ಎಲ್ಲ ಜಾನುವಾರುಗಳಿಗೆ ಕಾಲುಬಾಯಿ ಲಸಿಕೆ ಹಾಕಿಸಿ : ಡಿಸಿ ಗುರುದತ್ತ ಹೆಗಡೆ

0 168

ಶಿವಮೊಗ್ಗ : ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಏ.1 ರಿಂದ 30 ರವರೆಗೆ ಜಾನುವಾರುಗಳಿಗೆ 5ನೇ ಸುತ್ತಿನ ಕಾಲುಬಾಯಿ ಲಸಿಕಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಎಲ್ಲ ಜಾನುವಾರುಗಳಿಗೆ ಲಸಿಕೆ ಹಾಕುವ ಮೂಲಕ ಶೇ.100 ಪ್ರಗತಿ ಸಾಧಿಸಬೇಕೆಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಾನುವಾರುಗಳಿಗೆ 5ನೇ ಸುತ್ತಿನ ಉಚಿತ ಕಾಲುಬಾಯಿ ಲಸಿಕಾ ಕಾರ್ಯಕ್ರಮ, ಜಿಲ್ಲಾ ಮಟ್ಟದ ಬೀದಿ ನಾಯಿಗಳ ಸಂತಾನ ನಿಯಂತ್ರಣ(ಎಬಿಸಿ) ಹಾಗೂ ಜಿಲ್ಲಾ ಪ್ರಾಣಿ ದಯಾ ಸಂಘದ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರೈತರಿಗೆ ಆರ್ಥಿಕ ಸಂಕಷ್ಟವನ್ನು ತಂದೊಡ್ಡುವ ಕಾಲುಬಾಯಿ ರೋಗವನ್ನು ನಿಯಂತ್ರಿಸಿ ನಿರ್ಮೂಲನೆ ಮಾಡಲು ಪ್ರತಿ 6 ತಿಂಗಳಿಗೊಮ್ಮೆ ಎಲ್ಲ ರೈತರು ಈ ರೋಗದ ವಿರುದ್ದ ಜಾನುವಾರುಗಳಿಗೆ ಕಡ್ಡಾವಾಗಿ ಲಸಿಕೆ ಹಾಕಿಸಬೇಕು ಹಾಗೂ ಪಶು ವೈದ್ಯಾಧಿಕಾರಿಗಳು ಎಲ್ಲ ತಾಲ್ಲೂಕುಗಳಲ್ಲಿ ಮನೆ ಮನೆಗೆ ಭೇಟಿ ನೀಡಿ ಎಮ್ಮೆ ಮತ್ತು ದನಗಳಿಗೆ ಕಾಲುಬಾಯಿ ಲಸಿಕೆಯನ್ನು ಹಾಕಬೇಕು. ಶೇ.100 ರಷ್ಟು ಪ್ರಗತಿ ಸಾಧಿಸಬೇಕು. ಹಾಗೂ ಪ್ರತಿ ದಿನ ಕೇಂದ್ರದ ಭಾರತ್ ಪಶುಧನ್ ಪೋರ್ಟಲ್‍ನಲ್ಲಿ ಪ್ರತಿ ದಿನ ಪ್ರಗತಿಯನ್ನು ನಮೂದಿಸಬೇಕು. ಜೊತೆಗೆ ಲಸಿಕೆ ನೀಡಲು ರೈತರ ಮನೆಗಳಿಗೆ ತೆರಳಿದಾದ ಸರ್ಕಾರದ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಿ ಅವರಲ್ಲಿ ಅರಿವು ಮೂಡಿಸಬೇಕೆಂದರು.

ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ.ಶಿವಯೋಗಿ ಯಲಿ ಮಾತನಾಡಿ, ಜಿಲ್ಲೆಯಲ್ಲಿ 5.40 ಲಕ್ಷ ಜಾನುವಾರುಗಳಿದ್ದು ಶಿವಮೊಗ್ಗ, ಭದ್ರಾವತಿ, ಶಿಕಾರಿಪುರ, ಸಾಗರ ತಾಲ್ಲೂಕುಗಳಲ್ಲಿ ಏ.30 ರೊಳಗೆ ಲಸಿಕೆಯನ್ನು ಶೇ.100 ಸಾಧಿಸಲಾಗುವುದು. ಆದರೆ ತೀರ್ಥಹಳ್ಳಿ ಮತ್ತು ಹೊಸನಗರ ತಾಲ್ಲೂಕುಗಳಲ್ಲಿ ಮನೆಗಳು ದೂರ ದೂರ ಇರುವುದರಿಂದ ಶೇ.100 ಪ್ರಗತಿ ಸಾಧಿಸಲು ಸ್ವಲ್ವ ಹೆಚ್ಚುವರಿ ಸಮಯ ಬೇಕಾಗುತ್ತದೆ. 4ನೇ ಸುತ್ತಿನಲ್ಲಿ ಸಹ ಸ್ವಲ್ಪ ಹೆಚ್ಚುವರಿ ಸಮಯ ಪಡೆಯಲಾಗಿತ್ತು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಪೆಟ್‍ಶಾಪ್, ಪೆಟ್ ಕ್ಲಿನಿಕ್ ಮತ್ತು ಮೆಡಿಕಲ್ ಶಾಪ್ ನಡೆಸಲು ಪರವಾನಗಿಯನ್ನು ಪಡೆಯಬೇಕು. ಈಗಾಗಲೇ ಸಲ್ಲಿಸಲಾಗಿರುವ ಅರ್ಜಿಗಳನ್ನು ಪರಿಶೀಲಿಸಿ, ಸಮರ್ಪಕವಾಗಿದ್ದಲ್ಲಿ ಅನುಮತಿ ನೀಡಬೇಕು. ಅನಧಿಕೃತವಾಗಿರುವ ಶಾಪ್ ಮತ್ತು ವೈದ್ಯರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ಉಪನಿರ್ದೇಶಕರಿಗೆ ಸೂಚನೆ ನೀಡಿದರು.

