ಶಾಸಕ ಬೇಳೂರುರಿಂದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ | ಗ್ಯಾರಂಟಿ ಯೋಜನೆ ಶೀಘ್ರ ಜಾರಿಗೊಳಿಸಿ ನುಡಿದಂತೆ ಕಾಂಗ್ರೆಸ್ ನಡೆದಿದೆ
ರಿಪ್ಪನ್ಪೇಟೆ : ಕಳೆದ ವಿಧಾನಸಭಾ ಚುನಾವಣೆ ವೇಳೆ ರಾಜ್ಯದ ಮತದಾರರಿಗೆ ಕಾಂಗ್ರೆಸ್ ಪಕ್ಷವು ನೀಡಿದ ಭರವಸೆಯಂತೆ ರಾಜ್ಯದ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸುವ ಮೂಲಕ ಯಶ್ವಸಿಯಾಗಿ ಕಾರ್ಯನಿರ್ವಹಿಸಿ ನುಡಿದಂತೆ ನಡೆದಿದೆ ಎಂದು ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಹಾಗೂ ಸಾಗರ, ಹೊಸನಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಪಟ್ಟಣದ ಸಮೀಪದ ಕೆಂಚನಾಲ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಂಗನವಾಡಿ ಕೇಂದ್ರ ಕಟ್ಟಡ, ಪ್ರಾಥಮಿಕ ಶಾಲೆಯ ಹೆಚ್ಚುವರಿ ಕೊಠಡಿ, ಅಕ್ಷರ ದಾಸೋಹ ಕೊಠಡಿ, ಎನ್.ಆರ್.ಎಲ್.ಎಂ ಕೊಠಡಿ ಉದ್ಘಾಟನೆ, ಹಾಗೂ ಕೆಂಚನಾಲ ಮಾರಿಕಾಂಬ ದೇವಸ್ಥಾನ ಸಮೀಪ ಸಮುದಾಯ ಭವನ ಮತ್ತು ಜಲಜೀವನ್ ಯೋಜನೆ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ. ಮತದಾರರಿಗೆ ನೀಡಿದ್ದ ಐದು ಗ್ಯಾರಂಟಿಗಳನ್ನು ಅರ್ಹ ಫಲಾನುಭವಿಗಳಿಗೆ ತ್ವರಿತವಾಗಿ ತಲುಪಿಸುವ ಮೂಲಕ ಇತಿಹಾಸ ನಿರ್ಮಿಸಿದೆ.
ರಾಜ್ಯ ಸರ್ಕಾರವು ಜಾತಿ, ಧರ್ಮ, ವರ್ಗ ಮೀರಿ ಯೋಜನೆಗಳನ್ನು ಜಾರಿಗೊಳಿಸಿದ್ದು, ಶೋಷಿತರ, ದೀನ-ದಲಿತರ ಪರವಾಗಿ ನಿಂತಿದೆ ಎಂದರು.
ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಆರ್ಥಿಕ ಸದೃಢರಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂಬುದೇ ಸರ್ಕಾರದ ಮುಖ್ಯ ಉದ್ದೇಶವಾಗಿದೆ. ಬೆಲೆ ಏರಿಕೆಯಿಂದಾಗಿ ಜನಜೀವನ ನಡೆಸುವುದು ಕಷ್ಟಸಾಧ್ಯವಾಗಿರುವ ಈ ಕಾಲಘಟ್ಟದಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಗಳು ಫಲಾನುಭವಿಗಳಿಗೆ ಸಹಕಾರಿ ಆಗಿದ್ದು, ಮುಂಬರುವ ದಿನಗಳಲ್ಲಿ ಅವರ ಜೀವನಮಟ್ಟ ಸುಧಾರಿಸಲಿದೆ ಎಂಬ ಆಶಾಭಾವನೆಯನ್ನು ವ್ಯಕ್ತಪಡಿಸಿದ ಅವರು, ಸರ್ಕಾರದ ಎಲ್ಲಾ ಗ್ಯಾರೆಂಟಿ ಯೋಜನೆಗಳು ಈಗಾಗಲೇ ಅರ್ಹ ಫಲಾನುಭವಿಗಳ ಕೈ ಸೇರಿವೆ ಎಂದರು.
