ಇತ್ತೀಚಿನ ದಿನಗಳಲ್ಲಿ ಪತ್ರಕರ್ತರು ತೀವ್ರ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ ; ಬಿವೈಆರ್

0 260

ಶಿಕಾರಿಪುರ: ಇತ್ತೀಚಿನ ದಿನಗಳಲ್ಲಿ ರಾಜ್ಯ ಹಾಗೂ ರಾಷ್ಟ್ರದಲ್ಲಿ ಎಲ್ಲಾ ಪತ್ರಕರ್ತರಿಗೂ ಅನೇಕ ಸವಾಲುಗಳ ಜೊತೆಗೆ ಹಲವಾರು ಸಮಸ್ಯೆಗಳಿದ್ದು, ಇಂತಹಾ ಪತ್ರಕರ್ತರ ಮೇಲೆ ಹಲ್ಲೆ ನಡೆಯುತ್ತಿದ್ದು, ಅವರು ತೀವ್ರ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ ಎಂದು ಜ ಸಂಸದ ಬಿ ವೈ ರಾಘವೇಂದ್ರ ವಿಷಾದ ವ್ಯಕ್ತಪಡಿಸಿದರು.

ಪಟ್ಟಣದ ಸುದ್ದಿಮನೆಯಲ್ಲಿ ಭಾನುವಾರ ಸಂಜೆ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಶಿಕಾರಿಪುರ ತಾಲ್ಲೂಕು ಘಟಕದ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆಧುನಿಕ ತಂತ್ರಜ್ಞಾನ ಯುಗದ ಈಗಿನ ದಿನಗಳಲ್ಲಿ ಜನತೆಗೆ ತತಕ್ಷಣ ಸುದ್ದಿ ಮುಟ್ಟಿಸುವ ಭರಾಟೆಯಲ್ಲಿರುವ ಎಲ್ಲಾ ಪತ್ರಕರ್ತರಿಗೂ ಅನೇಕ ಸವಾಲುಗಳ ಜೊತೆಗೆ ಹಲವಾರು ಸಮಸ್ಯೆಗಳಿದ್ದು, ಇಂತಹಾ ಪತ್ರಕರ್ತರ ಮೇಲೆ ಹಲ್ಲೆ ನಡೆಯುತ್ತಿದ್ದು, ಅವರು ತೀವ್ರ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಅವರು ಸಾಮಾಜಿಕ ಕಳಕಳಿಯನ್ನು ಹೊತ್ತು ಸರಿತಪ್ಪುಗಳ ಕುರಿತು ಪತ್ರಿಕೆಗಳಲ್ಲಿ ಲೇಖನವನ್ನು ಮಾಡಿದರೆ ರಾಜಕಾರಣಿಗಳು ತಮ್ಮ ರಾಜಕೀಯ ದ್ವೇಶಗಳನ್ನ ಪತ್ರಕರ್ತರ ಮೇಲೆ ಹಾಕಿ ಅವರ ಮೇಲೆ ಹಲ್ಲೆ ಮಾಡುವಂತಹಾ ಪರಿಸ್ಥಿತಿ ಇತ್ತೀಚೆಗೆ ಕಂಡುಬರುತ್ತಿದೆ ಎಂದರು.


ಸ್ವಾಮಿ ವಿವೇಕಾನಂದರು, ಸ್ವಾತಂತ್ರ್ಯ ಹೋರಾಟದ ರುವಾರಿಯಾದ ಮಹಾತ್ಮ ಗಾಂಧೀಜಿ, ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರವರು ಸಹಾ ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದಾರೆ. ಪತ್ರಕರ್ತರಿಗೆ ಯಾವುದೇ ರೀತಿಯ ಆದಾಯವಿಲ್ಲ. ಇದು ಒಂದು ಸಾಮಾಜಿಕ ಸೇವೆಯಾಗಿದೆ ಅವರನ್ನು ಗೌರವದಿಂದ ಕಾಣಬೇಕು ಎಂಬುದು ಸಾರ್ವಜನಿಕರು ಅರಿಯಬೇಕಿದೆ ಎಂದ ಅವರು, ಕೋವಿಡ್ ಸಂಕಷ್ಟಗಳ ಸಂದರ್ಭದಲ್ಲಿ ಮೃತರಾದ ಪತ್ರಕರ್ತರ ಕುಟುಂಬಕ್ಕೆ ಐದು ಲಕ್ಷ ರೂ. ಪರಿಹಾರ ನೀಡುವಂತಹ ಕೆಲಸ ಏನಾದರು ಆಗಿದೆ ಎಂದರೆ ಅದು ಬಿ ಎಸ್ ಯಡಿಯೂರಪ್ಪರವರ ಅವಧಿಯಲ್ಲಿ ಜಾರಿಗೆ ತರಲಾಯಿತು ಎಂದು ಸ್ಮರಿಸಿದ ಅವರು, ತಾಲ್ಲೂಕಿನ ಪತ್ರಕರ್ತರು ಮತ್ತು ಜನತೆ ಬಿ ಎಸ್ ಯಡಿಯೂರಪ್ಪರವರನ್ನ ಶಾಸಕರಿಂದ ಹಿಡಿದು, ನಾಲ್ಕು ಬಾರಿ ಮುಖ್ಯಮಂತ್ರಿಯಾಗುವವರೆಗೂ ಬೆಳೆಸುವುದರಲ್ಲಿ ಸಹಕಾರ ನೀಡಲಿದ್ದಾರೆ ಎಂದು ತಿಳಿಸಿದರು.

