ಗ್ರಾಮೀಣ ಭಾಗದ ಆರ್ಥಿಕ ಚಟುವಟಿಕೆಗಳು ಹೆಚ್ಚಬೇಕು ; ಸಚಿವ ಕೆ.ಎನ್.ರಾಜಣ್ಣ

0 29


ಶಿವಮೊಗ್ಗ: ಗ್ರಾಮೀಣ ಭಾಗದಲ್ಲಿ ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸುವ ರೀತಿಯಲ್ಲಿ ಸಹಕಾರಿ ಇಲಾಖೆಗಳು ಕೆಲಸ ಮಾಡಬೇಕು. ಹಾಗೂ ಸಂಘಗಳಲ್ಲಿ ಯುವಕರಿಗೆ ಹೆಚ್ಚಿನ ಅವಕಾಶಗಳನ್ನು ನೀಡಬೇಕೆಂದು ಸಹಕಾರ ಸಚಿವರಾದ ಕೆ.ಎನ್.ರಾಜಣ್ಣ ತಿಳಿಸಿದರು.


ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಆಯೋಜಿಸಲಾಗಿದ್ದ ಜಿಲ್ಲೆಯ ಸಹಕಾರ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


1975 ರಲ್ಲಿ ವಿವಿಧ ರೀತಿಯ ಸಹಕಾರ ಸಂಘಗಳನ್ನು ಸಂಯೋಜಿಸಿ ಗ್ರಾಮೀಣ ಭಾಗದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ರಚಿಸಲಾಯಿತು. ಎಲ್ಲ ರೈತರಿಗೆ ಸಾಲ ಸೌಲಭ್ಯ ತಲುಪಬೇಕೆಂಬುದು ಇದರ ಉದ್ದೇಶವಾಗಿದೆ.


ಸಹಕಾರಿ ಸಂಘಗಳಲ್ಲಿ ಪ್ರಮೋಟರ್ಸ್ ಆಗಿ ಯುವಕರನ್ನು ನೇಮಿಸಬೇಕು. ಹಾಗೂ ಸಣ್ಣ, ಮಧ್ಯಮ ಸೇರಿದಂತೆ ಎಲ್ಲ ಅರ್ಹ ರೈತರಿಗೆ ಸಾಲ ಸೌಲಭ್ಯ ಸಿಗುವಂತೆ ಆಗಬೇಕು. ಹಾಲಿನ ಉತ್ಪಾದನೆಯನ್ನು ಹೆಚ್ಚಿಸಲು ಹಸು ಸಾಕಾಣಿಕೆ, ಸಣ್ಣ ಭೂಮಿಯಲ್ಲಿ ಮೇವು ಬೆಳೆ, ಹುಲ್ಲು ಇತರೆ ಬೆಳೆಯಲಿಕ್ಕೆ ಉತ್ತೇಜನ ಸೇರಿದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.


ಇತ್ತೀಚೆಗೆ ಹಾಲಿನ ಕಲಬೆರಕೆ ಹೆಚ್ಚಾಗುತ್ತಿದ್ದು, ಇದು ಆಗದಂತೆ ಕ್ರಮ ಕೈಗೊಳ್ಳಬೇಕು. ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಸರ್ಕಾರ ಹಾಲು ಉತ್ಪಾದಕರಿಗೆ ಹೆಚ್ಚಿನ ಪ್ರೋತ್ಸಾಹ ಹಣ ನೀಡುತ್ತಿದ್ದು, ಹೈನುಗಾರಿಕೆಗೆ ಹೆಚ್ಚಿನ ಒತ್ತು ನೀಡಬೇಕು.


ನಂದಿನ ಹಾಲಿನ ಪಾರ್ಲರ್‍ಗಳಲ್ಲಿ ನಂದಿನಿ ಉತ್ಪನ್ನಗಳನ್ನು ಹೊರತುಪಡಿಸಿ ಇತರೆ ಉತ್ಪನ್ನಗಳು ಮಾರಾಟವಾಗದಂತೆ ಕ್ರಮ ಕೈಗೊಳ್ಳಬೇಕು.
ಸಹಕಾರ ಇಲಾಖೆಗಳು ಸ್ವಂತ ಕಟ್ಟಡಗಳನ್ನು ಹೊಂದಬೇಕು. ಜಾಗವಿಲ್ಲದಿದ್ದರೆ ಡಿಸಿ ಯವರ ಗಮನಕ್ಕೆ ತಂದು ಸಿಎ ನಿವೇಶನ ಅಥವಾ ಇತರೆ ಸರ್ಕಾರಿ ಜಾಗವನ್ನು ಪಡೆದುಕೊಂಡು ಆಸ್ತಿ ಸೃಷ್ಟಿ ಮಾಡಿ ಮುಂದಿನ ಸಹಕಾರಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದರು.


ಡಿಸಿಸಿ ಬ್ಯಾಂಕ್‍ನ ಮಾರಾಟ ಮತ್ತು ವಸೂಲಾಧಿಕಾರಿ ಮಹಾದೇವಪ್ಪ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 1313 ಸಹಕಾರ ಸಂಘಗಳಿದ್ದು, 915 ಸಂಘಗಳು ಲಾಭದಲ್ಲಿವೆ. 333 ನಷ್ಟದಲ್ಲಿ ಮತ್ತು 65 ಲಾಭ, ನಷ್ಟವಿಲ್ಲದೆ ನಡೆಯುತ್ತಿವೆ ಎಂದರು.