ಪ್ರತಿ ವರ್ಷ ನಿಯಮಿತವಾಗಿ ಬೀದಿ ನಾಯಿಗಳ ಸಂತಾನ ನಿಯಂತ್ರಣ ಕಾರ್ಯಕ್ರಮವನ್ನು ಅನುಷ್ಟಾನಗೊಳಿಸಬೇಕು. ಎಬಿಸಿ ರೂಲ್ಸ್ 2023 ನಿಯಮಗಳನ್ವಯ ಸ್ಥಳೀಯ ಮಟ್ಟದಲ್ಲಿ ಪ್ರಾಣಿ ಜನನ ನಿಯಂತ್ರಣ ಮತ್ತು ಆಂಟಿ ರೇಬಿಸ್ ಚುಚ್ಚುಮದ್ದು ಮೇಲ್ವಿಚಾರಣೆ ಸಮಿತಿಯನ್ನು ರಚಿಸಬೇಕು ಎಂದು ಸೂಚನೆ ನೀಡಿದರು.

ತಾಲ್ಲೂಕುವಾರು ಪ್ರತಿ ಒಂದು ಅಥವಾ ಎರಡು ತಿಂಗಳಿಗೊಮ್ಮೆ ಶಿಬಿರ ನಡೆಸಿ ನಾಯಿಗಳ ಸಂತಾನ ನಿಯಂತ್ರಣ ಶಸ್ತ್ರಚಿಕಿತ್ಸೆಯನ್ನು ನಿಯಮಾನುಸಾರ ನಿಗದಿಗೊಳಿಸಿದ ಎನ್‍ಜಿಓ ಕಡೆಯಿಂದ ಮಾಡಿಸಿ ವರದಿ ಸಲ್ಲಿಸಬೇಕು. ನಗರದ ಸುತ್ತಮುತ್ತ, ಉಪನಗರ, ಗ್ರಾ.ಪಂ ವ್ಯಾಪ್ತಿಯಲ್ಲಿ ಸಹ ನಾಯಿ ಸಂತಾನ ನಿಯಂತ್ರಣ ಶಸ್ತ್ರಚಿಕಿತ್ಸೆಗಳನ್ನು ಕೈಗೊಳ್ಳಬೇಕು ಎಂದು ಪಶುವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದ ಅವರು ಹೀಗೆ ನಿಯಮಿತವಾಗಿ ಮಾಡಿದಲ್ಲಿ ಬೀದಿ ನಾಯಿಗಳ ನಿಯಂತ್ರಣ ಸಾಧ್ಯವಾಗುತ್ತದೆ ಎಂದರು.

ಸಭೆಯಲ್ಲಿ 5ನೇ ಸುತ್ತಿನ ಉಚಿತ ಕಾಲುಬಾಯಿ ರೋಗ ಲಸಿಕಾ ಅಭಿಯಾನದ ಪೋಸ್ಟರ್ ಅನ್ನು ಜಿಲ್ಲಾಧಿಕಾರಿಗಳು ಮತ್ತು ಇತರೆ ಅಧಿಕಾರಿಗಳು ಬಿಡುಗಡೆಗೊಳಿಸಿದರು.

ಸಭೆಯಲ್ಲಿ ಜಿ.ಪಂ ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ, ಎಎಸ್‍ಪಿ ಅನಿಲ್ ಕುಮಾರ್ ಭೂಮರಡ್ಡಿ, ಡಿಹೆಚ್‍ಓ ಡಾ.ನಟರಾಜ್, ಪಶುಪಾಲನಾ ಇಲಾಖೆಯ ಪಾಲಿಕ್ಲಿನಿಕ್ ಉಪನಿರ್ದೇಶಕರು, ಪಾಲಿಕೆ ಪಶು ವೈದ್ಯಾಧಿಕಾರಿ ಡಾ.ರೇಖಾ, ಡಾ.ಉಮಾದೇವಿ ಎಲ್ಲ ತಾಲ್ಲೂಕುಗಳ ಮುಖ್ಯ ಪಶುವೈದ್ಯಾಧಿಕಾರಿಗಳು, ಮಹಾವೀರ ಗೋಶಾಲೆಯ ಪ್ರಕಾಶ್‍ಚಂದ್ರ ಜೈನ್, ಕಾನೂನು ಸಲಹೆಗಾರರಾದ ಗೀತಾ, ಇತರೆ ಅಧಿಕಾರಿಗಳು ಹಾಜರಿದ್ದರು.

Leave A Reply

Your email address will not be published.

error: Content is protected !!