‘ಗ್ಯಾರಂಟಿ’ ರಾಜ್ಯ ಸರ್ಕಾರದ ಮಹತ್ವಾಂಕ್ಷೆ ಯೋಜನೆ ಆಗಿದ್ದು, ಅರ್ಹರಿಗೆ ಯೋಜನೆಯ ಫಲ ಶೀಘ್ರವಾಗಿ ತಲುಪಿಸಲು ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಸಮಿತಿಗಳನ್ನು ಸರ್ಕಾರ ರಚಿಸಿದೆ. ಈ ಎಲ್ಲಾ ಗ್ಯಾರಂಟಿ ಯೋಜನೆಗಳಿಂದ ಕುಟುಂಬ ಒಂದಕ್ಕೆ ವಾರ್ಷಿಕ ಸರಾಸರಿ 60 ಸಾವಿರ ರೂ. ಹಣ ಫಲಾನುಭವಿಗಳಿಗೆ ಉಳಿತಾಯ ಆಗುತ್ತಿದೆ. ಗೃಹಲಕ್ಷ್ಮಿ ಯೋಜನೆಯಿಂದ ಮಹಿಳೆಯರ ಆರ್ಥಿಕ ಸಬಲತೆ ಹೆಚ್ಚುತ್ತಿದೆ. ಕುಟುಂಬ ನಿರ್ವಹಣೆ ಸುಗಮವಾಗಿದೆ. ವಿದ್ಯಾವಂತ ನಿರುದ್ಯೋಗಿಗಳಿಗೆ ಯುವನಿಧಿ ಸಹಕಾರಿ ಆಗಿದೆ. ಶಕ್ತಿಯೋಜನೆಯಿಂದ ಮಹಿಳೆಯರು ರಾಜ್ಯ ವ್ಯಾಪಿ ಸರ್ಕಾರಿ ಬಸ್ಗಳಲ್ಲಿ ಉಚಿತ ಪ್ರಯಾಣ ಮಾಡುವ ಮೂಲಕ ಅವರ ಆತ್ಮಶಕ್ತಿ ಹೆಚ್ಚಾಗುತ್ತಿದೆ. ಉಚಿತ ವಿದ್ಯುತ್ ನೀಡಿಕೆಯು ಹಣ ಉಳಿತಾಯಕ್ಕೆ ಕಾರಣವಾಗಿದೆ. ಉಚಿತ ಅಕ್ಕಿಯ ಹಣ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಅಗುವ ಮೂಲಕ ಅವರ ನೈತಿಕಶಕ್ತಿ ಹೆಚ್ಚಿಸಿದೆ ಎಂದರು.
57 ಸಾವಿರ ಕೋಟಿ ರೂ. ಅನುದಾನದ ಉಚಿತ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದ ಸರ್ಕಾರವು ಶೀಘ್ರದಲ್ಲೇ ಐದು ಸಾವಿರ ಸರ್ಕಾರಿ ಬಸ್ಗಳ ಖರೀದಿಗೆ ಮುಂದಾಗಿದೆ. ಹೊಸನಗರ ತಾಲೂಕಿನಲ್ಲೂ ಕನಿಷ್ಟ ಇಪ್ಪತ್ತು ಕೆಂಪು ಸರ್ಕಾರಿ ಬಸ್ಗಳ ಚಾಲನೆಗೆ ತಾವು ಬದ್ದರಾಗಿರುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಕೆಂಚನಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಯಲ್ಲಿ ವಾಸವಾಗಿದ್ದು ಸರ್ಕಾರದ ವಿವಿಧ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ನೌಕರರಿಗೆ ಹಾಗೂ ಕಲೆ, ಸಾಹಿತ್ಯ, ಕೃಷಿ, ಕ್ರೀಡೆಯಲ್ಲಿ ಸಾಧನೆ ಮಾಡಿದ ಸಾಧಕರನ್ನು ಮತ್ತು ನಿವೃತ್ತ ಯೋಧರನ್ನು ಗ್ರಾಮ ಪಂಚಾಯಿತಿ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.
