ಡಿಸಿ ಕಚೇರಿ ಮುಂದೆ ಆಜಾನ್ ಕೂಗಿ ಸೊಕ್ಕಿನಿಂದ ಮೆರೆದಿರುವ ಸಮುದಾಯದ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ; ಕೆ.ಎಸ್ ಈಶ್ವರಪ್ಪ
ಶಿವಮೊಗ್ಗ: ಡಿಸಿ ಕಚೇರಿಯ ಮುಂದೆ ಆಜಾನ್ ಕೂಗಿ ಸೊಕ್ಕಿನಿಂದ ಮೆರೆದಿರುವ ಸಮುದಾಯದ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕಿದೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಆಗ್ರಹಿಸಿದರು.
ಇಂದು ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಸಿ ಕಚೇರಿ ಮುಂದೆ ಆಜಾನ್ ಕೂಗಿರುವುದು ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಅಷ್ಟಲ್ಲದೇ ವಿಧಾನಸೌಧದಲ್ಲೂ ಆಜಾನ್ ಕೂಗುತ್ತೇವೆ ಎಂದಿದ್ದಾರೆ. ಇದನ್ನು ರಾಜ್ಯ ಸರ್ಕಾರ ಮಾತ್ರವಲ್ಲ, ಕೇಂದ್ರ ಸರ್ಕಾರ ಕೂಡ ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದರು.
ಮಾ.17 ರಂದು ಅಂಜುಮಾನ್ ಸಂಸ್ಥೆ ನಡೆಸಿದ ಪ್ರತಿಭಟನೆ ವೇಳೆ ಆಜಾನ್ ಕೂಗಿದ ಯುವಕನ ವಿರುದ್ಧ ಸೆಕ್ಷನ್ 107 ಹಾಕಿ ಬಿಡುಗಡೆ ಮಾಡಲಾಗಿದೆ. ಸ್ಟೇಷನ್ ಬೇಲ್ ಮೇಲೆ ಆತನನ್ನು ಬಿಡುಗಡೆ ಮಾಡಲಾಗಿದೆ. ಡಿಸಿ ಕಚೇರಿಯ ಮುಂದೆ ಕೋಮು ಸೌಹಾರ್ದತೆ ಹಾಳು ಮಾಡಿದ್ದಾನೆ. ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಆಜಾನ್ ವಿಚಾರದಲ್ಲಿ ಪೊಲೀಸ್ ಬಿಗಿ ಕ್ರಮ ಕೈಗೊಳ್ಳಬೇಕಿತ್ತು ಎಂದರು.
ಅಲ್ಲಾಹುವಿಗೆ ನಾನು ಅಪಮಾನ ಮಾಡಿಲ್ಲ. ಅವರೇ ಅಪಮಾನ
ಮಾಡಿದ್ದಾರೆ. ನಾಲ್ಕು ಮೈಕ್ನಲ್ಲಿ ಕೂಗಿ ದೇವರನ್ನ ತೃಪ್ತಿಪಡಿಸುತ್ತೀರಾ? ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಆಜಾನ್ ಕೂಗಬೇಕು ಎಂಬುದು ನನ್ನ ಹೇಳಿಕೆಯಾಗಿದೆ. ಆಜಾನ್ ಕೂಗಲು ಕಾನೂನು ಇದೆ. ಅದೇ ರೀತಿ ಕೂಗಬೇಕು ಎಂಬುದು ನನ್ನ ನಿಲುವು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಎಸ್.ಎನ್. ಚನ್ನಬಸಪ್ಪ, ಸಂತೋಷ್ ಬಳ್ಳೆಕೆರೆ, ಚಂದ್ರಶೇಖರ್, ಕೆ.ವಿ. ಅಣ್ಣಪ್ಪ ಮೊದಲಾದವರಿದ್ದರು.