ಮಕ್ಕಳ ಪ್ರತಿಭೆ ಗುರುತಿಸಲು ಪ್ರತಿಭಾ ಕಾರಂಜಿ ಪೂರಕ ; ಧನಲಕ್ಷ್ಮಿ ಗಂಗಾಧರ್
ರಿಪ್ಪನ್ಪೇಟೆ : ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದೆ ಎಂದು ರಿಪ್ಪನ್ಪೇಟೆ ಗ್ರಾಮ ಪಂಚಾಯ್ತಿ ಆಧ್ಯಕ್ಷೆ ಧನಲಕ್ಷ್ಮಿ ಗಂಗಾಧರ್ ಹೇಳಿದರು.
ಸಮೀಪದ ಬಾಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಅವರಣದಲ್ಲಿ ರಿಪ್ಪನ್ಪೇಟೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ 2023-24 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ನಶಿಸುತ್ತಿರುವ ಜಾನಪದ ಕಲೆ ಸಂಸ್ಕೃತಿ ಉಳಿಸಿ ಪ್ರೋತ್ಸಾಹಿಸಲು ಪ್ರತಿಭಾ ಕಾರಂಜಿ ಕಾರ್ಯಕ್ರಮ ಸಹಕಾರಿಯಾಗಿದೆ. ಸರ್ಕಾರ ಕೊಡುವ ಕಡಿಮೆ ಹಣದಲ್ಲಿ ಇಂತಹ ಕಾರ್ಯಕ್ರಮಗಳನ್ನು ನಡೆಸುವುದು ಕಷ್ಟವಾಗಿದ್ದರೂ ಕೂಡಾ ಗ್ರಾಮಸ್ಥರ ಮತ್ತು ಮಕ್ಕಳ ಪೋಷಕ ವರ್ಗದವರ ಸಹಕಾರದೊಂದಿಗೆ ನಡೆಸುತ್ತಿರುವುದು ಮಕ್ಕಳ ಪೋಷಕರಲ್ಲಿ ಸಂತಸ ತಂದಿದೆ. ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಕಲಾ ಚಟುವಟಿಕೆಗಳ ಪ್ರತಿಭೆಯಿದ್ದರೂ ಸಹ ಅವಕಾಶಗಳು ಸಿಗುತ್ತಿರಲಿಲ್ಲ, ಇದನ್ನೆಲ್ಲ ಗಮನಿಸಿದ ಸರ್ಕಾರ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಮಕ್ಕಳು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದಕ್ಕೆ ಅನುವು ಮಾಡಿಕೊಡುವುದರ ಸಲುವಾಗಿ ಪ್ರತಿಭಾ ಕಾರಂಜಿಯಂತಹ ಸಾಂಸ್ಕೃತಿಕ ಚಟುವಟಿಕೆಗಳ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದಾರೆ ಎಂದರು.
ಎಸ್.ಡಿ.ಎಂ .ಸಿ.ಅಧ್ಯಕ್ಷ ಲೋಕೇಶ ಅಧ್ಯಕ್ಷತೆ ವಹಿಸಿದ್ದರು.
ಬಾಳೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಶ್ರೀನಿವಾಸ ಅಚಾರ್ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿದರು.
ಮುಖ್ಯಅತಿಥಿಗಳಾಗಿ ಬಿಇಓ ಹೆಚ್.ಆರ್.ಕೃಷ್ಣಮೂರ್ತಿ, ಬಾಳೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ವೇದಾವತಿ, ಬಾಲಚಂದ್ರ, ರಾಜುಗೌಡ್ರು, ರೇಖಾ ಭರತ್ಕುಮಾರ್, ಪಾರ್ವತಮ್ಮ, ಸುಧೀಂದ್ರ ಪೂಜಾರಿ, ವಾಣಿ ಟಾಕಪ್ಪ, ಇನ್ನಿತರರು ಹಾಜರಿದ್ದರು.
ಮುಖ್ಯ ಶಿಕ್ಷಕ ಜಿ.ದುಗ್ಗಪ್ಪ ಸ್ವಾಗತಿಸಿದರು. ಈಶ್ವರಪ್ಪ ನಿರೂಪಿಸಿದರು. ಸುಧಾಕರ್ ವಂದಿಸಿದರು.