Ripponpet | ಗಾಂಧಿ ಗ್ರಾಮ ಪುರಸ್ಕಾರ ಪಡೆದ ಗ್ರಾ.ಪಂ.ಗೆ ಕಸದ ರಾಶಿ ಕಂಡಿಲ್ಲವೇ ?
ರಿಪ್ಪನ್ಪೇಟೆ: ಕಸ, ಕಳೆಯಿಂದ ತುಂಬಿ ಹೋಗಿರುವ ಇಲ್ಲಿನ ನಾಡಕಛೇರಿಯ ಸುತ್ತಮುತ್ತ, ಸಾರ್ವಜನಿಕರ ಶೌಚಾಯದ ಎದುರು ಮತ್ತು ಪ್ರಾಥಮಿಕ ಅರೋಗ್ಯ ಕೇಂದ್ರದ ಹಿಂಭಾಗದ ಮರಣೋತ್ತರ ಕೊಠಡಿಯ ಬಳಿ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಲಂಟಾನ್ ಗಿಡ ದುರ್ಗಿಮಟ್ಟಿಯಂತೆ ಬೆಳೆದಿದ್ದು ಅಲ್ಲದೆ ಪೊಲೀಸ್ ಠಾಣೆಯ ಎದುರು ಭಾಗದಲ್ಲಿನ ಖಾಸಗಿ ಆಸ್ಪತ್ರೆಯ ಬಳಿಯ ಚರಂಡಿ ನೀರು ಸಹ ಹರಿದು ಹೋಗದೆ ಒಂದೇ ಕಡೆ ಶೇಖರಣೆಗೊಂಡು ಸೊಳ್ಳೆಗಳ ಉತ್ಪಾದನಾ ಕೇಂದ್ರದಂತಾಗಿದ್ದು ಹುಳ ಹಪ್ಪಟ್ಟುಗಳ ಭಯದಲ್ಲಿ ಸಾರ್ವಜನಿಕರು ಓಡಾಡುವಂತಾಗಿರುವ ಈ ರಿಪ್ಪನ್ಪೇಟೆಗೆ ಸರ್ಕಾರ ಗಾಂಧಿ ಜಯಂತಿಯಂದು ಗಾಂಧಿ ಪುರಸ್ಕಾರ ನೀಡಿ ಗೌರವಿಸಿರುವುದರ ಬಗ್ಗೆ ಸಾರ್ವಜನಿಕರಲ್ಲಿ ಅಪಹಾಸ್ಯಕ್ಕೆ ಎಡೆಮಾಡಿಕೊಟ್ಟಿದೆ.
ಅಕ್ಟೋಬರ್ 2 ರಂದು ಗಾಂಧಿ ಜಯಂತಿಯ ದಿನ ಹಲವರು ಶ್ರಮದಾನದ ಮೂಲಕ ತಮ್ಮ ಕಛೇರಿಯ ಸುತ್ತಮುತ್ತ ಸ್ವಚ್ಚಗೊಳಿಸುವ ಮೂಲಕ ಮಹಾತ್ಮಗಾಂಧಿ ಜಯಂತಿಯನ್ನು ಆಚರಿಸುವುದು ಪದ್ದತಿ ಆದರೆ ನಮ್ಮೂರಿನ ಕೆಲವು ಕಛೇರಿಯ ಅಧಿಕಾರಿಗಳಿಗೆ ಒಂದು ದಿನ ರಜೆ ಸಿಕ್ಕಿತ್ತಲ್ಲ ಎಂಬ ಖುಷಿಯಲ್ಲಿ ‘ಎಲ್ಲಾದರೂ ಇರು ಪಗಾರ ಬಂದರೆ ಸಾಕು’ ಎಂಬ ತತ್ವಸಿದ್ದಾಂತದಡಿಯಲ್ಲಿ ತಾವು ಕೆಲಸ ಮಾಡುವ ಮನೆ ಹೇಗೆ ಇರಲಿ ನಮಗೇನು ಎನ್ನುವವರೆ ಹೆಚ್ಚಾಗಿದ್ದಾರೆಂಬುದಕ್ಕೆ ಶಿವಮೊಗ್ಗ ಹೊಸನಗರ ಮುಖ್ಯ ರಸ್ತೆಯಂಚಿನಲ್ಲಿರುವ ಗ್ರಾಮ ಪಂಚಾಯ್ತಿ ಕಛೇರಿಯ ಮುಂಭಾಗದಲ್ಲಿನ ಹೋಬಳಿ ಕಛೇರಿಗೆ ಒಮ್ಮೆಯಾದರೂ ಭೇಟಿ ಕೊಡಿ ತಮಗೆ ತಿಳಿಯುತ್ತದೆ ಎಷ್ಟು ಅಚ್ಚುಕಟ್ಟಾಗಿ ಇಟ್ಟುಕೊಂಡಿದ್ದಾರೆಂದು. ‘ಹೊರಗೆಲ್ಲ ಬೆಳಕು ಒಳಗೆಲ್ಲ ಹುಳುಕು’ ಎಂಬ ಗಾದೆ ಮಾತಿಗೆ ಇಲ್ಲಿನ ನಾಡಕಛೇರಿ ತದ್ವಿರುದ್ದವಾಗಿದೆ. ಹೊರಗೆಲ್ಲ ಹುಳುಕು ಒಳಗೆಲ್ಲ ಬೆಳಕು ಎಂಬಂತಾಗಿದೆ. ಒಟ್ಟಾರೆಯಾಗಿ ಕಂದಾಯ ಇಲಾಖೆಯ ಹೋಬಳಿ ಕಛೇರಿಯ ಸಾರ್ವಜನಿಕ ಶೌಚಾಲಯಕ್ಕೆ ನೀರಿಲ್ಲ ಸ್ವಚ್ಚತೆ ಎಂಬುದು ಮೇರಿಚಿಕೆಯಾದಂತಾಗಿದೆ.
ಇನ್ನೂ ಕಛೇರಿ ಕಟ್ಟಡದ ಸುತ್ತ ಆಳೆತ್ತರದ ಗಿಡ-ಗಂಟಿಗಳಿಂದ ಮುಚ್ಚಿಕೊಂಡಿದೆ ಹಾಗೇಯೆ ಸಮೀಪದಲ್ಲಿಯೇ ಇರುವ ಖಾಸಗಿ ಆಸ್ಪತ್ರೆಯ ಮುಂಭಾಗದಲ್ಲಿ ಚರಂಡಿಯಲ್ಲಿ ಕಲುಷಿತ ನೀರು ಹರಿದು ಹೋಗದೆ ಸಂಗ್ರಹಣೆಗೊಂಡು ದುರ್ನಾತ ಬೀರುವಂತಾಗಿದೆ.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆಟದ ಮೈದಾನದಲ್ಲಿ ಶಾಶ್ವತ ಕನ್ನಡ ಧ್ವಜ ಕಟ್ಟೆಯನ್ನು ನಿರ್ಮಿಸಲಾಗಿ ಆ ಜಾಗದಲ್ಲಿ ವೇಷ್ಟು ಪೇಪರ ಇನ್ನಿತರ ಉಪಯೋಗಕ್ಕಿಲ್ಲದ ವಸ್ತುಗಳನ್ನು ತಂದು ಹಾಕಿ ಬೆಂಕಿ ಹಾಕುವುದು ಅದು ಅರ್ಧ ಸುಟ್ಟು ಕರಕಲಾದ ಕೆಲವು ಪಕ್ಕದ ಪ್ರಾಥಮಿಕ ಆರೋಗ್ಯ ಕೇಂದ್ರ ಕಡೆ ಹಾರಿ ಹೋಗುವುದು ಹೀಗೆ ಸಂಬಂಧಪಟ್ಟವರ ಬೇಜವಾಬ್ದಾರಿ ತನಕ್ಕೆ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ ವಿಷಾದ ವ್ಯಕ್ತಪಡಿಸಿದ್ದಾರೆ.