ರಿಪ್ಪನ್‌ಪೇಟೆ ಪೊಲೀಸರ ಮಿಂಚಿನ ಕಾರ್ಯಾಚರಣೆ ; ಮನೆ ಕಳ್ಳತನದ ಆರೋಪಿಗಳ ಬಂಧನ

0 47

ರಿಪ್ಪನ್‌ಪೇಟೆ: ಸಮೀಪದ ಗಂದ್ರಳ್ಳಿ ಗೋವಿಂದನಾಯ್ಕ್ ಎಂಬುವವರ ಮನೆಯ ಹೆಂಚು ಕಿತ್ತು ಮನೆಯಲ್ಲಿದ್ದ ಸುಮಾರು 1.50 ಲಕ್ಷ ರೂ. ಹಾಗೂ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣವನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ ಪ್ರಕರಣವನ್ನು ಭೇದಿಸುವ ಮೂಲಕ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ರಿಪ್ಪನ್‌ಪೇಟೆ ಪಿಎಸ್ಐ ಎಸ್.ಪಿ.ಪ್ರವೀಣ್ ಮತ್ತು ಸಿಬ್ಬಂದಿವರ್ಗ ಯಶಸ್ವಿಯಾಗಿದ್ದಾರೆ.


ಇದೇ ತಿಂಗಳು 8 ರಂದು ಅಮೃತ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗಂದ್ರಳ್ಳಿ ಗ್ರಾಮದ ಗೋವಿಂದನಾಯ್ಕ ಎಂಬುವರು ತಮ್ಮ ಸಂಬಂಧಿಕರ ವಿವಾಹ ಕಾರ್ಯಕ್ರಮಕ್ಕ ಮನೆಮಂದಿಯೆಲ್ಲ ಮನೆಗೆ ಬೀಗ ಹಾಕಿ ಹೋಗಿರುವುದನ್ನು ನೋಡಿ ಮನೆಯ ಹಿಂಭಾಗದ ಮಹಡಿ ಹೆಂಚು ಕಿತ್ತು ಮನೆಯೊಳಗೆ ಇಳಿದು ಮನೆಯಲ್ಲಿದ್ದ ನಗದು, ಚಿನ್ನಾಭರಣವನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದ ತಂಡವನ್ನು ಖಚಿತ ಮಾಹಿತಿಯನ್ನಾದರಿಸಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ಪಿಎಸ್‌ಐ ಮತ್ತು ಸಿಬ್ಬಂದಿವರ್ಗ ಪತ್ತೆ ಹಚ್ಚಿ ಕೇವಲ ಹದಿನೈದು ದಿನದೊಳಗೆ ಕಳ್ಳತನದ ಆರೋಪಿಗಳನ್ನು ಪತ್ತೆ ಮಾಡುವುದರೊಂದಿಗೆ ಕಳವು ಮಾಡಲಾದ ಚಿನ್ನಾಭರಣವನ್ನು ವಶಪಡಿಸಿಕೊಳ್ಳುವ ಮೂಲಕ ಜನಸ್ನೇಹಿ ಪೊಲೀಸ್ ಇಲಾಖೆಯೆಂದು ಜನಮೆಚ್ಚುಗಗೆ ಪಾತ್ರರಾಗಿದ್ದಾರೆ.


ಆರೋಪಗಳಾದ ಬಿಳಕಿ ಗ್ರಾಮದ ಕೆ.ಎನ್.ಸುದರ್ಶನ ಬಿನ್ ನಾಗಪ್ಪ (23), ಎಸ್.ಆದರ್ಶ ಬಿನ್ ಸ್ವಾಮಿನಾಯ್ಕ್ (23), ಬಿ.ಕೆ.ಮಧುಸೂದನ್ ಬಿನ್ ಕರಿಯಪ್ಪ (30) ಬಂಧಿಸಿ ಐಪಿಸಿ ಸೆಕ್ಷನ್ 457, 380 ರಡಿಯಲ್ಲಿ ಕೇಸ್ ದಾಖಲಿಸಿದ್ದಾರೆ.


ನ್ಯಾಮತಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ರಿಪ್ಪನ್‌ಪೇಟೆ ಠಾಣೆಗೆ ವರ್ಗಾವಣೆಯಾಗಿ ಬಂದು ಅಧಿಕಾರ ಸ್ವೀಕರಿಸಿ ಒಂದು ವಾರದೊಳಗೆ ಇಲ್ಲಿನ ಪಿಎಸ್‌ಐ ಎಸ್.ಪಿ.ಪ್ರವೀಣ್ ಕಾರ್ಯದಕ್ಷತೆಯನ್ನು ಪ್ರಶಂಸಿಸುವಂತೆ ಮಾಡಿದ್ದಾರೆ.
ಇವರು 17 ವರ್ಷಗಳ ಕಾಲ ಸೈನಿಕರಾಗಿ ದೇಶ ಸೇವೆ ಮಾಡಿ ಈಗ ಪೊಲೀಸ್ ಇಲಾಖೆಯಲ್ಲಿ ಪಿಎಸ್‌ಐ ಅಗಿ ಸೇವೆ ಸಲ್ಲಿಸುತ್ತಾ ಇರುವ ಎಸ್.ಪಿ.ಪ್ರವೀಣ್ ಇವರು ಪೊಲೀಸ್ ವ್ಯವಸ್ಥೆಯಲ್ಲಿ ಬದಲಾವಣೆ ತರುವ ಹಿನ್ನೆಲೆಯಲ್ಲಿ ರಕ್ತದಾನ ಶಿಬಿರ, ವಿದ್ಯಾರ್ಥಿಗಳಿಗೆ ಕಾನೂನು ಅರಿವು ಹಾಗೂ ಪಾರ್ಕಿಂಗ್ ಬಗ್ಗೆ ಜನಜಾಗೃತಿ ಸೇರಿದಂತೆ ಅನೇಕ ಜನಸ್ನೇಹಿ ಕಾರ್ಯಕ್ರಮಗಳನ್ನು ರೂಪಿಸಿ ಜನರ ವಿಶ್ವಾಸ ಗಳಿಸುವತ್ತಾ ಸಾಗಿದ್ದಾರೆ.


ಅರೋಪಿಗಳ ಪತ್ತೆ ಕಾರ್ಯಾಚರಣೆಯಲ್ಲಿ ಕ್ರೇಂ ಸಿಬ್ಬಂದಿಗಳಾದ ಶಿವಕುಮಾರ್, ಉಮೇಶ್, ಚಾಲಕ ಮಧು ಇನ್ನಿತರ ಸಿಬ್ಬಂದಿವರ್ಗ ಪಾಲ್ಗೊಂಡಿದ್ದರು.

Leave A Reply

Your email address will not be published.

error: Content is protected !!