ಮಾಜಿ ಭದ್ರಕಾಡ ಅಧ್ಯಕ್ಷ ನಗರದ ಮಹಾದೇವಪ್ಪ ಮಾತನಾಡಿ, ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದು ಪತ್ರಕರ್ತರ ಧರ್ಮವಾಗಿದ್ದು, ಪತ್ರಕರ್ತರು ಸಾಮಾಜಿಕ ಹಾಗೂ ರಾಜಕೀಯ ವ್ಯವಸ್ಥೆಯಲ್ಲಿ ಸರಿತಪ್ಪುಗಳನ್ನು ಎತ್ತಿ ಹಿಡಿಯುವ ಮೂಲಕ ಸಮಾಜಮುಖಿ ಕೆಲಸಗಳಲ್ಲಿ ತೊಡಗಿದ್ದಾರೆ. ದೇಶದ ಎಲ್ಲ ಪತ್ರಕರ್ತರು ಯಾವುದೇ ರೀತಿಯ ಒತ್ತಡಗಳಿಗೆ ಮಣಿಯದೇ, ಪಕ್ಷಾತೀತವಾಗಿ ಸಮಾಜ ಮುಖಿಯಾಗಿರಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಸಂಘದ ಉಪಾಧ್ಯಕ್ಷ ಹುಚ್ರಾಯಪ್ಪ ಮಾತನಾಡಿ, ಜಿಲ್ಲೆಯಲ್ಲಿ ಸಾರ್ವಜನಿಕವಾಗಿ  ಯಾವುದೇ ಫಲಾಪೇಕ್ಷೆಗಳಿಲ್ಲದೇ ಉತ್ತಮ  ಸೇವೆ ಸಲ್ಲಿಸುತ್ತಾ ನಡೆದು ಕೊಂಡು ಬಂದಿದೆ ಎಂದರೆ ಅದು ಶಿಕಾರಿಪುರ ತಾಲ್ಲೂಕಿನ ಪತ್ರಕರ್ತರು. ಬಿ ಎಸ್ ಯಡಿಯೂರಪ್ಪರವರು ನಮ್ಮ ಸಂಘಕ್ಕೆ ಒಂದು ನಿವೇಶನ ಮತ್ತು ಪತ್ರಕರ್ತರ ಭವನ ನಿರ್ಮಾಣಕ್ಕೆ ಸಹಕಾರ ನೀಡಿದ್ದಾರೆ ಇದು ಅವಿಸ್ಮರಣೀಯ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ನಿಕಟಪೂರ್ವ ಅಧ್ಯಕ್ಷ ಚಂದ್ರು ಮಠದ್ ಮಾತನಾಡಿ, ಪತ್ರಕರ್ತರು ಲಕ್ಷ್ಮಿ ಪುತ್ರರಲ್ಲ ಸರಸ್ವತಿ ಪುತ್ರರು. ಯಾವ ಪತ್ರಕರ್ತರಿಗೂ ಯಾವುದೇ ರೀತಿಯ ವರಮಾನವಿರುವುದಿಲ್ಲ ಎಂದು ಹೇಳಿದರು.

ಸಂಘದ ನೂತನ ಅಧ್ಯಕ್ಷ ಬಿ ಎಲ್ ರಾಜು ಮಾತನಾಡಿ, ಪತ್ರಕರ್ತರ ಸಂಘದ ಭವನದ ಹೆಚ್ಚುವರಿ ಕೆಲಸಕ್ಕಾಗಿ 10 ಲಕ್ಷ ರೂಪಾಯಿ ಹಣ ಬಿಡುಗಡೆ ಮಾಡಿರುವುದಕ್ಕಾಗಿ ಸಂಸದರಿಗೆ ನಮ್ಮ ಧನ್ಯವಾದಗಳು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಟ್ರಸ್ಟ್ ಅದ್ಯಕ್ಷ ಬಸವರಾಜ್ ಈ ಹೆಚ್, ಉಪಾಧ್ಯಕ್ಷ ಕೋಟೇಶ್ವರ, ಮಾಜಿ ಅಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿ ಹೆಚ್ ಆರ್ ರಾಘವೇಂದ್ರ, ಸದಸ್ಯರಾದ ಹೆಚ್ ಎಸ್ ರಘು, ಪ್ರಕಾಶ್ ಹೆಚ್ ಕೆ, ರಘು ನಿರ್ಮಿತ್, ಐ ಎಫ್ ಮಳಗಿ, ಪ್ರಕಾಶ್ ಎಸ್, ಕಾಳಿಂಗ್ ರಾವ್, ದೀಪು ದೀಕ್ಷಿತ್, ಮಂಜುನಾಥ್ ಮಠದ್, ನವೀನ್, ಅರುಣ್ ಕುಮಾರ್, ಸತೀಶ್, ರಾಜಾರಾವ್ ಎಂ ಜಾಧವ್, ಸೇರಿದಂತೆ ಸಂಘದ ಎಲ್ಲಾ ಸದಸ್ಯರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ವಿವಿಧ ಪಕ್ಷಗಳ ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರು ಪಾಲ್ಗೊಂಡಿದ್ದರು.

Leave A Reply

Your email address will not be published.

error: Content is protected !!