ಸಚಿವರು ಪ್ರತಿಕ್ರಿಯಿಸಿ, ಕಾರ್ಯ ನಿರ್ವಹಿಸದ ಸಂಘಗಳ ನೋಂದಣಿಯನ್ನು ನಿಯಮಾನುಸಾರ ರದ್ದುಪಡಿಸಬೇಕು. ನಷ್ಟದಲ್ಲಿರುವ ಸಂಘಗಳ ಕುರಿತು ಸೂಕ್ತ ಕ್ರಮ ಕೈಗೊಂಡು ಕಾರ್ಯ ನಿರ್ವಹಿಸುವಂತೆ ಮಾಡಬೇಕು. ಎಲ್ಲ ಸೊಸೈಟಿ ಲಿಕ್ವಿಡೇಟರ್‍ಗಳು ಚಾರ್ಜ್ ತೆಗೆದುಕೊಂಡು ಸಂಘದ ಆಸ್ತಿ ಮತ್ತು ಭಾದ್ಯತೆಗಳ ಪಟ್ಟಿ ಮಾಡಿ ನಿರ್ವಹಿಸಬೇಕು. ಸೊಸೈಟಿ ಆಸ್ತಿಯನ್ನು ಸಂರಕ್ಷಿಸಬೇಕು. ಹಣ ದುರ್ಬಳಕೆ ಪ್ರಕರಣಗಳಲ್ಲಿ ಸಂಬಂಧಿಸಿದವರ ಆಸ್ತಿಯನ್ನು ಲಗತ್ತಿಸಿ, ಇಸಿ ಮತ್ತು ಖಾತೆಯಲ್ಲಿ ಇದು ಬರುವಂತೆ ಮಾಡಿ ಕ್ರಮ ವಹಿಸಬೇಕು. ಸಾರ್ವಜನಿಕರ ಹಣದ ವಿಷಯದಲ್ಲಿ ನ್ಯಾಯಯುತವಾಗಿ ಕೆಲಸ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.


ಸಾಲ ವಸೂಲಾತಿ ಕಡೆ ಗಮನ ಹರಿಸಬೇಕು. ನಾನು ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಿ ಪ್ರಗತಿ ಪರಿಶೀಲನೆ ಮಾಡುತ್ತೇನೆ. ಹಣ ದುರ್ಬಳಕೆ ಆಗದಂತೆ ನೋಡಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಪ್ರತಿ ಗ್ರಾಮ ಪಂಚಾಯ್ತಿಗೊಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ರಚನೆ ಮತ್ತು ಆಡಳಿತ ವಿಕೇಂದ್ರೀಕರಣ ಮಾಡಲು ಕ್ರಮ ವಹಿಸಲಾಗುವುದು ಎಂದರು.


ಡಿಸಿಸಿ ಬ್ಯಾಂಕ್ ಠೇವಣಿಯನ್ನು ಹೆಚ್ಚಿಸುವಲ್ಲಿ ಕ್ರಮ ವಹಿಸಬೇಕು. ಆಡಿಟ್ ಇಲಾಖೆ ಎಲ್ಲ ಸಹಕಾರ ಸಂಘಗಳ ಆಡಿಟ್ ಮಾಡಬೇಕು. ಸಂಘಗಳ ಲೆಕ್ಕ ಪರಿಶೋಧನೆಗೆ ಸಂಬಂಧಿಸಿದಂತೆ ಪ್ರಕರಣ 63, 64, 65 ರಡಿ ಪ್ರಕರಣಗಳನ್ನು ವಿಲೇವಾರಿ ಮಾಡುವಂತೆ ಸೂಚಿಸಿದರು. ಹಾಗೂ ಕೃಷಿ ಪತ್ತಿನ ಸಹಕಾರ ಸಂಘಗಳು ಸೇರಿದಂತೆ ಎಲ್ಲ ಸಹಕಾರ ಸಂಘಗಳ ಕ್ಯಾಶ್‍ಬುಕ್, ಆಡಿಟ್ ವರದಿ ಮತ್ತು ಇತರೆ ವಹಿಗಳನ್ನು ಸಾಲ ಕೊಡುವ ಮುನ್ನ ಪರಿಶೀಲಿಸಬೇಕು ಎಂದ ಅವರು ಎಲ್ಲ ಸಹಕಾರಿಗಳು ಬಾಕಿ ಉಳಿದಿರುವ ಕೆಲಸಗಳನ್ನು ನಿಗದಿತ ಸಮಯದಲ್ಲಿ ಮುಗಿಸಬೇಕೆಂದರು.


ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಜಿ.ಪಂ ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ, ಡಿಸಿಸಿ ಬ್ಯಾಂಕ್ ಅಧಿಕಾರಿಗಳು, ಸಹಕಾರಿ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಜರಿದ್ದರು.

Leave A Reply

Your email address will not be published.

error: Content is protected !!