ಪಿಡಿಒಗಳಿಗೆ ಎಚ್ಚರಿಕೆ :
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ಅನುಷ್ಠಾನ ಗೊಳಿಸಿರುವ ಜಲ ಜೀವನ್ ಯೋಜನೆ ಅಡಿ ಪ್ರತಿ ಕುಟುಂಬಕ್ಕೆ ಕುಡಿಯುವ ನೀರಿನ ಸೌಲಭ್ಯವನ್ನು ಕಡ್ಡಾಯವಾಗಿ ನೀಡಲೇಬೇಕು. ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಇದರಲ್ಲಿ ಜಾತಿ, ಮತ, ಪಂಥ, ಹಾಗೂ ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರು ಎಂದು ತಾರತಮ್ಯ ಎಸಗಿದರೆ ನಿರ್ದಾಕ್ಷಿಣ್ಯವಾಗಿ ಅಮಾನತು ಗೊಳಿಸಲಾಗುವುದು.
– ಗೋಪಾಲಕೃಷ್ಣ ಬೇಳೂರು, ಶಾಸಕರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಂಚನಾಲ ಗ್ರಾಮ ಪಂಚಾಯತಿ ಅಧ್ಯಕ್ಷ ಉಬೇದುಲ್ಲಾ ಶರೀಫ್ ವಹಿಸಿದ್ದರು. ಮಾರಿಕಾಂಬಾ ದೇವಸ್ಥಾನ ಸಮಿತಿಯ ಅಧ್ಯಕ್ಷ ಕೆ. ಎಂ ಬಸವರಾಜ್, ಇಒ ನರೇಂದ್ರ ಕುಮಾರ್, ಬಿಇಒ ಕೃಷ್ಣಮೂರ್ತಿ, ಸಿಪಿಐ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ರಮ್ಯಾ, ಸದಸ್ಯ ರಾದ ಮಹಮದ್ ಶರೀಫ್, ಕೃಷ್ಣ, ಪರಮೇಶ್ವರ್, ಪುಟ್ಟಮ್ಮ, ಹೂವಮ್ಮ, ಗೌರಮ್ಮ ಅರಸಾಳು ಗ್ರಾ.ಪಂ. ಮಾಜಿ ಅಧ್ಯಕ್ಷ ಉಮಾಕರ್, ರಿಪ್ಪನ್ಪೇಟೆ ಗ್ರಾಮ ಪಂಚಾಯತಿ ಸದಸ್ಯರಾದ ಮಧುಸೂದನ್, ಆಶೀಫ್ ಬಾಷಾ, ಗಣಪತಿ, ಸಿಡಿಪಿಓ ಸುರೇಶ್, ಮೊಬೈಲ್ ಹರ್ಷ, ಮೊದಲಾದವರು ಉಪಸ್ಥಿತರಿದ್ದರು.
ರಾಜ್ಯ ಅರಣ್ಯ ಕೈಗಾರಿಕೆ ನಿಗಮದ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಬಳಿಕ ಗ್ರಾಮಕ್ಕೆ ಆಗಮಿಸಿದ ಅವರನ್ನು ನೂರಾರು ಅಭಿಮಾನಿಗಳು ಪಟಾಕಿ ಸಿಡಿಸಿ, ಬೃಹತ್ ಮಾಲಾರ್ಪಣೆ ಮಾಡುವ ಮೂಲಕ ಭರಮಾಡಿಕೊಂಡರು.
ಕೆಂಚನಾಲ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಪಿಡಿಒ ರವಿ ಸ್ವಾಗತಿಸಿ, ಶಿಕ್ಷಕಿಯರಾದ ಫಾಜಿಯ ಸರವತ್ ನಿರೂಪಿಸಿ, ಭಾಗ್ಯಲಕ್ಷ್ಮೀ ವಂದಿಸಿದರು.