ವೈ.ರಾಘವೇಂದ್ರ ಸೇರಿದಂತೆ ರಾಜಕೀಯ ಕ್ಷೇತ್ರದ ಹಲವು ಪ್ರಮುಖರು ಆಗಮಿಸಲಿದ್ದಾರೆ. ಪ್ರತಿಭಾನ್ವಿತ ಕಲಾವಿಧರಿಂದ ಸಾಂಸ್ಕೃತಿಕ ಹಾಗೂ ಭಕ್ತಿನಮನ ಕಾರ್ಯಕ್ರಮಗಳು ಜರುಗಲಿವೆ ಎಂದ ಅವರು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಕೋರಿದರು.
ಗೋಷ್ಠಿಯಲ್ಲಿ ಪ್ರಮುಖರಾದ ಕೊಗಟಿ ರಾಜಶೇಖರಗೌಡ, ಸಂತೋಷ ಗೌಡ ಮತ್ತಿತರರು ಇದ್ದರು.