ಅಪ್ಪನಿಗೆ ಅವಮಾನಿಸಿದರು ವಿರೋಧಿಸದ ಮಕ್ಕಳು ಬೇಕಾ ? ; ಆಯನೂರು ಮಂಜುನಾಥ್

0 426

ರಿಪ್ಪನ್‌ಪೇಟೆ : ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪನವರು ಮಾತು ಮಾತಿಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಬಗ್ಗೆ ಹಗುರವಾಗಿ ಮಾತನಾಡಿ ಟೀಕಿಸುತ್ತಿದ್ದರೂ ಕೂಡಾ ಅದನ್ನು ಖಂಡಿಸದೇ ಇರುವ ಮಕ್ಕಳು ಬೇಕಾ ? ಎಂದು ವಿಧಾನಪರಿಷತ್ ಮಾಜಿ ಸದಸ್ಯ ಆಯನೂರು ಮಂಜುನಾಥ ಪ್ರಶ್ನೆ ಮಾಡಿದರು.

ರಿಪ್ಪನ್‌ಪೇಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿಮ್ಮ ತಂದೆಯವರಿಗೆ ಹೀಗೆ ಯಾರಾದರೂ ಹೇಳಿದರೆ ಸುಮ್ಮನಿರುತ್ತೀರಾ ? ಎಂದು ಮಾಧ್ಯಮದವರನ್ನು ಪ್ರಶ್ನಿಸಿದ ಅವರು, ಅಂತಹ ಜಾಯಮಾನ ನಮ್ಮದಲ್ಲ ಎಂದು ಹೇಳುತ್ತಾ, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಸಂಸದ ಬಿ.ವೈ.ರಾಘವೇಂದ್ರರಿಗೆ ಅಪ್ಪನಿಗಿಂತ ಅಧಿಕಾರವೇ ಮುಖ್ಯ ಎನ್ನುವುದಕ್ಕೆ ಸಾಕ್ಷಿ ಬೇಕಾ ಎಂದು ಹೇಳುವುದರೊಂದಿಗೆ, ನಿತ್ಯ ಮಾಜಿ ಮುಖ್ಯಮಂತ್ರಿ ರಾಷ್ಟ್ರೀಯ ನಾಯಕ ಬಿ.ಎಸ್.ಯಡಿಯೂರಪ್ಪನವರ ಜನ್ಮ ಜಾಲಾಡುತ್ತಿದ್ದರೂ ಕೂಡಾ ಮಕ್ಕಳಾದ ಈ ಇಬ್ಬರು ತುಟಿ ಬಿಚ್ಚದೇ ಇರುವುದು ಮತ್ತು ಪಕ್ಷದ ಯಾವೊಬ್ಬ ಕಾರ್ಯಕರ್ತರು ಮಾತಾಡದೇ ಮೌನ ವಹಿಸಿರುವುದರ ಬಗ್ಗೆ ತೀವ್ರ ಅಸಮದಾನ ವ್ಯಕ್ತಪಡಿಸಿದ ಅವರು, ಟೀಕಿಸುವುದೇ ಗುರಿಯನ್ನಾಗಿಸಿಕೊಂಡಿರುವ ಈಶ್ವರಪ್ಪನವರಿಗೆ ಎಚ್ಚರಿಕೆಯನ್ನಾದರೂ ನೀಡಲು ಬಿಜೆಪಿ ಪಕ್ಷದ ಯಾವೊಬ್ಬ ನಾಯಕರು ಸಿದ್ದರಿಲ್ಲವೇ ಎಂದು ಕುಟುಕಿದರು.

ಸರ್ಕಾರದ ಗ್ಯಾರಂಟಿ ಯೋಜನೆಯಿಂದಾಗಿ ಮಹಿಳೆಯರ ಮತಗಳು ಕಾಂಗ್ರೆಸ್ ಪಕ್ಷದ ಕಡೆ ಹೆಚ್ಚು ಬರುತ್ತವೆ. ಯಾವುದೇ ಸಂಶಯವಿಲ್ಲ ಆದರೆ ಕೆಲವು ಕಡೆಯಲ್ಲಿ ಪುರುಷ ಮತದಾರರು ಮತ್ತು ಯುವ ಜನಾಂಗದವರ ಓಟುಗಳು ಮಾತ್ರ ಪಕ್ಷಕ್ಕೆ ಬರುತ್ತವೆಂಬುದರ ಬಗ್ಗೆ ಹೇಳುವುದು ಕಷ್ಟವಾಗಿದೆ. ಆದರೂ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯಿಂದ ಒಂದು ಕುಟುಂಬಕ್ಕೆ ವರ್ಷಕ್ಕೆ 45 ರಿಂದ 50 ಸಾವಿರ ರೂ. ಹಣ ಫಲಾನುಭವಿಗಳ ಕೈ ಸೇರುತ್ತಿದ್ದು ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಸಹಕಾರಿಯಾಗಲಿದೆ ಎಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ವೈ.ಹೆಚ್.ನಾಗರಾಜ್, ಚಾಮರಾಜ್, ರತೇಶ್ವರಪ್ಪಗೌಡ, ಬೃಂದಾವನ ಹೋಟೆಲ್ ಮಾಲೀಕ ಸ್ವಾಮಿರಾವ್, ರಾಜು ಟೈಲರ್, ಕರಿಬಸಪ್ಪ ಬೆಳಂದೂರು, ಸಿದ್ದು ಭಂಡಾರಿ ಇನ್ನಿತರರು ಹಾಜರಿದ್ದರು.

Leave A Reply

Your email address will not be published.

error: Content is protected !!